ಆ.14ರಂದು ‘ಮಣ್ಣು ಉಳಿಸಿ’ ಜನಜಾಗೃತಿ ಸೈಕಲ್ ಜಾಥಾ
ಸಾಂದರ್ಭಿಕ ಚಿತ್ರ
ಮಂಗಳೂರು, ಆ.12: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮದ ಅಂಗವಾಗಿ ‘ಮಣ್ಣು ಉಳಿಸಿ’ ಜನ ಜಾಗೃತಿ ಸೈಕಲ್ ಜಾಥಾ ಆ.14ರಂದು ಮಂಗಳೂರಿನಲ್ಲಿ ಜರುಗಲಿದೆ.
ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಮತ್ತು ಕದ್ರಿಯ ಜೋಯಿಸ ಫಿಟ್ನೆಸ್ ಕ್ಲಬ್ ಜಂಟಿ ಆಶ್ರಯದಲ್ಲಿ ರೆಡ್ಕ್ರಾಸ್ ಸಂಸ್ಥೆ, ವಿನಯ ಕೃಷಿ ಬೆಳೆಗಾರರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಯುವ ಈ ಸೈಕಲ್ ಜಾಥಾ ಮಂಗಳಾ ಕ್ರೀಡಾಂಗಣದಿಂದ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ. ಲೇಡಿಹಿಲ್, ಪಿವಿಎಸ್, ಜ್ಯೋತಿ, ಬೆಂದೂರ್ವೆಲ್, ಕಂಕನಾಡಿ, ಮೋರ್ಗನ್ಸ್ಗೇಟ್, ಮಂಗಳಾದೇವಿ ಸರ್ಕಲ್, ಮಂಗಳಾದೇವಿ ದೇವಸ್ಥಾನ, ಸಿಟಿ ಸೆಂಟರ್, ನವಭಾರತ್ ಸರ್ಕಲ್, ಪಿವಿಎಸ್, ಲಾಲ್ಭಾಗ್ ಮಾರ್ಗವಾಗಿ ಮಂಗಳ ಕ್ರೀಡಾಂಗಣದವರೆಗೆ ಒಟ್ಟು ಸುಮಾರು 12 ಕಿ.ಮೀ. ಸೈಕಲ್ ಜಾಥಾ ನಡೆಯಲಿದೆ ಎಂದು ವಿನಯ ಕೃಷಿ ಬೆಳೆಗಾರರ ಸಂಘದ ನಿರ್ದೇಶಕ ಡಾ. ಅಣ್ಣಯ್ಯ ಕುಲಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜಾಥಾ ಸಂಯೋಜಕ ಸಂತೋಷ್ ಶೆಟ್ಟಿ, ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ನ ಅಧ್ಯಕ್ಷೆ ಸುಮಿತ್ರಾ ವಿ. ಶೆಟ್ಟಿ, ಕದ್ರಿ ಜೋಯಿಸ ಫಿಟ್ನೆಸ್ ಕ್ಲಬ್ನ ರಾಜೇಶ್ ಜೋಯಿಸ, ಮಂಗಳೂರು ಸೈಕ್ಲಿಂಗ್ ಕ್ಲಬ್ನ ಅನಿಲ್ ಶೇಟ್, ವಿನಯ ಕೃಷಿ ಬೆಳೆಗಾರರ ಸಂಘದ ವಿಜಯ್ ಶೆಟ್ಟಿ, ಚಂದ್ರಹಾಸ ಕುಂದರ್ ಉಪಸ್ಥಿತರಿದ್ದರು.