ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆ; ಬಂಗ್ರಕೂಳೂರಿನ ಟೆಂಟ್ ನಿವಾಸಿಗಳ ಎತ್ತಂಗಡಿ
►9 ಕುಟುಂಬಗಳ 30ಕ್ಕೂ ಅಧಿಕ ಅಲೆಮಾರಿಗಳು ಬೀದಿಪಾಲು ►ಪರ್ಯಾಯ ವ್ಯವಸ್ಥೆ ಕಲ್ಪಿಸದ ಬಗ್ಗೆ ತೀವ್ರ ಆಕ್ರೋಶ
ಮಂಗಳೂರು, ಆ.28: ನಗರ ಹೊರವಲಯದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಸೆ.2ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಬಂಗ್ರ ಕೂಳೂರಿನ ಗುರುದ್ವಾರದಲ್ಲಿ ಟೆಂಟ್ ಹಾಕಿ ವಾಸಿಸುತ್ತಿದ್ದ ಅಲೆಮಾರಿಗಳನ್ನು ಆಡಳಿತ ವ್ಯವಸ್ಥೆಯು ಬೀದಿಪಾಲು ಮಾಡಿವೆ ಎಂಬ ಆರೋಪ ಕೇಳಿ ಬಂದಿವೆ.
ಶನಿವಾರ ರಾತ್ರಿ ಮತ್ತು ರವಿವಾರ ಬೆಳಗ್ಗೆ ಪೊಲೀಸರು ಬಂಗ್ರಕೂಳೂರು ಪ್ರದೇಶಕ್ಕೆ ತೆರಳಿ ಅಲ್ಲಿ ಟೆಂಟ್ ಹಾಕಿ ಬದುಕು ಸಾಗಿಸುತ್ತಿದ್ದ 9 ಕುಟುಂಬಗಳನ್ನು ಎತ್ತಂಗಡಿ ಮಾಡಿವೆ ಎನ್ನಲಾಗಿದೆ. ಇದರಿಂದ ಸುಮಾರು 30ಕ್ಕೂ ಅಧಿಕ ಮಂದಿ ಬೀದಿಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಭದ್ರತೆಯ ನೆಪವೊಡ್ಡಿ ಬಸವ ಆಡಿಸುವ ಬಡಪಾಯಿಗಳನ್ನು ನಿರಾಶ್ರಿತರನ್ನಾಗಿ ಮಾಡಲಾಗಿದೆ. ಈ ಬಗ್ಗೆ ನಾವು ಸಂಸದರು, ಶಾಸಕರು, ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದೇವೆ. ಆದರೆ ಈವರೆಗೆ ಅವರಿಂದ ಸ್ಪಂದನೆ ಸಿಕ್ಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಿಂದ ಸುಮಾರು 1 ಕಿಮೀ. ದೂರದಲ್ಲಿರುವ ಗುರುದ್ವಾರದ ಬಳಿ ಬಸವ ಆಡಿಸುವ 9 ಕುಟುಂಬಗಳ 30ಕ್ಕೂ ಅಧಿಕ ಮಂದಿ ಕಳೆದ 8-9 ವರ್ಷದಿಂದ ಟೆಂಟ್ ಹಾಕಿ ವಾಸಿಸುತ್ತಿದ್ದರು. ಇದೀಗ ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಈ ಟೆಂಟ್ಗಳನ್ನು ತೆರವುಗೊಳಿಸಿ ಈ ಕುಟುಂಬದ ಸದಸ್ಯರನ್ನು ಆಡಳಿತ ವ್ಯವಸ್ಥೆಯು ನಿರಾಶ್ರಿತರನ್ನಾಗಿಸಿದೆ ಎಂಬ ಆರೋಪ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿಯ ಭೇಟಿಯ ಪ್ರಯುಕ್ತ ಮುಂಜಾಗರೂಕತಾ ಕ್ರಮವಾಗಿ ಕಾರ್ಯಕ್ರಮ ನಡೆಯುವ ಪರಿಸರದಲ್ಲಿ ನಿಗಾ ಇಡಬೇಕಾದ ಕಾರಣ ಸೆಪ್ಟಂಬರ್ 2ರವರೆಗೆ ಸಂಬಂಧಪಟ್ಟ ಕಟ್ಟಡದಲ್ಲಿ ಯಾವುದೇ ಚಟುವಟಿಕೆ ಸ್ಥಗಿತಗೊಳಿಸಲು ಈ ಮೂಲಕ ಕೋರಲಾಗಿದೆ ಎಂದು ಕಾವೂರು ಠಾಣೆಯ ಇನ್ಸ್ಪೆಕ್ಟರ್ರ ಸಹಿಯುಳ್ಳ ಪೊಲೀಸ್ ನೋಟಿಸೊಂದು ಗುರುದ್ವಾರದ ಬಳಿಯ ಜೋಪಡಿ ನಿವಾಸಿಗಳಿಗೆ ನೀಡಲಾಗಿದೆ. ಆದರೆ ಈ ಜೋಪಡಿ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಜಿಲ್ಲಾಡಳಿತ, ಮನಪಾ ಅನ್ಯಾಯ ಎಸಗಿದೆ ಎಂದು ಆರೋಪಿಸಲಾಗಿದೆ.
‘ನಿನ್ನೆ ರಾತ್ರಿ ಮತ್ತು ಈವತ್ತು ಬೆಳಗ್ಗೆ ಪೋಲೀಸರು ಬಂದು ಬೆತ್ತ ತೋರಿಸಿ ಬೇಗ ತೆರವುಗೊಳಿಸಬೇಕು ಎಂದು ಏರಿದ ಧ್ವನಿಯಲ್ಲಿ ಹೇಳಿದ್ದಾರೆ. ಇಲ್ಲದಿದ್ದರೆ ನಿಮ್ಮನ್ನೆಲ್ಲ 15 ದಿನಗಳ ಕಾಲ ಬಂಧನದಲ್ಲಿಡಲಾಗುವುದು ಎಂದು ಬೆದರಿಸಿದ್ದಾರೆ. ಪ್ರಧಾನಿ ಬರುವಾಗ ನಿಮ್ಮ ಶೆಡ್ಗಳು ಅವರಿಗೆ ಕಾಣಿಸಬಾರದು. ಬೇಗನೇ ಟೆಂಟುಗಳನ್ನು ತೆರವುಗೊಳಿಸಿ ಎನ್ನುತ್ತಾ ಒತ್ತಾಯ ಪೂರ್ವಕವಾಗಿ ನಮ್ಮ ಟೆಂಟ್ಗಳನ್ನೆಲ್ಲಾ ಬಿಚ್ಚಿಸಿದ್ದಾರೆ’ ಎಂದು ಬೀದಿಪಾಲಾದ ಅಲೆಮಾರಿಗಳು ಆರೋಪಿಸಿದ್ದಾರೆ.
‘ನಾವು ಮೂಲತಃ ಆಂಧ್ರಪ್ರದೇಶ ಮೂಲದವರು. ಕಳೆದ 8-9 ವರ್ಷದಿಂದ ಇಲ್ಲಿ ಟೆಂಟ್ ಹಾಕಿಸಿಕೊಂಡು ಬದುಕು ಸಾಗಿಸುತ್ತಿದ್ದೆವು. ನಮ್ಮಲ್ಲಿ ಬಾಣಂತಿಯರಲ್ಲದೆ ಸಣ್ಣ ಮಕ್ಕಳು ಕೂಡಾ ಇದ್ದಾರೆ. ಏಕಾಎಕಿ ನಮ್ಮನ್ನು ಇಲ್ಲಿಂದ ಎಬ್ಬಿಸಿದ್ದಾರೆ. ಬೇರೆ ವ್ಯವಸ್ಥೆಯನ್ನೂ ಮಾಡಿಲ್ಲ. ಹಾಗಾಗಿ ನಾವೀಗ ಬೀದಿ ಪಾಲಾಗಿದ್ದೇವೆ. ನಮ್ಮ ಮನೆ ಸಾಮಗ್ರಿಗಳನ್ನಿಡಲು ಸ್ಥಳೀಯ ವ್ಯಕ್ತಿಯೊಬ್ಬರು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ನಮಗೆ ಇನ್ನೂ ಉಳಕೊಳ್ಳಲು ವ್ಯವಸ್ಥೆ ಆಗಿಲ್ಲ ಎಂದು ಮೀರೇಶ್ ಎಂಬವರು ಅಲವತ್ತುಕೊಂಡಿದ್ದಾರೆ.