ಮಂಗಳೂರಿನ ವಿವಿಧ ಸಮಸ್ಯೆಗಳ ಚಿತ್ರೀಕರಣ; ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ
ಇಂಜಿನಿಯರ್ ಆಶಿತ್ ರಸ್ತೆ ಅಪಘಾತಕ್ಕೆ ಬಲಿಯಾದ ಸ್ಥಳದಲ್ಲೇ ಕಾರ್ಯಕ್ರಮ ಆಯೋಜನೆ
ಮಂಗಳೂರು, ಆ.15: ಸಾಮಾಜಿಕ ಕಾರ್ಯಕರ್ತರ ಬಳಗವು ನಗರದ ವಿವಿಧ ಸಮಸ್ಯೆಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವವರಿಗೆ ಆಯೋಜಿಸಿರುವ ವಿಶಿಷ್ಟ ಸ್ಪರ್ಧೆಯ ವಿಜೇತರಿಗೆ ಸೋಮವಾರ ಬಹುಮಾನ ವಿತರಿಸಲಾಯಿತು.
ಇಂಜಿನಿಯರ್ ಆಶಿತ್ ಇತ್ತೀಚೆಗೆ ರಸ್ತೆ ಗುಂಡಿಯಿಂದಾಗಿ ಮೃತಪಟ್ಟ ಬಿಕರ್ನಕಟ್ಟೆಯ ಬಳಿ ನಡೆದ ಕಾರ್ಯಕ್ರಮದಲ್ಲಿ ಜಿ.ಕೆ. ಭಟ್ಟ (ಮೊದಲ ಬಹುಮಾನ-5000 ರೂ.). ದಿಕ್ಷೀತ್ ಅತ್ತಾವರ (ದ್ವಿತೀಯ ಬಹುಮಾನ-2500 ರೂ), ಅನ್ಸಾರುದ್ದೀನ್ ಸಾಲ್ಮರ ಮತ್ತು ಯೋಗೀಶ್ ನಾಯಕ್ ಹಾಗೂ ಸಂಜನಾ ಭಟ್ (ಸಮಾಧಾನಕರ ಬಹುಮಾನ-ತಲಾ 1000 ರೂ) ಬಹುಮಾನ ಸ್ವೀಕರಿಸಿದರು.
ನಗರದ ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಗಮನ ಸೆಳೆದಿರುವ ಸಾಮಾಜಿಕ ಕಾರ್ಯಕರ್ತರ ಬಳಗದ ಪ್ರಮುಖರು ಮತ್ತು ಸಾಮಾಜಿಕ ಹೋರಾಟಗಾರರಾದ ಎಂ.ಜಿ. ಹೆಗಡೆ, ಜೆರಾಲ್ಡ್ ಟವರ್ ಕದ್ರಿ, ಸುನಿಲ್ ಬಜಿಲಕೇರಿ, ಪ್ರಸನ್ನ ರವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.