ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ: ಉಮರ್ ಫಾರೂಕ್ ಫರಂಗಿಪೇಟೆ
ಸುಜೀರ್ ಶಾಲೆಯಲ್ಲಿ ಗಣರಾಜ್ಯೋತ್ಸವ
ಬಂಟ್ವಾಳ, ಜ.26: ಭಾರತೀಯ ಸಂವಿಧಾನವು ವಿಶ್ವದಲ್ಲೇ ತುಂಬಾ ವಿಶೇಷ ಮತ್ತು ವಿಶಿಷ್ಟವಾದ ಸಂವಿಧಾನವಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಹೇಳಿದರು.
ಫರಂಗಿಪೇಟೆ ಮಾರಿಪಳ್ಳ ಸುಜೀರ್ ಪ್ರೌಢ ಶಾಲೆ, ಪುದು ಮಾಪಿಲ ಹಿರಿಯ ಪ್ರಾಥಮಿಕ ಶಾಲೆ ಫರಂಗಿಪೇಟೆ, ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಶಾಲೆ ಫರಂಗಿಪೇಟೆ ಇದರ ವತಿಯಿಂದ ಬುಧವಾರ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಧ್ವಜಾರೋಹಣಗೈದು ಅವರು ಮಾತನಾಡಿದರು.
ನಮ್ಮ ಭವ್ಯ ಭಾರತ ದೇಶದಲ್ಲಿ ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆ ಆಚರಣೆಗಳು ಇದ್ದರೂ ಒಂದೇ ಸಂವಿಧಾನದ ಅಡಿಯಲ್ಲಿ ಉತ್ತಮ ಸಂಸ್ಕೃತಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವಂತಹ ಪರಂಪರೆ ನಮ್ಮ ಭಾರತ ದೇಶದ ವಿಶೇಷ ಎಂದು ಹೇಳಿದರು.
ಭಾರತ ಪ್ರಪಂಚದಲ್ಲಿಯೇ ಬಹು ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಭಾರತೀಯ ಸಂವಿಧಾನವನ್ನು ವಿಶ್ವದ ಅನೇಕ ರಾಷ್ಟ್ರಗಳು ಮಾದರಿಯಾಗಿ ಸ್ವೀಕರಿಸಿದೆ. ರಾಷ್ಟ್ರೀಯ ಹಬ್ಬಗಳು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಪ್ರತಿದಿನವೂ ದೇಶಾಭಿಮಾನ ಇರಬೇಕು ಎಂದರು.
ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ, ಪುದು ಮಾಪಿಲ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಮ್ಲಾನ್ ಕುಂಪನಮಜಲು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಭಾಸ್ಕರ್ ರೈ, ಶಿಕ್ಷಕ ಮುಹಮ್ಮದ್ ತುಂಬೆ, ವಿಜಯ, ಸುಜೀರ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶಶಿ ಮಂಗಲಾ, ಪುದು ಮಾಪಿಲ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಸುನಿತಾ, ಹರ್ಷಿತ, ರೇವತಿ, ಅಫ್ರಿನಾ ಹಾಗೂ ಇತರ ಶಿಕ್ಷಕಿಯರು ಹಾಗೂ ಮೌಲಾನಾ ಅಝಾದ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ವಿಜೇತಾ, ಶಿಕ್ಷಕಿಯರಾದ ಅಶ್ವಿತಾ, ಸಫ್ರಿನಾ, ಶಮ್ನಾ ಹಾಗೂ ಇತರ ಶಿಕ್ಷಕಿಯರು ಉಪಸ್ಥಿತರಿದ್ದರು.
ಶಿಕ್ಷಕ ಜಯಪ್ರಕಾಶ್ ಸ್ವಾಗತಿಸಿ, ವಂದಿಸಿದರು.