ಕಿನ್ನಿಗೋಳಿ: ಪತ್ನಿ, ಮಕ್ಕಳನ್ನು ಬಾವಿಗೆಸೆದು ತಾನು ಆತ್ಮಹತ್ಯೆಗೆ ಯತ್ನ; ಮೂರು ಮಕ್ಕಳು ಮೃತ್ಯು
ರಶ್ಮಿತಾ, ಉದಯ, ದಕ್ಷ
ಮುಲ್ಕಿ: ಕಿನ್ನಿಗೋಳಿ ಸಮೀಪದ ಹೊಸಕಾವೇರಿ ಬಳಿ ಪತ್ನಿ ಮತ್ತು ಮೂವರು ಮಕ್ಕಳನ್ನು ಬಾವಿಗೆಸೆದು ತಾನು ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ನಡೆದಿದ್ದು ಬಾವಿಗೆ ಬಿದ್ದ ಮಕ್ಕಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕಿನ್ನಿಗೋಳಿ ಸಮೀಪದ ಹೊಸಕಾವೇರಿ ಶೆಟ್ಟಿಕಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ (46) ಎಂಬಾತ ಮೊದಲು ತನ್ನ ಮಕ್ಕಳಾದ ರಶ್ಮಿತಾ,(13) ಉದಯ (11), ದಕ್ಷ(4) ಎಂಬವರನ್ನು ಬಾವಿಗೆಸೆದು ಬಳಿಕ ಪತ್ನಿ ಲಕ್ಷ್ಮಿ(38) ಎಂಬವರನ್ನು ಬಾವಿಯೊಳಗೆ ದೂಡಿ ನಂತರ ತಾನು ಆತ್ಮಹತ್ಯೆಗೆ ಯತ್ನಿಸಿ ಬಾವಿಗೆ ಹಾರಿದ್ದಾನೆ.
ಈ ಸಂದರ್ಭ ಸ್ಥಳದಲ್ಲಿ ಮಕ್ಕಳ ಬೊಬ್ಬೆ ಕೇಳಿ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಹೊಸಕಾವೇರಿ ಬಳಿ ಹೂವಿನ ಮಾರಾಟ ಮಾಡುತ್ತಿದ್ದ ನಾಸಿರ್ ಎಂಬವರು ಜೀವದ ಹಂಗು ತೊರೆದು ಬಾವಿಗೆ ಇಳಿದು ದಂಪತಿ ಹಾಗೂ ಮಕ್ಕಳನ್ನು ರಕ್ಷಿಸಲು ಯತ್ನಿಸಿದ್ದಾರೆ.
ಈ ಸಂದರ್ಭ ಮಹಿಳೆ ಮತ್ತು ಮಕ್ಕಳನ್ನು ಬಾವಿಗೆ ದೂಡಿದ ಹಿತೇಶ್ ಶೆಟ್ಟಿಗಾರ ಕೂಡ ಮೇಲೆ ಬಂದಿದ್ದಾರೆ. ಬಳಿಕ ಬಾವಿಗೆ ಮೇಲಿನಿಂದ ಬಂದ ಮಹಿಳೆಯ ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿದ್ದು ಮಕ್ಕಳು ಬಾವಿಯೊಳಗೆ ಇದ್ದ ಮಾಹಿತಿ ತಿಳಿದು ಕೂಡಲೇ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಮಕ್ಕಳಲ್ಲಿ ರಶ್ಮಿತಾ ಕಟೀಲು ಶಾಲೆಗೆ ಎಂಟನೇ ತರಗತಿ ಈ ಬಾರಿ ಸೇರಿದ್ದು, ಉದಯ ಪುನರೂರು ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದು, ದಕ್ಷತ್ ಪದ್ಮನೂರು ಅಂಗನವಾಡಿ ಶಾಲೆಗೆ ಹೋಗುತ್ತಿದ್ದರು ಎನ್ನಲಾಗಿದೆ.
ಪತ್ನಿ ಮತ್ತು ಮಕ್ಕಳನ್ನು ಬಾವಿಗೆ ದೂಡಿದ ಆರೋಪಿ ಹಿತೇಶ್ ಶೆಟ್ಟಿಗಾರ್ ಎಂಆರ್ಪಿಎಲ್ ನಲ್ಲಿ ಕ್ಯಾಂಟೀನ್ ಕೆಲಸಕ್ಕಿದ್ದು ಅಲ್ಲಿಂದ ಬಿಟ್ಟು ಬಂದು ಕಳೆದ ಕೆಲ ತಿಂಗಳ ಹಿಂದೆ ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿಯ ಹೊಸ ಕಾವೇರಿ ಬಳಿ ಬ್ಯಾಂಕಿನಲ್ಲಿ ಸಾಲ ಮಾಡಿ ಸಿಯಾಳ ಮತ್ತು ಹೂವಿನ ಅಂಗಡಿ ನಡೆಸುತ್ತಿದ್ದು ಆರ್ಥಿಕ ಮುಗ್ಗಟ್ಟಿನಿಂದ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ.
ಸ್ಥಳಕ್ಕೆ ಮಂಗಳೂರು ಡಿಸಿಪಿ ಹರಿರಾಮ್ ಶಂಕರ್, ಎಸಿಪಿ ಮಹೇಶ್ ಕುಮಾರ್, ಮುಲ್ಕಿ ಇನ್ ಸ್ಪೆಕ್ಟರ್ ಕುಸು ಮೋಧರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹಿತೇಶ್ ಶೆಟ್ಟಿಗಾರ್