ಭಾರಿ ಗಾಳಿ, ಮಳೆ; ಕಾರ್ಕಳ ತಾಲೂಕಿನ ವಿವಿಧೆಡೆ ಹಾನಿ
ಕಾರ್ಕಳ : ತಾಲೂಕಿನಾದ್ಯಂತ ಬೀಸಿದ ಗಾಳಿ ಮಳೆಗೆ ವಿವಿಧೆಡೆ ಹಾನಿಯುಂಟಾಗಿದೆ. ಬುಧವಾರ ಕಾರ್ಕಳ ನಗರ ಎಸ್ವಿಟಿ ಸರ್ಕಲ್ ಬಳಿಯ ಮರ ಅಂಗಡಿ ಮೇಲೆ ಬಿದ್ದು ಅಪಾರ ಹಾನಿಯಾಗಿದೆ. ಪಾರ್ಕಿಂಗ್ ಮಾಡಲಾದ ಆಟೋ ರಿಕ್ಷಾ, ಬ್ಯಾಗ್ ಅಂಗಡಿ, ವಡಾ ಪಾವ್ ಅಂಗಡಿ ಮೇಲೆ ಮರ ಉರುಳಿ ಬಿದ್ದಿದೆ. ಕೂಡಲೇ ಅರಣ್ಯ ಇಲಾಖೆ, ತಾಲೂಕು ಕಚೇರಿ ಸಿಬ್ಬಂದಿ, ಸ್ಥಳೀಯರು ಆಗಮಿಸಿ ಮರ ತೆರವುಗೊಳಿಸಿರುತ್ತಾರೆ.
ಬೆಳ್ಮಣ್ ಗ್ರಾಮದ ಬೈಲುಮನೆ ನಿವಾಸಿ ಅಪ್ಪಿ ಮೊಯ್ಲಿ ಅವರ ಮನೆಯ ಮೇಲೆ ಬುಧವಾರ ತೆಂಗಿನ ಮರ ಬಿದ್ದು ರೂ. 20 ಸಾವಿರ ನಷ್ಟವಾಗಿದೆ. ನಲ್ಲೂರು ಗ್ರಾಮದ ಕುದುರು ಮನೆಯ ಗಂಗು ಅವರ ಮನೆಯ ಹಂಚು ಮತ್ತು ಮರದ ಪಕ್ಕಾಸು ಹಾನಿಯಾಗಿದ್ದು 20 ಸಾವಿರ ರೂ. ನಷ್ಟವುಂಟಾಗಿದೆ.
ಹಿರ್ಗಾನ ಗ್ರಾಮದ ಲೋಲಾಕ್ಷಿ ಎಂಬವರ ವಾಸ್ತವ್ಯದ ಮನೆಯ ಮೇಲೆ ಮರ ಬಿದ್ದು ಅಂದಾಜು 15 ಸಾವಿರ ರೂ. ನಷ್ಟ ಸಂಭವಿದೆ. ಮಂಗಳವಾರ ಮುಂಡ್ಕೂರು ಪ್ರದೇಶದಲ್ಲಿ ಬೀಸಿದ ಗಾಳಿಗೆ ಶಿವರಾಮ ಬಂಗೇರ ಮನೆಯ ಮೇಲೆ ಮರ ಬಿದ್ದಿದೆ. ಪರಿಣಾಮ 35 ಸಾವಿರ ರೂ. ನಷ್ಟ ಸಂಭವಿಸಿದೆ. ಯರ್ಲಪಾಡಿಯ ನೇಮು ಅವರ ಮನೆಯ ಗೋಡೆ ಕುಸಿದು ರೂ. 10 ಸಾವಿರ ನಷ್ಟವುಂಟಾಗಿದೆ.