ಮಂಗಳೂರು : ಪ್ರಾಧ್ಯಾಪಕಿಯ ಕುರಿತು ಮಾನಹಾನಿಕರ ಪೋಸ್ಟರ್; ಕಾಲೇಜಿನ ಸಂಚಾಲಕ, ಇಬ್ಬರು ಪ್ರಾಧ್ಯಾಪಕರ ಬಂಧನ
ಮಂಗಳೂರು : ಪ್ರಾಧ್ಯಾಪಕಿಯೋರ್ವರ ಕುರಿತು ಮಾನಹಾನಿಕರ ಪತ್ರ ಹಾಗೂ ಪೋಸ್ಟರ್ ತಯಾರಿಸಿ ಕಿರುಕುಳ ನೀಡಿದ ಪ್ರಕರಣದಲ್ಲಿ ಮೂರು ಮಂದಿ ಆರೋಪಿಗಳನ್ನು ಮಂಗಳೂರು ನಗರ ಅಪರಾಧ ಪತ್ತೆದಳ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಖಾಸಗಿ ಶಿಕ್ಷಣ ಸಂಸ್ಥೆಯ ಸಂಚಾಲಕ ಬೆಳ್ತಂಗಡಿಯ ಲಾಯಿಲ ನಿವಾಸಿ ಪ್ರಕಾಶ್ ಶೆಣೈ (44), ಅದೇ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ, ಸಿದ್ಧಕಟ್ಟೆ ನಿವಾಸಿ ಪ್ರದೀಪ್ ಪೂಜಾರಿ (36) ಹಾಗೂ ದೈಹಿಕ ಶಿಕ್ಷಣ ಶಿಕ್ಷಕ, ಹೆಬ್ರಿ ನಾಡ್ಪಾಲು ನಿವಾಸಿ ತಾರಾನಾಥ ಶೆಟ್ಟಿ(32) ಬಂಧಿತ ಆರೋಪಿಗಳು.
ಇವರಿಗೆ ಸಹಕರಿಸಿದ ಇನ್ನೂ ಮೂರು ಮಂದಿಯ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತಮ್ಮದೇ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಆಗಿದ್ದವರ ಬಗ್ಗೆ ಕೀಳು ಮಟ್ಟದ ಭಾಷೆಯಲ್ಲಿ ಹಾಗೂ ಮಾನಹಾನಿಕರವಾಗಿ ಪತ್ರವನ್ನು ಬರೆದು ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ್ಗಳನ್ನು ಅಂಟಿಸಿ ಈ ಆರೋಪಿಗಳು ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಸಂತ್ರಸ್ತೆ ಪ್ರಾಧ್ಯಾಪಕಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದರು.
ಸುಮಾರು 20 ವರ್ಷಗಳಿಂದ ಸಂತ್ರಸ್ತೆ ಬಂಟ್ವಾಳ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು. ಆ ವೇಳೆ ಅಲ್ಲಿನ ಆಡಳಿತ ಮಂಡಳಿ ಕಾರ್ಯದರ್ಶಿ ಮತ್ತು ಕೆಲವು ಸಹೋದ್ಯೋಗಿಗಳ ಕಿರುಕುಳದಿಂದ ಐದು ವರ್ಷ ಹಿಂದೆ ಅಲ್ಲಿಂದ ಮಂಗಳೂರು ರಥಬೀದಿಯ ಪ್ರಥಮ ದರ್ಜೆ ಕಾಲೇಜಿಗೆ ನಿಯೋಜನೆಗೊಂಡಿದ್ದರು. ಆದರೂ ಕಳೆದ ಒಂದು ವರ್ಷದಿಂದೀಚೆಗೆ ಸಂತ್ರಸ್ತೆ ಬಗ್ಗೆ ಅಶ್ಲೀಲ ಬರೆದ ಅನಾಮಧೇಯ ಪತ್ರಗಳು ಪ್ರಾಂಶುಪಾಲರಿಗೆ ಹಾಗೂ ಉಪನ್ಯಾಸಕರಿಗೆ ಬರುತ್ತಿತ್ತು. ಇದನ್ನು ಕಾಲೇಜಿನ ಪ್ರಾಧ್ಯಾಪಕರು ಸಂತ್ರಸ್ತೆಯ ಗಮನಕ್ಕೂ ತಂದಿದ್ದರು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು.
500 ರೂ.ಗೆ ಸಿಗ್ತೀರಾ ಎಂದು ಕರೆ
ಕಳೆದ ಡಿಸೆಂಬರ್ನಿಂದ ಸಂತ್ರಸ್ತೆಗೆ ಅನಾಮಧೇಯ ಪೋಸ್ಟ್ ಕಾರ್ಡ್ಗಳು, ಇನ್ಲೆಂಡ್ ಲೆಟರ್ಗಳು ಬರಲಾರಂಭಿಸಿದವು. ಬಳಿಕ ಫೆಬ್ರವರಿ ತಿಂಗಳಿನಂದ ಮೊಬೈಲ್ ಕರೆಗಳು ಬರತೊಡಗಿದವು. ಶಿವಮೊಗ್ಗ, ಮೂಡಿಗೆರೆ, ಚಿಕ್ಕಮಗಳೂರು, ಮಡಿಕೇರಿ ಹೀಗೆ ನಾನಾ ಕಡೆಗಳಿಂದ ಕರೆ ಮಾಡಿ ನೀವು 500ರೂ.ಗೆ ಸಿಗುತ್ತೀರಂತೆ, ಎಲ್ಲಿ ಸಿಗುತ್ತೀರಿ ಎಂದು ಕೇಳುತ್ತಿದ್ದರು. ದಿನವೂ ರಾತ್ರಿ ಹಗಲೆನ್ನದೆ ಕರೆ ಬರುತ್ತಿದ್ದುದರಿಂದ ತೀವ್ರವಾಗಿ ಮಾನಸಿಕ ಹಿಂಸೆ ಅನುಭವಿಸಿದ ಸಂತ್ರಸ್ತೆ ಫೆಬ್ರವರಿಯಲ್ಲಿ ಪೊಲೀಸ್ ಕಮಿಷನರ್ನ್ನು ಭೇಟಿಯಾಗಿ ಅಹವಾಲು ಸಲ್ಲಿಸಿದ್ದರು.
ಕೆಲವರು ಕರೆ ಮಾಡಿ, ನೀವು ಮತ್ತು ನಿಮ್ಮ ಪುತ್ರಿಯನ್ನು ಅಪಹರಿಸಿ ರೇಪ್ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಇದನ್ನು ಯಾರು ಮಾಡಿಸುತ್ತಾರೆ ಎಂಬ ಮಾಹಿತಿ ಸಿಗುತ್ತಿರಲಿಲ್ಲ, ಅಲ್ಲದೆ ಸೂಕ್ತ ಸಾಕ್ಷಿಯೂ ಇರಲಿಲ್ಲ. ಪೊಲೀಸರು ಸುಬ್ರಹ್ಮಣ್ಯ, ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ, ಸಂಪಾಜೆ ಹೀಗೆ ನಾನಾ ಕಡೆಗಳಲ್ಲಿ ಪರಿಶೀಲನೆ ನಡೆಸಿದಾಗ, ಅಲ್ಲಿನ ಬಸ್ಟೇಂಡ್ ಶೌಚಾಲಯದಲ್ಲಿ ಪೋಸ್ಟರ್ ರೀತಿ ಮಾಡಿ ಕಾಗದ ಪತ್ರಗಳನ್ನು ಅಂಟಿಸಿರುವುದು ಕಂಡುಬಂದಿದೆ. ಅದರಲ್ಲಿ ಸಂತ್ರಸ್ತೆಯ ಮೊಬೈಲ್ ನಂಬರ್ ಹಾಗೂ ಇ-ಮೇಲ್ ಐಡಿ ನಮೂದಿಸಲಾಗಿತ್ತು. ಈ ಮಹಿಳೆಯಿಂದ ಫ್ರೀ ಮಸಾಜ್ಗೆ ಸಂಪರ್ಕಿಸಿ ಎಂದು ಬರೆಯಲಾಗಿತ್ತು. ಇದರಿಂದ ಅಪರಿಚಿತರು ಕರೆ ಮಾಡಿ ಅಶ್ಲೀಲ, ಅಸಭ್ಯವಾಗಿ ಮಾತನಾಡುತ್ತಿದ್ದರು. ಅಲ್ಲದೆ ನಂಬರು ಎಲ್ಲಿ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ಮಾಹಿತಿ ಆಧಾರದಲ್ಲಿ ಪೊಲೀಸರು ಕಳೆದ ಎರಡು ತಿಂಗಳಿಂದ ತನಿಖೆ ಕೈಗೊಂಡಿದ್ದು, ಹಲವಾರು ತಾಂತ್ರಿಕ ಮಾಹಿತಿ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಕ್ಷ್ಯ ಕಲೆ ಹಾಕಿದ ಬಳಿಕವೇ ಮಹಿಳಾ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗುವುದು. ವಿಸ್ತೃತ ತನಿಖೆ ನಂತರವೇ ಈ ಘಟನೆಗೆ ಕಾರಣ ತಿಳಿದುಬರಲಿದೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದರು.
ಈ ನಡುವೆ ಕಾಲೇಜು ಪ್ರಾಂಶುಪಾಲರಿಗೆ, ಉಪನ್ಯಾಸಕರಿಗೆ ಬಂದ ಪತ್ರ, ಅಪರಿಚಿತ ಕರೆ ಮಾಡಿದ ಧ್ವನಿ ಮುದ್ರಣ ಪ್ರತಿಯನ್ನು ಸಂತ್ರಸ್ತೆ ಪೊಲೀಸರಿಗೆ ನೀಡಿದ್ದರು. ಇವೆಲ್ಲ ತಾಂತ್ರಿಕ ಸಾಕ್ಷ್ಯಗಳನ್ನು ಪರಿಗಣಿಸಿ ಮೂವರು ಆರೋಪಿಗಳಿಂದ ಮೊಬೈಲ್, ಕಂಪ್ಯೂಟರ್ ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ ಸಂತ್ರಸ್ತೆಯ ಚಿತ್ರ, ಅಶ್ಲೀಲವಾಗಿ ಬರೆದು ಪೋಸ್ಟ್ ಮಾಡಿದ್ದ ಪತ್ರಗಳು ಪತ್ತೆಯಾಗಿವೆ.
ಆತ್ಮಹತ್ಯೆಗೆ ಮುಂದಾಗಿದ್ದ ದಂಪತಿ
ಕಿರುಕುಳದಿಂದ ತೀವ್ರವಾಗಿ ನೊಂದಿದ್ದ ಸಂತ್ರಸ್ತೆ ಹಾಗೂ ಆಕೆಯ ಪತಿ ಒಂದು ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ದಿನವೂ ಬರುತ್ತಿದ್ದ ಅಪರಿಚಿತ ಕರೆಗಳು, ಸಹೋದ್ಯೋಗಿಗಳಿಂದ ಬರುತ್ತಿದ್ದ ಪತ್ರಗಳಿಂದ ನೊಂದಿದ್ದ ದಂಪತಿ ಪೊಲೀಸರಿಗೆ ದೂರು ನೀಡಿದರೂ ಆರೋಪಿಗಳ ಪತ್ತೆ ಅಸಾಧ್ಯ ಎಂದು ಭಾವಿಸಿದ್ದರು. ದೂರು ನೀಡಿ ಎರಡು ತಿಂಗಳಾದರೂ ಏನೂ ಪ್ರಗತಿ ಕಂಡಿಲ್ಲ ಎಂದು ಹತಾಶೆಗೊಂಡಿದ್ದರು. ಆದರೆ ಪೊಲೀಸರು ನಿಗೂಢವಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿಸಿಪಿ ಹರಿರಾಂ ಶಂಕರ್, ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಸೆನ್ ಇನ್ಸ್ಪೆಕ್ಟರ್ ಸತೀಶ್ ಇದ್ದರು.
ಸಹೊದ್ಯೋಗಿ ವಿದ್ಯಾವಂತರೇ ಆರೋಪಿಗಳಾಗಿರುವುದು ನನಗೆ ದು:ಖ ತಂದಿದೆ
ನನ್ನ ಜತೆಗಿದ್ದೇ, ವಿದ್ಯಾವಂತರೇ ಇದೀಗ ಆರೋಪಿಗಳಾಗಿ ನನಗೆ ಇಷ್ಟೊಂದು ಮಾನಸಿಕ ಹಿಂಸೆ ನೀಡಿರುವುದೆಂಬ ಬಗ್ಗೆ ನನಗೆ ನಿಜಕ್ಕೂ ದು:ಖ ಇದೆ ಎಂದು ಸಂತ್ರಸ್ತೆ ನೋವು ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವರ್ಷದಿಂದೀಚೆಗೆ ಅನಾಮಧೇಯ ಪತ್ರಗಳು ಬರಲಾರಂಭಿಸಿತ್ತು. ಫೆಬ್ರವರಿ 8ರಿಂದ ಫೋನ್ ಕರೆಗಳು ಬರಲಾರಂಭಿಸಿದವು. ಸುಮಾರು 800ಕ್ಕೂ ಅಧಿಕ ಅಪರಿಚಿತ ಕರೆಗಳು ಬಂದಿವೆ. ಆಗ ಆನ್ಲೈನ್ ತರಗತಿ ಇದ್ದುದರಿಂದ ತರಗತಿ ಮಾಡುವುದು ಕಷ್ಟವಾಗಿತ್ತು. ಮೊಬೈಲ್ ಬದಿಗಿಟ್ಟು ತರಗತಿ ನಡೆಸಲು ಸಾಧ್ಯವಿರಲಿಲ್ಲ. ಕೆಲವರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದು, ಕುಟುಂಬ ಮುಗಿಸುವುದಾಗಿ ಹೇಳುತ್ತಿದ್ದರು. ಇದರಿಂದಾಗಿ ಪೊಲೀಸ್ ಕಮಿಷನರ್ ಬಳಿಗೆ ತೆರಳಿ ತಮಗೆ ಆಗುತ್ತಿರುವ ಕಿರುಕುಳ ಬಗ್ಗೆ ಹೇಳಿದೆವು. ಕೊನೆಗೂ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಪೊಲೀಸ್ ಕಮಿಷನರ್ ಧೈರ್ಯ ಹೇಳಿ ಈಗ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ನಗರದ ಪೊಲೀಸ್ ತಂಡದ ಕಾರ್ಯದಿಂದ ನಮಗೆ ಮರು ಜನ್ಮ ಬಂದಂತಾಗಿದೆ. ಅವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದು ಸಂತ್ರಸ್ತೆ ಹೇಳಿದರು.
ಕಳೆದ ಸುಮಾರು ಒಂದು ವರ್ಷದಿಂದ ಮಾನಸಿಕವಾಗಿ ನಾನು ಹಾಗೂ ನನ್ನ ಕುಟುಂಬ ಸಾಕಷ್ಟು ನೋವು ಅನುಭವಿಸಿದ್ದೇವೆ. ಒಂದು ರೀತಿಯಲ್ಲಿ ಕೆಂಡದ ಮೇಲಿನ ಬದುಕು ನನ್ನದಾಗಿತ್ತು. ನಾನು ಈಗ ಕೆಲಸ ಮಾಡುತ್ತಿರುವ ಕಾಲೇಜಿನ ಪ್ರಾಧ್ಯಾಪಕರು, ಸಹದ್ಯೋಗಿಗಳು ನನ್ನಲ್ಲಿ ಧೈರ್ಯ ತುಂಬಿದ ಕಾರಣ ನಾನು ಈ ಎಲ್ಲಾ ಹಿಂಸೆಯನ್ನು ಎದುರಿಸಲು ಸಾಧ್ಯವಾಯಿತು.
ಈ ಹಿಂದೆ ಸಹೋದ್ಯೋಗಿಗಳಾಗಿದ್ದವರು ಆರೋಪಿಗಳಾಗಿ ಪತ್ತೆಯಾಗಿದ್ದಾರೆ. ನಾನು ಎಂಟು ಪುಸ್ತಕ ಬರೆದಿದ್ದು, ಮೂರು ರಾಜ್ಯ ಮಟ್ಟದ ಪ್ರಶಸ್ತಿ ಪಡೆದಿದ್ದೇನೆ. 31 ವರ್ಷದಿಂದ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನನಗೀಗ 58 ವರ್ಷ. ಈ ಪ್ರಾಯದಲ್ಲಿ ನನಗೆ ಕಿರುಕುಳ ನೀಡಿದ್ದಾರೆ, ಅವರನ್ನು ಹಾಗೆಯೇ ಬಿಡಬಾರದು, ಅವರು ಯಾಕಾಗಿ ಕಿರುಕುಳ ನೀಡಿದ್ದಾರೆ ಎಂಬುದು ಗೊತ್ತಾಗಿಲ್ಲ. ನಾನು ಕನ್ನಡ ಅಧ್ಯಯನ ಮಂಡಳಿ ಸದಸ್ಯೆಯಾಗಿದ್ದು, ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಇರುವುದನ್ನು ಸಹಿಸಲಾಗದೆ ಈ ರೀತಿ ಮಾಡಿರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.