ಮದ್ರಸಗಳು ಶಾಂತಿ, ಭಾತೃತ್ವ ಕಲಿಸುವ ಕೇಂದ್ರ: ಜಂಇಯತುಲ್ ಖುತ್ಬಾ ಅಭಿಮತ
ಮಾಣಿ, ಸೆ.6: ಎಳೆಯದರಲ್ಲೇ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ಕಲಿಸಿ ಗುರು, ಹಿರಿಯರು, ಧರ್ಮ, ದೇವರ ಬಗ್ಗೆ ಗೌರವ ಮೂಡಿಸಿ ಸತ್ಪ್ರಜೆಗಳಾಗಿ ರೂಪಿಸುವುದೇ ಮದ್ರಸಗಳ ಉದ್ದೇಶವಾಗಿದೆ. ಶಾಂತಿ, ಭಾತೃತ್ವ, ಸಮಾನತೆಯ ಸಂದೇಶಗಳನ್ನೇ ಕಲಿಸಲಾಗುತ್ತದೆ. ಇಂತಹ ಕೇಂದ್ರಗಳ ವಿರುದ್ಧ ಅಪಪ್ರಚಾರ ಎಸಗುತ್ತಿರುವುದು ಖಂಡನೀಯ. ಈ ನಿಟ್ಟಿನಲ್ಲಿ ಪ್ರತೀ ಮೊಹಲ್ಲಾಗಳು ಎಚ್ಚೆತ್ತುಕೊಂಡು ಉಪಕ್ರಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಜಂಇಯ್ಯತುಲ್ ಖುತ್ಬಾ ದ.ಕ.ಜಿಲ್ಲಾ ಸಮಿತಿ ಕರೆ ನೀಡಿದೆ.
ಜಿಲ್ಲಾಧ್ಯಕ್ಷ ಎಸ್ಬಿ ದಾರಿಮಿ ಉಪ್ಪಿನಂಗಡಿಯ ಅಧ್ಯಕ್ಷತೆಯಲ್ಲಿ ನೇರಳಕಟ್ಟೆಯ ಸಮಸ್ತ ಮಹಲ್ನಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಯಿತು.
ಮಾದಕ ದ್ರವ್ಯಗಳಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಮೊಹಲ್ಲಾಗಳನ್ನು ಕೇಂದ್ರೀಕರಿಸಿ ತ್ರೈಮಾಸಿಕ ಜಾಗೃತಿ ಆಂದೋಲನ ನಡೆಸಲು ತೀರ್ಮಾನಿಸಲಾಯಿತು. ಸಭೆಯನ್ನು ಕಡಬ ಇಬ್ರಾಹಿಂ ದಾರಿಮಿ ಉದ್ಘಾಟಿಸಿದರು. ಸಂಪ್ಯ ಹಮೀದ್ ದಾರಿಮಿ ದುಆಗೈದರು. ಕಾರ್ಯದರ್ಶಿ ರಶೀದ್ ರಹ್ಮಾನಿ ಸ್ವಾಗತಿಸಿದರು. ರಶೀದ್ ಯಮಾನಿ ವಂದಿಸಿದರು. ಅಬ್ಬಾಸ್ ದಾರಿಮಿ ಕೆಲಿಂಜ, ರಿಯಾಝ್ ರಹ್ಮಾನಿ, ತಾಜುದ್ದೀನ್ ರಹ್ಮಾನಿ, ಶಂಸುದ್ದೀನ್ ದಾರಿಮಿ, ನಝೀರ್ ಅಝ್ಹರಿ, ಶಂಸುಧ್ಧೀನ್ ಅಶ್ರಫಿ, ಇಬ್ರಾಹಿಂ ಮುಸ್ಲಿಯಾರ್ ಸಿ.ಎಚ್. ಉಪಸ್ಥಿತರಿದ್ದರು.