ದ.ಕ.ಜಿಲ್ಲೆಯಲ್ಲಿ ಮಳೆ, ಮೋಡ ಕವಿದ ವಾತಾವರಣ
ಸಾಂದರ್ಭಿಕ ಚಿತ್ರ
ಮಂಗಳೂರು, ಮಾ.24: ದ.ಕ.ಜಿಲ್ಲೆಯಲ್ಲಿ ವಿವಿಧೆಡೆ ಬುಧವಾರ ತಡರಾತ್ರಿ ಮತ್ತು ಗುರುವಾರ ಸಂಜೆಯ ವೇಳೆಗೆ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು, ಕಡಬ, ಸುಬ್ರಹ್ಮಣ್ಯ, ವಿಟ್ಲದ ಅಳಿಕೆ ಮತ್ತಿತರ ಕಡೆಗಳಲ್ಲಿ ಕೆಲಕಾಲ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಸುಳ್ಯದಲ್ಲಿ ಭಾರಿ ಮಳೆಗೆ ರಸ್ತೆ, ಚರಂಡಿಗಳು ಜಲಾವೃತಗೊಂಡಿತ್ತು.
ಮಂಗಳೂರು, ತೊಕ್ಕೊಟ್ಟು, ದೇರಳಕಟ್ಟೆ, ಉಳ್ಳಾಲ, ಮುಡಿಪು, ಕೊಣಾಜೆ ಮತ್ತಿತರ ಕಡೆಗಳಲ್ಲಿ ಬುಧವಾರ ರಾತ್ರಿ ಮಳೆಯಾಗಿದ್ದರೆ, ಗುರುವಾರ ಸಂಜೆಯ ಬಳಿಕ ದಟ್ಟ ಮೋಡ ಕವಿದ ವಾತಾವರಣವಿತ್ತು.
ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಕರಾವಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಗುಡುಗು ಸಹಿತ ಮಳೆ ಸುರಿಯುವ ಬಗ್ಗೆ ಎಚ್ಚರಿಕೆ ನೀಡಿದೆ.
ಗುರುವಾರದ ಗರಿಷ್ಠ ತಾಪಮಾನ 32.3 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.5 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನವರೆಗೆ ಸುಬ್ರಹ್ಮಣ್ಯದಲ್ಲಿ 3 ಸೆಂ.ಮೀ., ಬೆಳ್ತಂಗಡಿ ಮತ್ತು ಸುಳ್ಯದಲ್ಲಿ 2 ಸೆಂ.ಮೀ. ಮಳೆ ಸುರಿದಿದೆ.