ಅಜ್ಜಾವರ: ವಿವಾದಿತ ಜಾಗದಲ್ಲಿ ಪಾರ್ಕಿಂಗ್ಗಾಗಿ ಅಗೆದ ವಿಚಾರಕ್ಕೆ ಆಕ್ಷೇಪ; ಯಥಾಸ್ಥಿತಿ ಕಾಪಾಡಲು ಸೂಚನೆ
ಸುಳ್ಯ: ವಿವಾದಿತ ಜಾಗದಲ್ಲಿ ಪಾರ್ಕಿಂಗ್ಗಾಗಿ ಅಗೆದ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತವಾದ ಹಾಗೂ ಘಟನಾ ಸ್ಥಳಕ್ಕೆ ಪೊಲೀಸರು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಯಥಾಸ್ಥಿತಿ ಕಾಪಾಡಲು ಸೂಚಿಸಿರುವ ಘಟನೆ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದಲ್ಲಿ ಗುರುವಾರ ನಡೆದಿದೆ.
ಮೇನಾಲದ ದರ್ಗಾ ಸಮೀಪವಿರುವ ವಿವಾದಿತ ಜಾಗದಲ್ಲಿದ್ದ ತಾತ್ಕಾಲಿಕ ತಡೆಗೋಡೆಯನ್ನು ವಾಹನ ಪಾರ್ಕಿಂಗ್ಗಾಗಿ ಮೇನಾಲದ ಕೃಷ್ಣಜನ್ಮಾಷ್ಠಮಿ ಸಮಿತಿಯವರು ಜೇಸಿಬಿಯಲ್ಲಿ ಅಗೆದರು ಎನ್ನಲಾಗಿದೆ. ಈ ವಿಚಾರಕ್ಕೆ ದರ್ಗಾದವರು ಆಕ್ಷೇಪಿಸಿದ್ದಾರೆ. ಘಟನಾ ಸ್ಥಳದಲ್ಲಿ ಎರಡು ಕಡೆಯ ಜನರು ಜಮಾಯಿಸಲು ಆರಂಭಿಸಿದ್ದು, ವಿಷಯ ತಿಳಿದ ಸುಳ್ಯ ಎಸೈ ದಿಲೀಪ್ ಕುಮಾರ್ ನೇತೃತ್ವದ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಮಾತುಕತೆ ನಡೆಸಿದರು.
ಘಟನಾ ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ ನೇತೃತ್ವದ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದು, ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ವಿನಂತಿಸಿದರು. ಸದ್ಯ ವಿವಾದಿತ ಜಾಗದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದರು.