ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್, ಪರಿಶಿಷ್ಟ ಜಾತಿ ಘಟಕ ವತಿಯಿಂದ ಅಂಬೆಡ್ಕರ್ ಜಯಂತಿ
ವಿಟ್ಲ : ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಹಾಗೂ ಪರಿಶಿಷ್ಟ ಜಾತಿ ಘಟಕದ ವತಿಯಿಂದ ಅಂಬೆಡ್ಕರ್ ಜಯಂತಿ ಕಾರ್ಯಕ್ರಮವು ಗುರುವಾರ ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ವಿ.ಮಾತನಾಡಿ ಭಾರತದ ಸಂವಿಧಾನವು ದೇಶದ ಸರ್ಶಶ್ರೇಷ್ಟ ಗ್ರಂಥವಾಗಿದ್ದು ಇದನ್ನು ನೀಡಿದಂತಹ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಾತ್ಯತೀತ ತತ್ವ ಸಿದ್ಧಾಂತಗಳನ್ನು ಹಳ್ಳಿ - ಹಳ್ಳಿಗಳಲ್ಲಿ ಪ್ರಚುರಪಡಿಸುವ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು ಎಂದರು.
ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ದಲಿತ ಸೇವಾ ಸಮಿತಿ ಸಂಸ್ಥಾಪಕ ಸೇಸಪ್ಪ ಬೆದ್ರಕಾಡು ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಭಾರತದ ಸಂವಿಧಾನವನ್ನೇ ತಿರುಚುವಂತಹ ಷಡ್ಯಂತ್ರ ನಡೆಯುತ್ತಿದೆ, ಇದೀಗ ಒಂದು ವಿಭಾಗವನ್ನು ಗುರಿಯಾಗಿಸಿಕೊಂಡು ಪ್ರತ್ಯೇಕಿಸುತ್ತಾ ಬರುತ್ತಿರುವವರು ಮುಂದಿನ ದಿನಗಳಲ್ಲಿ ಇನ್ನೊಬ್ಬರ ಮೇಲೂ ದೌರ್ಜನ್ಯ ಎಸಗಲಿದ್ದಾರೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಸ್ವಾತಂತ್ರ್ಯ ಲಭಿಸಿ ಇಷ್ಷು ವರ್ಷಗಳಾದರೂ ಅಸ್ಪ್ರಶ್ಯತೆ ನಿರ್ಮೂಲನೆ ಇನ್ನೂ ಅಗಿಲ್ಲ, ಇದರ ಬಗ್ಗೆ ಸ್ವಾಮೀಜಿಗಳು ಚಕಾರವೆತ್ತುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದ ಅವರು ಅಸ್ಪ್ರಶ್ಯತೆ ನಿರ್ಮೂಲನೆಗಾಗಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಕೈಗೊಂಡ ದಿಟ್ಟ ನಿರ್ಧಾರವನ್ನು ನೆನಪಿಸಿಕೊಂಡರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಂಬೆಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ, ಮಾಜಿ ಉಪಾಧ್ಯಕ್ಷ ಎಂ.ಎಸ್. ಮುಹಮ್ಮದ್, ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಮಾತನಾಡಿದರು.
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಹಸೈನಾರ್ ನೆಲ್ಲಿಗುಡ್ಡೆ, ಪದ್ಮಕುಮಾರಿ, ಲತಾವೇಣಿ, ಪಕ್ಷ ಪ್ರಮುಖರಾದ ಯು.ಟಿ. ತೌಸೀಫ್, ವಿ.ಎ.ರಶೀದ್ ವಿಟ್ಲ, ಪದ್ಮನಾಭ ಅಳಿಕೆ, ಹನೀಫ್ ಬಗ್ಗುಮೂಲೆ, ನಝೀರ್ ಮಠ, ಅಬ್ದುರ್ರಹ್ಮಾನ್ ಯುನಿಕ್, ಶ್ರೀನಿವಾಸ ಶೆಟ್ಟಿ ಕೊಲ್ಯ, ಮೋಹನ್ ಗುರ್ಜಿನಡ್ಕ, ಕರೀಂ ಕುದ್ದುಪದವು, ಇಬ್ರಾಹಿಂ ಉಪ್ಪಿನಂಗಡಿ, ಎಸ್.ಕೆ. ಮುಹಮ್ಮದ್, ಎಲ್ಯಣ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ ಸ್ವಾಗತಿಸಿ, ವಂದಿಸಿದರು.