ಮಂಗಳೂರು: ಕೆಲಸಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ
ಮಂಗಳೂರು : ಕಲ್ಲಾಪು ಬಳಿಯ ಔಟ್ಡೋರ್ ಸೊಲ್ಯೂಶನ್ಸ್ -ಸ್ಟ್ರೀಟ್ವಾಕ್ ಎಂಬ ಕಂಪೆನಿಗೆ ಕೆಲಸಕ್ಕೆ ಹೋಗಿದ್ದ ಜಪ್ಪಿನಮೊಗರು ನಿವಾಸಿ ಎಸ್.ಹರಿಕುಮಾರ್ (61) ಎಂಬವರು ಡಿ.7ರಿಂದ ಕಾಣೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ತಂದೆ ಕಳೆದ ನಾಲ್ಕು ತಿಂಗಳಿನಿಂದ ಈ ಕಂಪೆನಿಯ ಕೆಲಸಕ್ಕೆ ಹೋಗುತ್ತಿದ್ದು, ಡಿ.7ರಂದು ಎಂದಿನಂತೆ ಕೆಲಸಕ್ಕೆ ಹೋದವರು ಆ ದಿನ ಸಂಜೆಯಾದರೂ ಮರಳಿ ಬಾರದ ಕಾರಣ ಮೊಬೈಲ್ಗೆ ಕರೆ ಮಾಡಿದಾಗ ಅದು ಸ್ವಿಚ್ಡ್ ಆಫ್ ಆಗಿತ್ತು. ನಂತರ ಸಂಬಂಧಿಕರಲ್ಲಿ ಕರೆ ಮಾಡಿ ವಿಚಾರಿಸಿ ಸುತ್ತಮುತ್ತಲು ಹುಡುಕಾಡಿದರೂ ಪತ್ತೆಯಾಗದ ಕಾರಣ ದೂರು ನೀಡಿರುವುದಾಗಿ ಹರಿಕುಮಾರ್ರ ಪುತ್ರಿ ಮೇಘಾ ನವೀನ್ ಕಂಕನಾಡಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
5.10 ಅಡಿ ಎತ್ತರದ ಎಣ್ಣೆಗೆಂಪು ಮೈ ಬಣ್ಣದ ಕೋಲು ಮುಖದ ಸಾಧಾರಣ ಶರೀರದ ಹರಿಕುಮಾರ್ ಕೆಲಸಕ್ಕೆ ಹೋದ ದಿನದಂದು ಕಪ್ಪುಮಿಶ್ರಿತ ಸಣ್ಣಗೆರೆಗಳ ಹಾಗೂ ಕಡು ಹಳದಿ ಬಣ್ಣದ ಉದ್ದ ತೋಳಿನ ಅಂಗಿ ಮತ್ತು ಕಂದು ಬಣ್ಣದ ಪ್ಯಾಂಟ್ ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.