‘ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ ಮಂಗಳೂರು-ಉಳ್ಳಾಲಕ್ಕೆ ರ್ಯಾಲಿ
ಮಂಗಳೂರು : ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರವು ದ.ಕ. ಜಿಲ್ಲಾಡಳಿತ, ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ವಿವಿ, ರಾಷ್ಟ್ರೀಯ ಸೇವಾ ಯೋಜನೆ, ಯೆನಪೊಯ ವಿವಿ. ಎನ್ಸಿಸಿ ೧೮ ಕೆಎಆರ್ ಬಿ.ಆರ್., ಮಂಗಳೂರು ಸೈಕಲಿಂಗ್ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಬೈಸಿಕಲ್ ದಿನ’ವನ್ನು ಶುಕ್ರವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ದ.ಕ.ಜಿಲ್ಲಾಧಿಕಾರಿ ಕಚೇರಿಯಿಂದ ಹಮ್ಮಿಕೊಂಡ ಬೈಸಿಕಲ್ ರ್ಯಾಲಿಗೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಚಾಲನೆ ನೀಡಿದರು. ಮಂಗಳಾದೇವಿ-ಮೋರ್ಗನ್ಗೇಟ್-ಜಪ್ಪಿನಮೊಗರು-ತೊಕ್ಕೊಟ್ಟು-ಮಾಸ್ತಿಕಟ್ಟೆ-ಉಳ್ಳಾಲ ರಾಣಿ ಅಬ್ಬಕ್ಕ ವೃತ್ತದಲ್ಲಿ ರ್ಯಾಲಿ ಸಮಾಪನಗೊಂಡಿತ್ತು.
ದ.ಕ.ಜಿಪಂ ಉಪ ಕಾರ್ಯದರ್ಶಿ ಆನಂದ ಕುಮಾರ್, ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ಅಶ್ವಿನಿ ಶೆಟ್ಟಿ, ನೆಹರೂ ಯುವ ಕೇಂದ್ರದ ಜಗದೀಶ ಕೆ., ಮಂಗಳೂರು ಸೈಕಲಿಂಗ್ ಕ್ಲಬ್ನ ಅಧ್ಯಕ್ಷ ಅನಿಲ್ ಶೇಟ್, ಕೊಣಾಜೆಯ ಮಂಗಳ ಗ್ರಾಮೀಣ ಯುವಕ ಮಂಡಲದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.
ಉಳ್ಳಾಲ ನಗರ ಸಭೆಯ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಪೌರಾಯುಕ್ತ ರಾಯಪ್ಪ ಮಾತನಾಡಿದರು. ಈ ಸಂದರ್ಭ ೭ ವರ್ಷದಲ್ಲಿ ೧ ಲಕ್ಷ ಕಿ.ಮೀ. ಸೈಕಲ್ ಸವಾರಿ ಮಾಡಿದ ಸೈಕಲಿಂಗ್ ಕ್ಲಬ್ನ ಅಧ್ಯಕ್ಷ ಅನಿಲ್ ಶೇಟ್ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಚಿತ್ರಕಲಾ, ಡಾ.ನಾಗರತ್ನ ಕೆ.ಎ. ಮತ್ತಿತರರು ಪಾಲ್ಗೊಂಡಿದ್ದರು. ಲೋಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.