ಮಂಗಳೂರು: ನವರಾತ್ರಿ,ದಸರಾ ಪ್ರಯುಕ್ತ ಸೆ.30ರಿಂದ ಬದಲಿ ರಸ್ತೆ ವ್ಯವಸ್ಥೆ
ಫೈಲ್ ಫೋಟೊ
ಮಂಗಳೂರು, ಸೆ.28: ನವರಾತ್ರಿ ಹಾಗೂ ದಸರಾ ಪ್ರಯುಕ್ತ ಕಾನೂನು ಸುವ್ಯವಸ್ಥೆ, ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಸೆ.30ರಿಂದ ಅಕ್ಟೋಬರ್ 6ರವರೆಗೆ ಮಂಗಳಾದೇವಿ ದೇವಸ್ಥಾನದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಿ ಬದಲಿ ವ್ಯವಸ್ಥೆ ಸೂಚಿಸಿ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.
ಮಂಗಳೂರು-ಮಹಾನಮ 1ನೇ ಬ್ರಿಡ್ಜ್ ಕಡೆಯಿಂದ ಮಂಗಳಾದೇವಿ ಕಡೆಗೆ ಬರುವ ರೂಟ್ ನಂಬ್ರ 27ರ ಬಸ್ಸುಗಳು ಕಾಸಿಯಾ ಜಂಕ್ಷನ್ ಮೂಲಕ ಮಂಗಳಾದೇವಿ ಕಡೆಗೆ ಮತ್ತು ಮೋರ್ಗನ್ಸ್ಗೇಟ್ ಕಡೆಯಿಂದ ಮುಳಿಹಿತ್ಲು ಜಂಕ್ಷನ್ ಮೂಲಕ ಮಂಗಳಾದೇವಿ ಕಡೆಗೆ ಬರುವ ರೂಟ್ ನಂಬ್ರ 4ಸಿ, 4ಎಫ್, 6ಡಿ, 11ಸಿ, 14ಸಿ, 15, 15ಎ ಬಸ್ಸುಗಳು ಜೆಪ್ಪುಮಾರ್ಕೆಟ್ನಿಂದ ಕಾಸಿಯಾ ಜಂಕ್ಷನ್ ಮೂಲಕ ಮಂಗಳಾದೇ ಕಡೆಗೆ ಬಂದು ಕಾಂತಿ ಚರ್ಚ್ ಮುಂಭಾಗದಲ್ಲಿ ಪ್ರಯಾಣಿಕರನ್ನು ಇಳಿಸಿ/ಹತ್ತಿಸಿಕೊಂಡು ಅದೇ ರಸ್ತೆಯಲ್ಲಿ ಏಕಮುಖವಾಗಿ ಮುಂದಕ್ಕೆ ಮುಳಿಹಿತ್ಲು ಕ್ರಾಸ್ ರಸ್ತೆಯಲ್ಲಿ ಮುಂದುವರಿದು ಮೋರ್ಗನ್ಸ್ಗೇಟ್ ಮೂಲಕ ಮುಂದಕ್ಕೆ ಚಲಿಸಬೇಕು, ಮೋರ್ಗನ್ಸ್ಗೇಟ್ ಕಡೆಯಿಂದ ಮುಳಿಹಿತ್ಲು ಮೂಲಕ ಮಂಗಳಾದೇವಿ ದೇವಸ್ಥಾನದ ಕಡೆಗೆ ಎಲ್ಲಾ ಬಸ್ಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
ಮಂಕಿ ಸ್ಟ್ಯಾಂಡ್ ಕಡೆಯಿಂದ ಮಂಗಳಾದೇವಿ ದೇವಸ್ಥಾನದ ಕಡೆಗೆ ಎಲ್ಲಾ ರೀತಿಯ ಸರಕು ಸಾಗಾಣಿಕೆ ವಾಹನಗಳ ಪ್ರವೇಶವನ್ನು ಸೆ.30 ರಿಂದ ಅಕ್ಟೋಬರ್ 6ರವರೆಗೆ ನಿಷೇಧಿಸಲಾಗಿದೆ. ಈ ಎಲ್ಲಾ ಸರಕು ವಾಹನಗಳು ಮಂಕಿ ಸ್ಟ್ಯಾಂಡ್, ಮಾರ್ನಮಿಕಟ್ಟೆ 1ನೇ ಕ್ರಾಸ್, ಬ್ರಿಡ್ಜ್ ಮೂಲಕ ಮುಂದಕ್ಕೆ ಸಾಗಲು ಸೂಚಿಸಲಾಗಿದೆ.
ಮೋರ್ಗನ್ಸ್ಗೇಟ್ ಕಡೆಯಿಂದ ಮಂಗಳಾದೇವಿ ಕಡೆಗೆ ಸಂಚರಿಸುವ ಎಲ್ಲಾ ಸರಕು ಸಾಗಾಣಿಕೆ ವಾಹನಗಳು ಬೋಳಾರ ರಸ್ತೆ ಮೂಲಕ ಸ್ಟೇಟ್ಬ್ಯಾಂಕ್ ಕಡೆಗೆ ಸಂಚರಿಸಲು ಆದೇಶದಲ್ಲಿ ತಿಳಿಸಲಾಗಿದೆ.