ಜಾತ್ಯತೀತತೆ, ಬಹುತ್ವ, ಸಾಮಾಜಿಕ ನ್ಯಾಯವು ಸಂವಿಧಾನದ ಆಶಯ: ನ್ಯಾ.ನಾಗಮೋಹನ ದಾಸ್
ಮದರ್ ತೆರೇಸಾ 25ನೇ ಸಂಸ್ಮರಣಾ ಕಾರ್ಯಕ್ರಮ
ಮಂಗಳೂರು, ಸೆ.9; ಬಹುತ್ವ, ಜಾತ್ಯತೀತತೆ, ಸಾಮಾಜಿಕ ನ್ಯಾಯ, ಕಲ್ಯಾಣ ರಾಜ್ಯ ಪ್ರಜಾಪ್ರಭುತ್ವವು ಭಾರತದ ಸಂವಿಧಾನದ ಮೂಲ ಆಶಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಎಚ್.ಎನ್.ನಾಗಮೋಹನದಾಸ್ ತಿಳಿಸಿದ್ದಾರೆ.
ಅವರು ಇಂದು ನಗರದ ಕುದ್ಮುಲ್ ರಂಗರಾವ್ ವೇದಿಕೆ ಯಲ್ಲಿ ಸಂತ ಮದರ್ ತೆರೇಸಾರವರ 25ನೆ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಈ ಮೌಲ್ಯ ಗಳಿಗೆ ಧಕ್ಕೆ ಯಾಗುವ ಘಟನೆಗಳು ಈ ದೇಶದಲ್ಲಿ ನಡೆಯುತ್ತದೆ. ಬದುಕಿಗೆ ಅಗತ್ಯ ವಾದ ವಿಷಯಗಳ ಬಗ್ಗೆ ಹೆಚ್ಚು ಚರ್ಚೆಗಳಾಗದೆ ಭಾವನಾತ್ಮಕ ವಿಚಾರಗಳ ಬಗ್ಗೆ ಚರ್ಚೆ ಯಾಗುತ್ತಿದೆ. ಧರ್ಮದಲ್ಲಿ ಪ್ರಜಾ ಪ್ರಭುತ್ವದ ಮೌಲ್ಯ ಇಲ್ಲದೆ ಇದ್ದಾಗ ಮೂಲಭೂತವಾದ ಬೆಳೆಯುತ್ತದೆ. ಧರ್ಮದ ಜೊತೆ ರಾಜಕಾರಣ ಬೆರೆತು ಕೊಂಡಾಗ ಕೋಮುವಾದ ಬೆಳೆಯುತ್ತದೆ. ಇದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಸಂವಿಧಾನದಲ್ಲಿ ಪ್ರಸ್ತಾಪಿಸಲಾದ ಜಾತ್ಯತೀತ ಪದವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ನಾಗಮೋಹನ ದಾಸ್ ಹೇಳಿದ್ದಾರೆ.
ಮದರ್ ತೆರೆಸಾ ಮನುಕುಲದ ಸೇವೆಗಾಗಿ ತಮ್ಮ ಸಮಸ್ತ ಬದುಕನ್ನು ಮುಡಿಪಾಗಿಟ್ಟವರು. ಇತರರ ನೋವುಗಳಿಗೆ, ಕಷ್ಟಗಳಿಗೆ ಸ್ಪಂದಿಸುತ್ತಾ ಇತರರಿಗಾಗಿಯೇ ಬದುಕುವವರು ಸತ್ತರೂ ನಮ್ಮ ಜೊತೆ ಬದುಕಿರುತ್ತಾರೆ. ಮದರ್ ತೆರೆಸಾ ಈ ರೀತಿ ಯಾಗಿ ಬದುಕಿದವರು. ಇಂದಿನ ದಿನಗಳಲ್ಲಿ ಹಿಂಸೆ, ದುಃಖ, ನೋವು ಜಗತ್ತನ್ನು ಕಾಡುತ್ತಿರುವಾಗ ಈ ದಿನಗಳಲ್ಲಿ ಪ್ರೀತಿಯಿಂದ ಜಗತ್ತನ್ನು ಗೆಲ್ಲಬೇಕಾಗಿದೆ ಎಂದು ನಾಗಮೋಹನ ದಾಸ್ ತಿಳಿಸಿದ್ದಾರೆ.
ಬಹುತ್ವ ಭಾರತದಲ್ಲಿ ಮಾನವೀಯ ಮೌಲ್ಯ ಗಳು ಕುಸಿಯುತ್ತಿರುವ ಬಗ್ಗೆ ಮತ್ತು ಮಾನವೀಯ ಸೇವೆಗಳ ಸವಾಲು ಗಳ ಬಗ್ಗೆ ಪಲ್ಲವಿ ಇಡೂರು ವಿಷಯ ಮಂಡಿಸಿದರು. ವಂ.ಜೆ.ಬಿ.ಸಲ್ದಾನ ಮತ್ತು ಮುನೀರ್ ಕಾಟಿಪಳ್ಳ ಪ್ರತಿಕ್ರಿಯೆ ನೀಡಿದರು.
ಸಮಾರಂಭದಲ್ಲಿ ರೋಯ್ ಕ್ಯಾಸ್ಟ್ ಲಿನೋ ಅಧ್ಯಕ್ಷ ತೆ ವಹಿಸಿದ್ದರು. ಜೋಸೆಫ್ ಕ್ರಾಸ್ತಾ,ಶಎಂ.ದೇವದಾಸ್, ಎಂ.ಜಿ.ಹೆಗ್ಡೆ, ಸುಮತಿ ಎಸ್.ಹೆಗ್ಡೆ, ಸ್ಟ್ಯಾನಿ ಲೋಬೊ, ಸುಶಿಲ್ ನರೊನ್ನಾ, ಮಾಜಿ ಮೇಯರ್ ಅಶ್ರಫ್ ಕೆ, ಹಿರಿಯ ನ್ಯಾಯವಾದಿ ಯಶವಂತ ಮರೋಳಿ, ಸಿಸ್ಟರ್ ಲೊರೆನಾ, ಪ್ಲೇವಿ ಡಿ.ಸೋಜ, ಡಾ.ರೀಟಾ ನರೊನ್ನಾ, ಕಾರ್ಯಕ್ರಮ ಸಂಯೋಜಕ ರೂಪೇಶ್ ಮಾಡ್ತಾ ಸ್ವಾಗತಿಸಿದರು. ಡಾ.ಕೃಷ್ಣ ಪ್ಪ ಕೊಂಚಾಡಿ ವಂದಿಸಿದರು. ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.