ಪುತ್ತೂರು: ದರ್ಬೆಯಲ್ಲಿ ಮೀಲಾದ್ ಕಾರ್ಯಕ್ರಮ
ಪುತ್ತೂರು: ಇಲ್ಲಿನ ದರ್ಬೆ ಮುಹಮ್ಮದೀಯ ಮದ್ರಸ, ಮಸೀದಿ ವತಿಯಿಂದ ಮೀಲಾದ್ ಪ್ರಯುಕ್ತ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರ ಸಂಜೆ ಅನ್ಸಾರುದ್ದೀನ್ ಜಮಾತ್ ನ ಎಲ್ ಟಿ ರಝಾಕ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು.
ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಆಝಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯ ಭಾಷಣಗಾರರಾಗಿ ಆಗಮಿಸಿದ ಮಸೀದಿಯ ಗೌರವ ಖತೀಬ್ ಎಸ್ ಬಿ ದಾರಿಮಿ ಮಾತನಾಡಿ, ಪ್ರವಾದಿ ಜಗತ್ತಿಗೆ ದಯೆ, ಕರುಣೆ ,ಪ್ರೀತಿ, ಸೌಹಾರ್ದತೆ ಸ್ಥಾಪಿಸಲು ಬಂದಿದ್ದಾರೆ. ಅವರು ತೋರಿದ ದಾರಿ ಜನರನ್ನು ಅವರ ಕಡೆ ಆಕರ್ಷಿಸಿತು. ಯುದ್ಧ, ಬಲತ್ಕಾರಗಳಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ. ಇಂದು ಧರ್ಮದ ಗುತ್ತಿಗೆಯನ್ನು ರಾಕ್ಷಸೀಯ ಮನೋಭಾವದ ಸ್ವಾರ್ಥಿಗಳ ಕೈಗೆ ನೀಡಿ ಸಜ್ಜನರು ದೂರ ನಿಂತಿದ್ದಾರೆ. ಇದು ಹೀಗೆ ಮುಂದುವರೆದರೆ ಇದರ ಪರಿಣಾಮವನ್ನು ಮುಂದಿನ ತಲೆಮಾರು ಅನುವಭವಿಸಬೇಕಾಗುತ್ತದೆ. ಜನರ ಕಲ್ಯಾಣವೇ ಧರ್ಮದ ತಿರುಳು. ಜನರಿಗೆ ಮಾರಕವಾಗುವ ಉಪದೇಶಗಳು ಧರ್ಮೋಪದೇಶವಲ್ಲ. ಆಯಾ ಧರ್ಮದ ಅನುಯಾಯಿಗಳಿಂದಲೇ ಅವರ ಧರ್ಮಕ್ಕೆ ಕೆಟ್ಟ ಹೆಸರು ಬರುವುದು ಆಘಾತಕಾರಿ ಬೆಳವಣಿಗೆ. ಶಿಸ್ತು ಮತ್ತು ಸಬ್ಯತೆಯನ್ನು ಮೈ ಗೂಡಿಸಲು ಪುಟ್ಟ ಮಕ್ಕಳಿಗೇ ತರಬೇತಿ ನೀಡುವ ಕೆಲಸ ವ್ಯಾಪಕವಾಗಿ ಆಗಬೇಕೆಂದು ಹೇಳಿದರು.
ಯೆಂಗ್ ಮೆನ್ಸ್ ಅಧ್ಯಕ್ಷ ಹರ್ಷದ್ ದರ್ಬೆ ಸ್ವಾಗತಿಸಿದರು. ಸ್ಥಳೀಯ ಖತೀಬ್ ಹಮೀದ್ ಹನೀಪಿ ದುಹಾಗೈದರು. ಕೆಎಂಎ ಕೊಡುಂಗೈ ನಿರೂಪಿಸಿದರು.
ಜಮಾಅತ್ ಕಾರ್ಯದರ್ಶಿ ಅಬ್ದುಲ್ ಅಝೀಝ್, ಕೋಶಾಧಿಕಾರಿ ಹಸೈನಾರ್, ಟಿಂಬರ್ ಅಬ್ದುಲ್ ಅಝೀಝ್ ಹಾಜಿ ಮೊಟ್ಟೆತಡ್ಕ, ಹಸೈನಾರ್ ಹಾಜಿ ಸಿಟಿ ಬಝಾರ್, ತಾಸಿರ್, ದರ್ಬೆ, ಕಲಂದರ್ ಈಸ್ಟರ್ನ್, ಹನೀಫ್ ಮಾಡಾವು, ಯೂಸುಫ್ ದರ್ಬೆ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಪಿಲೋಮಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಅಶಿಕ್ ದರ್ಬೆ, ಜಮಾತ್ ಗಾಗಿ ಅಹರ್ನಿಶಿ ದುಡಿಯುತ್ತಿರುವ ಮುಖಂಡರನ್ನು ಹಾಗೂ ಕುರಾನ್ ಕಂಠಪಾಠ ಪೂರೈಸಿದ ವಿದ್ಯಾರ್ಥಿಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.