ಬೆಳ್ತಂಗಡಿ | ಕಾರಿನಲ್ಲಿ ಹಿಂಸಾತ್ಮಕವಾಗಿ ದನ ಸಾಗಾಟ: ಮೂವರು ಆರೋಪಿಗಳ ಬಂಧನ
ಬೆಳ್ತಂಗಡಿ, ಆ.18: ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂತ್ರಾಯ ಪಲ್ಕೆ ಎಂಬಲ್ಲಿ ಅಕ್ರಮವಾಗಿ ಕಾರೊಂದರಲ್ಲಿ ಹಿಂಸಾತ್ಮಕ ರೀತಿಯಲ್ಲಿ ದನ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. (Arrest)
ನಾಗೇಶ್ ಶೆಟ್ಟಿ, ರಝಾಕ್ ಪಿ. ಹಾಗೂ ಮುಹಮ್ಮದ್ ರಫೀಕ್ ಬಂಧಿತ ಆರೋಪಿಗಳಾಗಿದ್ದಾರೆ. ಕಾರು ಚಾಲಕ ರವೂಫ್ ಎಂಬಾತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮುಂಜಾನೆ ಅಂತ್ರಾಯಪಲ್ಕೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಇದು ಬೆಳಕಿಗೆ ಬಂದಿದೆ. ಮಾರುತಿ ಕಾರೊಂದನ್ನು ಪರಿಶೀಲಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಕ್ವಾಲಿಸ್ ಕಾರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಮಾರುತಿ ಕಾರು ಚಾಲಕ ಪರಾರಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಎರಡೂ ಕಾರುಗಳನ್ನು ಪರಿಶೀಲಿಸಿದಾಗ ಕ್ವಾಲಿಸ್ ಕಾರಿನಲ್ಲಿ ಎರಡು ದನ ಹಾಗೂ ಒಂದು ಕರುವನ್ನು ಕೈಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದು ಕಂಡುಬಂದಿದೆ. ದನಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದರು ಎಂಬುದು ಸ್ಪಷ್ಟವಾಗಿದ್ದು, ಕಾರಿನಲ್ಲಿದ್ದ ಮೂವರನ್ನೂ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಬೂಲ್ ಮಸೀದಿಯಲ್ಲಿ ಸ್ಫೋಟ; ಹಲವು ಮಂದಿ ಮೃತಪಟ್ಟಿರುವ ಶಂಕೆ
55 ಸಾವಿರ ರೂ. ಮೌಲ್ಯದ ಎರಡು ಜಾನುವಾರು ಸಹಿತ ಎರಡು ಕಾರುಗಳನ್ನೂ ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.