ಕೆವಿಜಿ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಡಾ.ಎನ್.ಎ.ಜ್ಞಾನೇಶ್ರಿಂದ ಸುಳ್ಯ ನಗರ ರಸ್ತೆಯ ಹೊಂಡಕ್ಕೆ ತೇಪೆ
ಸುಳ್ಯ: ಜನರ ಸಂಚಾರಕ್ಕೆ ತೀವ್ರ ತೊಂದರೆ ಆಗಿರುವ ರಸ್ತೆಯಲ್ಲಿರುವ ಹೊಂಡಗಳನ್ನು ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಡಾ.ಎನ್.ಎ.ಜ್ಞಾನೇಶ್ ಅವರ ನೇತೃತ್ವದಲ್ಲಿ ತೇಪೆ ಹಾಕಲಾಗಿದೆ.
ಸುಳ್ಯ ನಗರ ಶ್ರೀರಾಂ ಪೇಟೆಯಲ್ಲಿ ಜ್ಯೂನಿಯರ್ ಕಾಲೇಜು ಕ್ರಾಸ್ ರಸ್ತೆಯಲ್ಲಿ ಮತ್ತು ರಥ ಬೀದಿಯಲ್ಲಿ ನಿರ್ಮಾಣವಾದ ಹೊಂಡಕ್ಕೆ ಸಿಮೆಂಟ್ ಜಲ್ಲಿ ಮಿಕ್ಸ್ ಹಾಕಿ ಹೊಂಡ ತುಂಬಿ ತೇಪೆ ಹಾಕಲಾಗಿದೆ.
ಶ್ರೀರಾಂಪೇಟೆ ರಸ್ತೆಯಲ್ಲಿ ನಿರ್ಮಾಣವಾದ ಹೊಂಡದ ಬಗ್ಗೆ ಆರ್ಜೆ ತ್ರಿಶೂಲ್ ಅವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿ ನಗರ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹಾಗು ತ್ರಿಶೂಲ್ ಮಧ್ಯೆ ವಿವಾದ ಸೃಷ್ಟಿಯಾಗಿ ಪ್ರಕಟಣ ಪೊಲೀಸ್ ಠಾಣೆಯ ಮೆಟ್ಟಿಲು ಏರಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹೊಂಡ ಸೃಷ್ಠಿಯಾಗಿ ಸುಮಾರು ಒಂದೂವರೆ ತಿಂಗಳಿನಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದ್ದರೂ, ಭಾರೀ ಚರ್ಚೆ ವಿವಾದ ಉಂಟಾದರೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಾಗಲೀ ನಗರ ಪಂಚಾಯಿತಿ ಆಗಲೀ ರಸ್ತೆಯ ಗುಂಡಿಯನ್ನು ಮುಚ್ಚಿಸುವ ಗೋಜಿಗೆ ಹೋಗಿರಲಿಲ್ಲ.
ಶನಿವಾರ ಜ್ಞಾನೇಶ್ ಅವರು ತಮ್ಮ ಕೆಲಸದವರೊಂದಿಗೆ ವಿವಿಧ ಕಡೆಗಳಲ್ಲಿರುವ ಹೊಂಡಗಳನ್ನು ಸಿಮೆಂಟ್ ಜಲ್ಲಿ ಮಿಕ್ಸ್ ಹಾಕಿ ಮುಚ್ಚಿಸಿದ್ದಾರೆ. ಜ್ಞಾನೇಶ್ ಅವರ ಕೆಲಸಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.