ಫಾಝಿಲ್ ಕೊಲೆ ಆರೋಪಿಗಳಿಗೆ ಠಾಣೆಯಲ್ಲಿ ರಾಜಾತಿಥ್ಯ ನೀಡಿಲ್ಲ: ಎನ್. ಶಶಿಕುಮಾರ್
ಮಂಗಳೂರು, ಆ.9: ಮುಹಮ್ಮದ್ ಫಾಝಿಲ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಸುರತ್ಕಲ್ ಠಾಣೆಯಲ್ಲಿ ವಿಶೇಷ ಆತಿಥ್ಯ ನೀಡಲಾಗಿಲ್ಲ. ಈ ಬಗ್ಗೆ ಸುರತ್ಕಲ್ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇನೆ. ಆ ರೀತಿ ಯಾವುದೇ ಆರೋಪಿಗೆ ಠಾಣೆಯಲ್ಲಿ ವಿಶೇಷ ಆತಿಥ್ಯ ನೀಡಿಲ್ಲ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಎನ್. ಶಶಿಕುಮಾರ್, ಈ ಬಗ್ಗೆ ಕೆಲವು ಪ್ರಮುಖರು ನೀಡಿರುವ ಹೇಳಿಕೆಗಳನ್ನು ಗಮನಿಸಿದ್ದೇನೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳನ್ನು ನಿಯಮಾನುಸಾರವೇ ವ್ಯವಹರಿಸಲಾಗಿದೆ. ಯಾವ ಆಧಾರದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆಂದು ಗೊತ್ತಾಗಿಲ್ಲ ಎಂದರು.
ಇದನ್ನೂ ಓದಿ: ಬಿಹಾರ ರಾಜಕೀಯ ಬಿಕ್ಕಟ್ಟು: ತೇಜಸ್ವಿ ಯಾದವ್ರೊಂದಿಗೆ ರಾಜ್ಯಪಾಲರನ್ನು ಭೇಟಿಯಾಗಲಿರುವ ನಿತೀಶ್ ಕುಮಾರ್
ನಾನು ಸೋಮವಾರ ಬೆಳಗ್ಗೆಯೂ ಮುಹಮ್ಮದ್ ಫಾಝಿಲ್ ಮನೆ ಬಳಿ ಹೋಗಿದ್ದೆ. ಈ ವೇಳೆ ಅಲ್ಲಿ ಮಾತನಾಡಲು ಗಂಡಸರು ಯಾರೂ ಇರಲಿಲ್ಲ. ಅವರ ಕುಟುಂಬದ ಬಹುತೇಕ ಸದಸ್ಯರಲ್ಲಿ ನನ್ನ ಹಾಗೂ ಹಿರಿಯ ಅಧಿಕಾರಿಗಳ ಮೊಬೈಲ್ ನಂಬರ್ಗಳಿವೆ. ಹಾಗಾಗಿ ಇಂತಹ ಆಧಾರರಹಿತ ಹೇಳಿಕೆ ನೀಡುವ ಬದಲು, ಅಂತಹದ್ದೇನಾದರೂ ಇದ್ದಲ್ಲಿ ನಮ್ಮ ಗಮನಕ್ಕೆ ತರಬಹುದು. ಮುಹಮ್ಮದ್ ಫಾಝಿಲ್ ಕೊಲೆ ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವ ಪ್ರಕರಣವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳನ್ನು ರಾಜಾರೋಷವಾಗಿ ತಿರುಗಾಡಲು ಬಿಡುವ ಪ್ರಮೇಯವೇ ಇಲ್ಲ ಎಂದು ಕಮಿಷನರ್ ಹೇಳಿದರು.
ಮುಹಮ್ಮದ್ ಫಾಝಿಲ್ ಹತ್ಯೆಗೆ ಸಂಬಂಧಿಸಿ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿರುವ ಅವರಿಂದ ಹತ್ಯೆಗೆ ಕಾರಣ ಸೇರಿದಂತೆ ಇತರ ವಿಷಯ ಬಗ್ಗೆ ತನಿಖೆ ಮುಂದುವರಿದಿದೆ. ಪಂಚನಾಮೆ, ಸಾಕ್ಷಗಳ ಸಂಗ್ರಹ, ಈ ಪ್ರಕರಣದಲ್ಲಿ ಆರೋಪಿಗಳು ಇನ್ನೂ ಎರಡು ಹೆಚ್ಚುವರಿ ವಾಹನಗಳನ್ನು ಬಳಸಿರುವುದು ತಿಳಿದು ಬಂದಿದ್ದು, ಅವುಗಳನ್ನು ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.