ಅರಣ್ಯಾಧಿಕಾರಿ ಸಂಧ್ಯಾರ ವರ್ಗಾವಣೆ ಆದೇಶಕ್ಕೆ ತಡೆ
ಸಿಎಂಗೆ ಬೆಳ್ತಂಗಡಿ ಶಾಸಕ ಪತ್ರ ಬರೆದಿದ್ದ ಪ್ರಕರಣ
ಬೆಳ್ತಂಗಡಿ: ಬಹಳಷ್ಟು ವಿವಾದಗಳಿಗೆ ಕಾರಣವಾಗಿದ್ದ ಅರಣ್ಯ ಸಂಚಾರಿ ದಳದ ಉಡುಪಿ ವಲಯದ ಅರಣ್ಯಾಧಿಕಾರಿ ಮಂಗಳೂರಿನಲ್ಲಿ ಪ್ರಭಾರ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದ್ಯಾ ಅವರನ್ನು ಬೀದರಿಗೆ ವರ್ಗಾವಣೆ ಮಾಡಿ ಸರಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿ ಕೆ.ಎ.ಟಿ ಆದೇಶ ಹೊರಡಿಸಿದೆ.
ಸರಕಾರದ ವರ್ಗಾವಣೆ ಆದೇಶದ ವಿರುದ್ದ ಸಂದ್ಯಾ ಅವರು ಕೆ.ಎ.ಟಿ ಗೆ ಅಪೀಲು ಸಲ್ಲಿಸಿದ್ದರು. ಪರಿಶೀಲನೆ ನಡೆಸಿದ ನ್ಯಾಯ ಮಂಡಳಿ ಈ ವರ್ಗಾವಣೆ ರಾಜಕೀಯ ಪ್ರೇರಿತ ವರ್ಗಾವಣೆಯಾಗಿದ್ದು ವರ್ಗಾವಣೆಯಲ್ಲಿ ನೀತಿ ನಿಯಮ ಪಾಲಿಸಿಲ್ಲ ರಾಜಕೀಯ ಹಸ್ತಕ್ಷೇಪ ನಡೆದಿರುವುದು ಕಂಡು ಬರುತ್ತದೆ ಎಂದು ಪರಿಗಣಿಸಿ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ್ದು ಅವರನ್ನು ಹಿಂದೆ ಇದ್ದ ಹುದ್ದೆಗೆ ಮರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸಂದ್ಯಾ ಅವರನ್ನು ಬೀದರಿಗೆ ವರ್ಗಾಯಿಸುವಂತೆ ಶಾಸಕ ಹರೀಶ್ ಪೂಂಜ ಅವರು ಮುಖ್ಯ ಮಂತ್ರಿಯವರಿಗೆ ಬರೆದಿದ್ದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಶಾಸಕರ ಆಪ್ತನ ಅಕ್ರಮ ಮರ ಕಳ್ಳತನ ಪತಗತೆ ಹಚ್ಚಿದ್ದಕ್ಕಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಆರೋಪವೂ ವ್ಯಾಪಕವಾಗಿ ಕೇಳಿ ಬಂದಿತ್ತು.