ತಪಾಸಣೆ ವೇಳೆ ಪೊಲೀಸರ ಮೇಲೆ ವಾಹನ ಹಾಯಿಸಲು ಮುಂದಾದ ಚಾಲಕ: ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಂಗಳೂರು, ಡಿ.2: ಕರ್ತವ್ಯ ನಿರತ ಪೊಲೀಸರ ಮೇಲೆ ಚಾಲಕನೊಬ್ಬ ಅಟೋ ರಿಕ್ಷಾ ಹಾಯಿಸಿ, ರಸ್ತೆ ಬದಿ ನಿಲ್ಲಿಸಿದ್ದ ಹೈವೇ ಪೆಟ್ರೋಲ್ ವಾಹನಕ್ಕೆ ಢಿಕ್ಕಿ ಹೊಡೆಸುವ ರೀತಿಯಲ್ಲಿ ಚಲಾಯಿಸಿ ಬಳಿಕ ಪರಾರಿಯಾದ ಘಟನೆ ಗುರುವಾರ ರಾತ್ರಿ ಪಂಪ್ವೆಲ್ ಚೆಕ್ ಪಾಯಿಂಟ್ನಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಎಸ್ಸೈ ಸುಗುಮಾರನ್ ತನ್ನ ಅಧೀನ ಅಧಿಕಾರಗಳಾದ ಮಹೇಶ್, ಸಂತೋಷ್ ಪಡೀಲ್, ರಾಜೇಶ್, ಸುರೇಶ್, ವೀರೇಶ್ ಅವರೊಂದಿಗೆ ಗುರುವಾರ ರಾತ್ರಿ ಸುಮಾರು 9:45ರ ವೇಳೆಗೆ ವಾಹನ ತಪಾಸಣೆ ಕರ್ತವ್ಯದಲ್ಲಿದ್ದರು.
ಈ ವೇಳೆ ಕಂಕನಾಡಿ ಹಳೆ ರಸ್ತೆ ಕಡೆಯಿಂದ ಪಂಪ್ವೆಲ್ಗೆ ವೇಗವಾಗಿ ಅಟೋ ರಿಕ್ಷಾ ಬರುತ್ತಿರುವುದನ್ನು ಗಮನಿಸಿದ ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದರು. ಆರೋಪಿ ರಿಕ್ಷಾ ಚಾಲಕ ದುಡುಕುತನ ಹಾಗೂ ನಿರ್ಲಕ್ಷತನದಿಂದ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಯದ್ವಾತದ್ವಾ ಚಲಾಯಿಸಿ ಆಟೋವನ್ನು ಒಮ್ಮೆಲೇ ಪೊಲೀಸರತ್ತ ನುಗ್ಗಿಸಿಕೊಂಡು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಇಲಾಖಾ ಹೈವೇ ಪೆಟ್ರೋಲ್ ವಾಹನಕ್ಕೆ ಢಿಕ್ಕಿ ಹೊಡೆಸುವ ರೀತಿಯಲ್ಲಿ ಚಲಾಯಿಸಿ ಬಿ.ಸಿ.ರೋಡ್ ಕಡೆಗೆ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.