ಫೆ.19ರಿಂದ ದ.ಕ. ಜಿಲ್ಲೆಯ ವಿವಿಧ ಇಲಾಖೆಗಳ ಕಡತ ವಿಲೇ ಅಭಿಯಾನ: ಸಚಿವ ಸುನಿಲ್ ಕುಮಾರ್
ಮಂಗಳೂರು, ಫೆ.5: ದ.ಕ. ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಡತ ವಿಲೇ ಆಗದೆ ಬಾಕಿ ಆಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಫೆ. 19ರಿಂದ 28ರವರೆಗೆ ಕಡತ ವಿಲೇ ಅಭಿಯಾನವನ್ನು ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವಾರದ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಇಂದು ಪ್ರೆಸ್ಕ್ಲಬ್ನಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಅಭಿಯಾನ ಗ್ರಾಮ ಪಂಚಾಯತ್ನಿಂದ ಹಿಡಿದು ಜಿಲ್ಲಾ ಮಟ್ಟದ ಕಚೇರಿಯವರೆಗೆ ನಡೆಯಲಿದೆ. ಈಗಾಗಲೇ ಗ್ರಾಪಂ ಅಧಿಕಾರಿಗಳಿಂದ ಜಿಲ್ಲಾಧಿಕಾರಿವರೆಗೂ ಸೂಚನೆ ನೀಡಲಾಗಿದೆ. ಈವರೆಗೆ ಕಡತ ವಿಲೇ ಮಾಡದೆ ಇರಿಸಿಕೊಂಡ ಬಗ್ಗೆ ಚರ್ಚೆ ಮಾಡಲಾಗದು. ಆದರೆ ಮುಂದೆ ಕಡತ ವಿಲೇ ಆಗದೆ ಯಾವ ಅಧಿಕಾರಿಯೂ ತನ್ನಲ್ಲಿ ಕಡತ ಇರಿಸಿಕೊಳ್ಳದಂತೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಉಪಸ್ಥಿತರಿದ್ದರು.
ಫೆ. 11ರಂದು ಕೆಡಿಪಿ ಸಭೆ
ದ.ಕ. ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಫೆ. 11ರಂದು ನಡೆಸಲಾಗುವುದು. ಈ ಬಗ್ಗೆ ಜಿಲ್ಲಾ ಮಟ್ಟದ ಎಲ್ಲಾ ಶಾಸಕರ ಜತೆ ಚರ್ಚಿಸಿ ಜಿಲ್ಲೆಯಲ್ಲಿ ಆಗಬೇಕಾಗಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಲಾಗುವುದು ಎಂದರು.
2004ರಲ್ಲಿ 27ರ ಹರೆಯದಲ್ಲಿ ಶಾಸಕನಾಗಿ ಆಯ್ಕೆಯಾದಾಗ ಕಿರಿಯ ಶಾಸಕನಾಗಿದ್ದು, ಇದೀಗ ಸಚಿವ ಸಂಪುಟದಲ್ಲಿ ಕಿರಿಯ ಸಚಿವ ಎಂಬ ಗೌರವ ದೊರಕಿದೆ. ಪಕ್ಷ ಅವಕಾಶ ನೀಡಿದ್ದು, ಕಾರ್ಯಕರ್ತರ ಪರಿಶ್ರಮ ಇದಕ್ಕೆ ಕಾರಣ. ಅವರ ಧ್ವನಿಯಾಗಿ ಕಾರ್ಯಕ್ರಮ ರೂಪಿಸಿಕೊಂಡು ಮುಂದುವರಿಯುವದಾಗಿ ಸಚಿವ ಸುನಿಲ್ ಕುಮಾರ್ ಅಭಿಪ್ರಾಯಿಸಿದರು.
ಮರಳಿನ ಸಮಸ್ಯೆ ನಿವಾರಣೆ
ಅಕ್ರಮ ಸಾಗಾಟ, ದುಪ್ಪಟ್ಟು ಬೆಲೆಗೆ ಮಾರಾಟ, ಇಲಾಖೆಗಳ ನಡುವೆ ಸಮನ್ವಯದ ಕೊರತೆ ಮೊದಲಾದ ಮರಳಿನ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವ ಸುನಿಲ್ ಕುಮಾರ್, ನನಗೆ ಸಮಯ ಕೊಡಿ ಎಲ್ಲ ಸರಿಮಾಡುತ್ತೇನೆ ಎಂದರು.
ದ.ಕ.ಜಿಲ್ಲೆಯಲ್ಲಿ ಮರಳು ಪೂರೆಕೆಗೆ ಸಂಬಂಧಿಸಿ ಸಮಸ್ಯೆ ಇದೆ. ಜನರ ನಿರೀಕ್ಷೆಗೆ ತಕ್ಕಂತೆ ಸರಬರಾಜು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಅರಿವಿದೆ. ಇದಕ್ಕೆ ಹಸಿರು ನ್ಯಾಯಾಧೀಕರಣ, ನ್ಯಾಯಾಲಯದ ಸಮಸ್ಯೆಯೂ ಇದೆ. ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.
ಸಂವಾದಕ್ಕೆ ಮೊದಲು ಇಂದು ನಿಧನರಾದ ಹಿರಿಯ ಪತ್ರಕರ್ತ ಬಿ.ಟಿ. ರಂಜನ್ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ತುಳು ಭಾಷೆಗೆ ಆದ್ಯತೆ ನೀಡಲು ಬದ್ಧ
ತುಳು ಅಧಿಕೃತ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಲಾಗಿದೆ. ಸದ್ಯ ಈ ಬಗೆಗಿನ ಪ್ರಸ್ತಾವನೆ ಕಾನೂನು ಇಲಾಖೆಯಲ್ಲಿದ್ದು, ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರ ಜತೆ ಮಾತನಾಡಿ ಶೀಘ್ರವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.