ಸಾಲೆತ್ತೂರು; ಬಜರಂಗದಳದ ಇತ್ತಂಡಗಳ ನಡುವೆ ಮಾರಾಮಾರಿ: ಇಬ್ಬರಿಗೆ ಗಾಯ
ಸಾಂದರ್ಭಿಕ ಚಿತ್ರ
ಬಂಟ್ವಾಳ, ಜೂ.19: ಬಜರಂಗದಳದ ಇತ್ತಂಡಗಳ ನಡುವೆ ಮಾರಾಮಾರಿ ನಡೆದು ಮಾರಕಾಯುದ್ಧ ದಾಳಿಗೆ ಇಬ್ಬರು ಗಾಯಗೊಂಡಿರುವ ಘಟನೆ ಸಾಲೆತ್ತೂರಿನ ಅಗರಿಯಲ್ಲಿ ರವಿವಾರ ರಾತ್ರಿ ನಡೆದಿದೆ.
ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಚಂದ್ರಹಾಸ ಕನ್ಯಾನ ಮತ್ತು ಸುರತ್ಕಲ್ ಕೃಷ್ಣಾಪುರ ನಿವಾಸಿ ಪ್ರಶಾಂತ್ ಎಂಬವರಿಗೆ ಗಾಯಗಳಾಗಿದೆ.
ಅಡ್ಯನಡ್ಕ ನಿವಾಸಿ ಗಿರೀಶ್, ಪ್ರಶಾಂತ್ ಸುರತ್ಕಲ್ ಸೇರಿ ಸುಮಾರು 12 ಜನರ ತಂಡ ಸಾಲೆತ್ತೂರಿನಲ್ಲಿ ಬಂದು ನಾಗೇಶ್ ಸಾಲೆತ್ತೂರು ಅವರಲ್ಲಿ ಚಂದ್ರಹಾಸ ಕನ್ಯಾನ ಜತೆಗೆ ಸೇರಬಾರದೆಂದು ಹೇಳಿದ್ದು, ಬಳಿಕ ಬೈಠಕ್ ಹೋಗುವ ನಿಟ್ಟಿನಲ್ಲಿ ಚಂದ್ರಹಾಸ ಕನ್ಯಾನ ನಾಗೇಶ್ ಸಾಲೆತ್ತೂರು ಅವರ ಮನೆಗೆ ಬರುತ್ತಿದ್ದ ಸಮಯ ಈ ದಾಳಿ ನಡೆದಿದೆ ಎಂದು ದೂರಲಾಗಿದೆ.
ಚಂದ್ರಹಾಸ ಕನ್ಯಾನ ಅವರ ತಲೆಗೆ ಗಾಯವಾಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಶಾಂತ್ ಸುರತ್ಕರ್ ಬೆನ್ನಿಗೆ ಏಟಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಾರಾಮಾರಿಗೆ ತಂಡಗಳ ನಡುವಿನ ದ್ವೇಷ ಕಾರಣ ಎಂದು ಹೇಳಲಾಗುತ್ತಿದೆಯಾದರೂ, ಹಣದ ವಿಚಾರದಲ್ಲಿ ಈ ದಾಳಿ ನಡೆದಿದೆ ಎಂಬ ಮಾಹಿತಿಯಿದೆ.
ಈ ಬಗ್ಗೆ ವಿಟ್ಲ ಠಾಣೆ ಪೊಲೀಸರಿಂದ ತನಿಖೆ ನಡೆಯುತ್ತಿದೆ.