ಮಂಗಳೂರು:ಡಾ.ಸಿ.ಪಿ.ಹಬೀಬ್ ರಹ್ಮಾನ್ರಿಗೆ ʼಎಂಎಂಎ-ಕೆವಿಕೆ ಅತ್ಯುತ್ತಮ ಮ್ಯಾನೇಜರ್ ಪ್ರಶಸ್ತಿ 2022ʼಪ್ರಶಸ್ತಿ ಪ್ರದಾನ
ಮಂಗಳೂರು, ಡಿ.7: ಮಾನವ ಸಂಪನ್ಮೂಲದ ನಿರ್ವಹಣೆ ಹೆಚ್ಚು ಸವಾಲಿನದ್ದಾಗಿದೆ. ಯಾರಿಗೆ ಆದೇಶವನ್ನು ಪಾಲಿಸಲು ಸಾಧ್ಯವಾಗುವುದಿಲ್ಲವೊ ಅವರು ಇತರರಿಗೆ ಆದೇಶ ನೀಡಲು ಸಮರ್ಥರಲ್ಲ, ಈ ಮಾತಿನಲ್ಲಿ ಉತ್ತಮ ನಿರ್ವಹಣೆ ಮತ್ತು ಉತ್ತಮ ನಾಯಕತ್ವದ ಗುಟ್ಟು ಅಡಗಿದೆ ಎಂದು ಯೆನೆಪೊಯ (ಪರಿಗಣಿತ) ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಂ.ವಿಜಯ ಕುಮಾರ್ ತಿಳಿಸಿದರು.
ಅವರು ಮಂಗಳೂರು ಮ್ಯಾನೇಜ್ ಮೆಂಟ್ ಅಸೋಸಿಯೇಷನ್ (ರಿ) ವತಿಯಿಂದ ನಗರದ ಎಸ್ ಡಿ ಎಂ ಕಾಲೇಜು ಸಭಾಂಗಣದಲ್ಲಿಂದು ಹಮ್ಮಿಕೊಂಡಿದ್ದ ʼಎಂಎಂಎ-ಕೆವಿಕೆ ಅತ್ಯುತ್ತಮ ಮ್ಯಾನೇಜರ್ ಪ್ರಶಸ್ತಿ 2022ʼ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಯಂತ್ರಗಳ ನಿರ್ವಹಣೆ, ಹಣ ಸಂಪನ್ಮೂಲದ ನಿರ್ವಹಣೆ, ಇತರ ನಿರ್ವಹಣಾ ಕ್ಷೇತ್ರಗಳಾಗಿವೆ. ಅದಕ್ಕಿಂತಲೂ ನೈಸರ್ಗಿಕವಾಗಿ ನಮಗೆ ಕಾಣ ಸಿಗುವ ನಿರ್ವಹಣಾ ಕ್ಷೇತ್ರ ನಮ್ಮ ಮನೆ. ಅಲ್ಲಿ ಇರುವ ತಾಯಿ, ತಂದೆ, ಮಕ್ಕಳ ನಡುವಿನ ನಿರ್ವಹಣೆಯು ನಿರ್ವಹಣಾ ಕ್ಷೇತ್ರದ ಹಲವು ಆಯಾಮಗಳನ್ನು ತಿಳಿಸುತ್ತದೆ ಎಂದು ವಿಜಯ ಕುಮಾರ್ ತಿಳಿಸಿ, ಪ್ರಶಸ್ತಿ ವಿಜೇತ ಡಾ. ಹಬೀಬ್ ರಹ್ಮಾನ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಯುನಿಟಿ ಕೇರ್ & ಹೆಲ್ತ್ ಸರ್ವೀಸಸ್ (ಪಿ) ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷ ಡಾ. ಸಿ.ಪಿ.ಹಬೀಬ್ ರಹ್ಮಾನ್ ರವರಿಗೆ ʼಎಂ.ಎಂ.ಕೆ - ಕೆವಿಕೆ ಅತ್ಯುತ್ತಮ ಮ್ಯಾನೇಜರ್ ಪ್ರಶಸ್ತಿ -2022ನ್ನು ಸಮಾರಂಭದಲ್ಲಿ ಅತಿಥಿಗಳ ಸಮ್ಮಖದಲ್ಲಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಡಾ. ಹಬೀಬ್ ರಹ್ಮಾನ್ ಮಾತನಾಡುತ್ತಾ, ಮಂಗಳೂರು ಮ್ಯಾನೇಜ್ಮೆಂಟ್ ಎಸೋಸಿಯೇಶನ್ ನಾಯಕತ್ವ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವಂತೆ ಕರೆ ನೀಡಿದರು. ಉತ್ತಮ ನಾಯಕನಾಗಬೇಕಾದರೆ ಉತ್ತಮ ನಿರ್ವಹಣೆ ಮುಖ್ಯ. ಇವೆರಡು ಒಂದಕ್ಕೊಂದು ಪೂರಕ ಎಂದರು. ಸಮಾಜದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸೇವಾ ಸೌಲಭ್ಯ ನೀಡಲು ಆರೋಗ್ಯ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡೆ. ರೋಗ ಬಾರದಂತೆ ತಡೆಯುವುದು, ಆರೋಗ್ಯ ವೃದ್ಧಿ, ರೋಗದ ಶಮನ ವೈದ್ಯಕೀಯ ಕ್ಷೇತ್ರದಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕಾದ ಕ್ಷೇತ್ರ. ಈ ಕ್ಷೇತ್ರದಲ್ಲಿ ನನ್ನ ನಿರ್ವಹಣೆಯನ್ನು ನೋಡಿ ಗೌರವಿಸಿದ ಎಂಎಂಎ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಜಾಗತಿಕ ಶಾಂತಿ ಸೌಹಾರ್ದತೆ ಜೊತೆ ಮನುಕುಲದ ಉಳಿವಿಗಾಗಿ ಶ್ರಮಿಸುವುದು ನಮ್ಮ ಮುಂದಿನ ಸವಾಲಾಗಿದೆ ಎಂದರು.
ಸಮಾರಂಭದಲ್ಲಿ ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಎಸೋಸಿಯೇಶನ್ ಪ್ರತಿನಿಧಿ ಡಾ.ದೇವರಾಜ್ ಕೆ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು.
ಎಂಎಂಎ ಉಪಾಧ್ಯಕ್ಷ ಡಾ. ಕೆ. ಜನಾರ್ದನ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಮಂಗಳೂರು ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಕೆ.ಜೈರಾಜ್ ಬಿ.ರೈ ಸ್ವಾಗತಿಸಿ, ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದೀಪಾ ನಾಯಕ್ ವಂದಿಸಿದರು.