ಸುರತ್ಕಲ್ ನಲ್ಲಿ ಸರಣಿ ಅಪಘಾತ; ಟ್ರಕ್ ಚಾಲಕನ ಬಂಧನ
ಘಟನಾ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ
ಸುರತ್ಕಲ್, ಜೂ.2: ಟ್ರಕ್ ವೊಂದು ಸರಣಿ ಅಪಘಾತ ನಡೆಸಿ ಪರಾರಿಯಾಗಿದ್ದು, ಸಾರ್ವಜನಿಕರ ಸಹಾಯದಿಂದ ಟ್ರಕ್ ಚಾಲಕನನ್ನು ಬಂಧಿಸಿರುವ ಘಟನೆ ಬುಧವಾರ ರಾತ್ರಿ ವರದಿಯಾಗಿದೆ.
ಬಂಧಿತನನ್ನು ಕೈಲಾಶ್ ಪಾಟೀಲ್ (42) ಬಂಧಿತ ಆರೋಪಿಯಾಗಿದ್ದು, ಲಾರಿಯಲ್ಲಿದ್ದ ಕ್ಲೀನರ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ ರಾತ್ರಿ ಟ್ರಕ್ ವೊಂದು ಸುರತ್ಕಲ್ ಜಂಕ್ಷನ್ನಲ್ಲಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಬಳಿಕ ಸುರತ್ಕಲ್ ರೈಲ್ವೆ ಸೇತುವೆ ಬಳಿ ಆಟೋ ರಿಕ್ಷಾಕ್ಕೂ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಆಟೋ ರಿಕ್ಷಾ ಜಖಂಗೊಂಡಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಎರಡು ಅಪಘಾತಕ್ಕೆ ಮುನ್ನ ಬೈಕಂಪಾಡಿಯಲ್ಲಿ ಕಾರೊಂದಕ್ಕೂ ಈ ಟ್ರಕ್ ಢಿಕ್ಕಿ ಹೊಡೆದು ಪರಾರಿಯಾಗಿತ್ತು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಧಾವಿಸಿದ ಮಂಗಳೂರು ಉತ್ತರ ಸಂಚಾರ ಪೊಲೀಸರು ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿ ರಿಕ್ಷಾ ಚಾಲಕರ ಸಹಕಾರದಿಂದ ಲಾರಿ ಮತ್ತು ಚಾಲಕ ಕೈಲಾಶ್ ಪಾಟೀಲ್ ನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಲಕ ಮದ್ಯಪಾನ ಮಾಡಿ ಲಾರಿ ಚಲಾಯಿಸಿದ್ದರಿಂದ ಈ ಅಪಘಾತಗಳು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.