ಅಹಿತಕರ ಘಟನೆಗಳ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕೆಂದು ಆಗ್ರಹಿಸಿ ದ.ಕ. ಜಿಲ್ಲಾಡಳಿತಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ ಮನವಿ
ಮಂಗಳೂರು, ಮಾ.24: ದ.ಕ.ಜಿಲ್ಲಾದ್ಯಂತ ನಡೆಯುವ ಅಹಿತಕರ ಘಟನೆಗಳ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನಿಯೋಗವು ದ.ಕ.ಜಿಲ್ಲಾಡಳಿತ, ಜಿಲ್ಲಾ ಎಸ್ಪಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಹೈಕೋರ್ಟ್ ತೀರ್ಪಿನ ಬಳಿಕ ಹಿಜಾಬ್ಗೆ ಅನುಮತಿಸಲ್ಪಟ್ಟಿದ್ದ ಕಾಲೇಜುಗಳಲ್ಲಿ ಹಿಜಾಬ್ಧಾರಿಣಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸದೆ ಅವರ ಶೈಕ್ಷಣಿಕ ಭವಿಷ್ಯ ಮೊಟಕುಗೊಳ್ಳುವ ಆತಂಕ ಎದುರಾಗಿದೆ. ವಿಶೇಷವಾಗಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಶಾಲೆಗಳಲ್ಲಿಯೂ ಇಂತಹ ಬೆಳವಣಿಗೆ ಕಂಡು ಬಂದಿದೆ. ಈ ಮಧ್ಯೆ ಜಿಲ್ಲೆಯ ಕೆಲವು ದೇವಸ್ಥಾನಗಳ ಜಾತ್ರೆಗಳಲ್ಲಿ ಪರಂಪರಾಗತವಾಗಿ ಮುಸಲ್ಮಾನರು ವ್ಯಾಪಾರ ನಡೆಸುತ್ತಿದ್ದು, ಇದೀಗ ಅದಕ್ಕೂ ನಿರ್ಬಂಧ ಹೇರಲಾಗುತ್ತಿದೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಮುಖಂಡರು ಹಿರಿಯ ಅಧಿಕಾರಿಗಳ ಗಮನ ಸೆಳೆದರು.
ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ರ ನಿರ್ದೇಶನದಂತೆ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ನೇತೃತ್ವದ ನಿಯೋಗದಲ್ಲಿ ಉಳ್ಳಾಲ ದರ್ಗಾ ಕಮಿಟಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಡಾ. ಮುಹಮ್ಮದ್ ಆರೀಫ್ ಮಸೂದ್, ರಫೀಉುದ್ದೀನ್ ಕುದ್ರೋಳಿ, ವಹಾಬ್ ಕುದ್ರೋಳಿ ಮತ್ತಿತರರಿದ್ದರು.