ಶಾಲೆಗಳಲ್ಲಿ ಹಿಜಾಬ್ ಗೆ ಇರುವ ನಿರ್ಬಂಧ ಗಣೇಶ ಪ್ರತಿಷ್ಠಾಪನೆಗೆ ಯಾಕಿಲ್ಲ: ದ.ಕ.ಜಿಲ್ಲಾ ಎಸ್ಕೆಎಸೆಸ್ಸೆಫ್ ಪ್ರಶ್ನೆ
Photo: skssfkannur.in
ಮಂಗಳೂರು, ಆ.18: ಸರಕಾರಿ ಶಾಲೆಗಲ್ಲಿ ಗಣೇಶ ಪ್ರತಿಷ್ಠಾಪನೆಗೆ ಮುಕ್ತ ಅವಕಾಶ ಎಂಬ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಹೇಳಿಕೆಯು ಮಕ್ಕಳನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರವಾಗಿದೆ ಎಂದು ದ.ಕ.ಜಿಲ್ಲಾ ಎಸ್ಕೆಎಸೆಸ್ಸೆಫ್ (ವೆಸ್ಟ್) ಅಧ್ಯಕ್ಷ ಸೈಯದ್ ಅಮೀರ್ ತಂಙಳ್ ಆರೋಪಿಸಿದ್ದಾರೆ.
ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಚಿಹ್ನೆಗಳನ್ನು ಬಳಸುವಂತಿಲ್ಲ ಎಂದು ಹೇಳಿ ಹಿಜಾಬ್ ನಿಷೇಧಿಸಿದ್ದ ಸರಕಾರವು ಇದೀಗ ಹೊರಡಿಸಿರುವ ಆದೇಶದಿಂದಾಗಿ ಸರಕಾರದ ಪಕ್ಷಪಾತಿ ಧೋರಣೆಯು ವ್ಯಕ್ತವಾಗಿದೆ. ರಾಜಧರ್ಮ ಪಾಲಿಸಬೇಕಾದವರು ಈ ರೀತಿಯ ದ್ವಂದ್ವ ನಿಲುವುಗಳೊಂದಿಗೆ ಸಮಾಜವನ್ನು ಜಾತಿ ಆಧಾರದಲ್ಲಿ ವಿಭಜಿಸುತ್ತಿರುವುದು ಖಂಡನೀಯ. ಸರಕಾರದ ಈ ಆದೇಶವು ಸಂವಿಧಾನ ಮತ್ತು ನ್ಯಾಯಾಲಯದ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಧಾರ್ಮಿಕತೆಯ ನೆಪದಲ್ಲಿ ಹಿಜಾಬ್ಗೆ ನಿಷೇಧ ಹೇರಿದ್ದ ಸರಕಾರವು ಗಣೇಶ ಪ್ರತಿಷ್ಠಾಪನೆಯಂತಹ ಧಾರ್ಮಿಕ ಆಚರಣೆಗೆ ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸರಕಾರ ಈ ಬಗ್ಗೆ ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.