ಧರ್ಮಸ್ಥಳ: ಬಜರಂಗದಳ ಮುಖಂಡನಿಂದ ಹಲ್ಲೆ ಆರೋಪ; ದಲಿತ ವ್ಯಕ್ತಿ ಮೃತ್ಯು
ಮೃತ ವ್ಯಕ್ತಿ ದಿನೇಶ್ / ಆರೋಪಿ ಕೃಷ್ಣ
ಬೆಳ್ತಂಗಡಿ: ಬಜರಂಗದಳದ ಮುಖಂಡ, ಬಿಜೆಪಿ ಕಾರ್ಯಕರ್ತ ಕ್ಷುಲ್ಲಕ ಕಾರಣಕ್ಕೆ ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು, ಪರಿಣಾಮ ಹಲ್ಲೆಗೊಳಗಾದ ದಲಿತ ವ್ಯಕ್ತಿ ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಕನ್ಯಾಡಿಯಲ್ಲಿ ಸಂಭವಿಸಿದೆ.
ಕೊಲೆಯಾದ ವ್ಯಕ್ತಿ ದಿನೇಶ್ (41) ಎಂದು ತಿಳಿದು ಬಂದಿದೆ. ಪುತ್ತೂರು ಜಿಲ್ಲಾ ಬಜರಂಗದಳ ಸಹಸಂಚಾಲಕ ಭಾಸ್ಕರ್ ಧರ್ಮಸ್ಥಳ ಎಂಬವರ ಸಹೋದರ ಬಜರಂಗದಳ ಹಾಗೂ ಬಿಜೆಪಿ ಮುಖಂಡ ಕಿಟ್ಟ ಅಲಿಯಾಸ್ ಕೃಷ್ಣ. ಡಿ ಕೊಲೆ ಆರೋಪಿ ಎಂದು ತಿಳಿದು ಬಂದಿದೆ.
ಫೆ.23ರಂದು ಜಾಗದ ದಾಖಲೆಗಳನ್ನು ಮಾಡಿಕೊಟ್ಟಿರುವ ವಿಚಾರಕ್ಕೆ ತಗಾದೆ ತೆಗೆದು ಆರೋಪಿ ಕೃಷ್ಣ, ದಲಿತ ವ್ಯಕ್ತಿ ದಿನೇಶ್ ಅವರಿಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದ್ದು, ಹಲ್ಲೆ ನಡೆಸುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಲ್ಲೆಗೊಳಲಾದ ದಿನೇಶ್ ಬಳಿಕ ತನ್ನ ತಾಯಿ ಬಳಿ ಹಲ್ಲೆ ನಡೆಸಿರುವ ವಿಚಾರವನ್ನು ತಿಳಿಸಿದ್ದು, ನಂತರ ತೀವ್ರ ಹೊಟ್ಟೆ ನೋವಾಗುತ್ತಿರುವುದಾಗಿ ತಾಯಿ ಬಳಿ ಹೇಳಿದ್ದಾರೆ. ಬಡವರಾಗಿರುವ ದಿನೇಶ್ ತಾಯಿ ಪದ್ಮಾವತಿ, "ನೀನು ಹಲ್ಲೆ ಮಾಡಿದ್ದರಿಂದಲೇ ಆತ ಗಾಯಗೊಂಡಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗು" ಎಂದು ಆರೋಪಿ ಕೃಷ್ಣನ ಬಳಿ ಹೇಳಿದ್ದಾರೆ. ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದ್ದಾನೆ ಎಂದು ಸುಳ್ಳು ಹೇಳಿ ದಿನೇಶ್ ಅವರನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಆರೋಪಿ ಕೃಷ್ಣ ದಾಖಲಿಸಿದ್ದಾನೆ ಎಂದು ದಿನೇಶ್ ತಾಯಿ ಧರ್ಮಸ್ಥಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇಂದು ದಿನೇಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಾಳು ಸಾವನ್ನಪ್ಪಿದ ಮಾಹಿತಿ ತಿಳಿದ ಬಳಿಕ ಆರೋಪಿ ಕೃಷ್ಣ ಪರಾರಿಯಾಗಿದ್ದಾನೆ. ಧರ್ಮಸ್ಥಳ ಠಾಣೆಯಲ್ಲಿ ಮೃತ ದಿನೇಶ್ ತಾಯಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.