ಮುಲ್ಕಿಯಲ್ಲಿ ಉದ್ಯಮಿಯ ಕೊಲೆ ಪ್ರಕರಣ: ಮಂಗಳೂರು ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸಮನ್ಸ್
ಮಂಗಳೂರು: ಮುಲ್ಕಿಯ(Mulki) ಬ್ಯಾಂಕೊಂದರ ಮುಂದೆ ಜೂನ್ 5, 2020ರ ಹಾಡುಹಗಲೇ ಸುಳ್ಯ ಮೂಲದ ಉದ್ಯಮಿ ಅಬ್ದುಲ್ಲತೀಫ್ರ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸದ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ಗೆ ರಾಜ್ಯ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಬಗ್ಗೆ ವರದಿ ಒಪ್ಪಿಸುವಂತೆ ಮತ್ತು ನ.30ರಂದು ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ.
ಈ ಪ್ರಕರಣದಲ್ಲಿ ಒಟ್ಟು 10 ಮಂದಿ ಆರೋಪಿಗಳಿದ್ದು, ಆ ಪೈಕಿ 7 ಮಂದಿಯ ಬಂಧನವಾಗಿದೆ. ಉಳಿದ 3 ಬಂಧನವಾಗದ ಹಿನ್ನಲೆಯಲ್ಲಿ ರಾಜ್ಯ ಸರಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮಂಗಳೂರು ನಗರ ಪೊಲೀಸ್ ಆಯುಕ್ತರು, ಮುಲ್ಕಿ ಎಸ್ಎಚ್ಒ ವಿರುದ್ಧ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯವಾದಿ ಬಾಲಕೃಷ್ಣ ಎಂ.ಆರ್. ವಾದಿಸಿದ್ದರು.
ಪ್ರಕರಣದ ಆರೋಪಿಗಳಾದ ಉಲ್ಲಂಜೆ ನಿವಾಸಿ ಮುಹಮ್ಮದ್ ವಫಾ ಯಾನೆ ಮುಸ್ತಫಾ, ಕಾರ್ನಾಡ್ ನಿವಾಸಿ ಮುಹಮ್ಮದ್ ರಾಝಿಮ್, ಬಪ್ಪನಾಡು ನಿವಾಸಿ ಮುಹಮ್ಮದ್ ಹಾಶಿಮ್, ಉಡುಪಿಯ ಉಚ್ಚಿಲ ನಿವಾಸಿ ಅಬೂಬಕರ್ ಸಿದ್ದೀಕ್, ಬಪ್ಪನಾಡು ನಿವಾಸಿ ರಿಯಾಝ್ ಯಾನೆ ನಿಸಾರ್, ಕಾಪಿಕಾಡ್ನ ಮಯ್ಯದ್ದಿ, ಪಕ್ಷಿಕೆರೆಯ ಬಶೀರ್ ಹುಸೈನ್ ಎಂಬವರನ್ನು ಬಂಧಿಸಲಾಗಿದ್ದು,ಅವರೀಗ ನ್ಯಾಯಾಂಗ ಸೆರೆಯಲ್ಲಿದ್ದಾರೆ.
ಪ್ರಮುಖ ಆರೋಪಿಗಳಾದ ಕಾರ್ನಾಡಿನ ದಾವೂದ್ ಹಕೀಂ, ಮುಹಮ್ಮದ್ ಬಾವಾ ಯಾನೆ ಟಿಂಬರ್ ಬಾವ, ಪಕ್ಷಿಕೆರೆಯ ಮುಸ್ತಫಾರಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಅದನ್ನು ರದ್ದುಪಡಿಸುವಂತೆ ಕೊಲೆಯಾದ ಅಬ್ದುಲ್ಲತೀಫ್ರ ಪತ್ನಿ, ನ್ಯಾಯವಾದಿ ಮುಬೀನಾ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೂವರ ಜಾಮೀನನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಆದರೆ ಅವರನ್ನು ಈವರೆಗೂ ಬಂಧಿಸದ್ದರಿಂದ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಆ ಹಿನ್ನಲೆಯಲ್ಲಿ ನ.30ರಂದು ಖುದ್ದು ಹಾಜರಾಗುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: 'ಕಳ್ಳತನಕ್ಕಾಗಿಯೇ ಉಡುಪಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಆರೋಪಿ'