ಉಪ್ಪಿನಂಗಡಿ: ಪಂಚಾಯತ್ ಪಿಡಿಒ ಕರ್ತವ್ಯ ನಿರ್ವಹಣೆಗೆ ಅಡ್ಡಿ ಆರೋಪ; ಪ್ರಕರಣ ದಾಖಲು
ಉಪ್ಪಿನಂಗಡಿ, ಜ.1: ಪಂಚಾಯತ್ ಪಿಡಿಒ ಅವರ ಕರ್ತವ್ಯ ನಿರ್ವಹಣೆಗೆ ಗ್ರಾಮ ಪಂಚಾಯತ್ ಸದಸ್ಯರೋರ್ವರು ತಡೆಯೊಡ್ಡಿ, ಹಲ್ಲೆಗೆ ಯತ್ನಿಸಿದ ಬಗ್ಗೆ ಪಿಡಿಒ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದ ಪೆರಿಯಡ್ಕ ನೆಡ್ಚಿಲ್ ಎಂಬಲ್ಲಿ ಪಂದ್ಯಾಟವೊಂದಕ್ಕೆ ಸಂಬಂಧಿಸಿ ಹಾಕಲಾಗಿದ್ದ ಬ್ಯಾನರ್ ಅನ್ನು ಅನುಮತಿ ಇಲ್ಲದೇ ಹಾಕಲಾಗಿದೆ ಎಂಬ ಕಾರಣಕ್ಕೆ ಪಿಡಿಒ ಸೂಚನೆಯಂತೆ ತೆರವು ಮಾಡಲು ಮುಂದಾದಾಗ ಸ್ಥಳೀಯರು ಪ್ರತಿಭಟಿಸಿದ್ದಾರೆ.
ಈ ವೇಳೆ ಪಂಚಾಯತ್ ಸಿಬ್ಬಂದಿ ನೀಡಿದ ಮಾಹಿತಿಯಾಧಾರದಲ್ಲಿ ಸ್ವತಃ ತಾವೇ ಸ್ಥಳಕ್ಕೆ ಭೇಟಿ ನೀಡಿದ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಬ್ಯಾನರ್ ನ್ನು ತೆರವುಗೊಳಿಸಲು ಮುಂದಾದಾಗ ಪಂಚಾಯತ್ ಸದಸ್ಯರಾದ ಸುರೇಶ್ ಅತ್ರಮಜಲು, ಬಿಜೆಪಿ ಕಾರ್ಯಕರ್ತ ರಮೆಶ್ ಭಂಡಾರಿ, ಹಾಗೂ ರೋಹಿತ್ ಮತ್ತಿತರರು ಬ್ಯಾನರ್ ತೆಗೆಯದಂತೆ ತಡೆಯೊಡ್ಡಿ ಪಿಡಿಒ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ, ಸರಕಾರಿ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿದ್ದಾರೆಂದು ಆಪಾದಿಸಿ ದೂರು ಸಲ್ಲಿಕೆಯಾಗಿದೆ.
ಈ ದೂರಿನನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ.
ಪ್ರತಿ ದೂರು: ಪ್ರಕರಣಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲು ಪೊಲೀಸರಿಗೆ ದೂರು ನೀಡಿ, ಜನಪ್ರತಿನಿಧಿಯಾಗಿರುವ ತನ್ನ ಮೇಲೆ ಪಂಚಾಯತ್ ಅಧ್ಯಕ್ಷರ ಒಪ್ಪಿಗೆ ಪಡೆದು ಅನಾರೋಗ್ಯಕ್ಕೀಡಾದ ಮಗುವಿನ ಸಹಾಯಾರ್ಥವಾಗಿ ನಡೆಸುವ ಕಾರ್ಯಕ್ರಮದ ಬಗ್ಗೆ ಹಾಕಲಾದ ಬ್ಯಾನರ್ ನ್ನು ಬಲವಂತವಾಗಿ ತೆಗೆಯಲು ಮುಂದಾದ ಗ್ರಾಮ ಪಂಚಾಯತ್ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ಅವರು ಸಾರ್ವಜನಿಕವಾಗಿ ನನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.
ದೂರನ್ನು ಸ್ವೀಕರಿಸಿರುವ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಲು ನ್ಯಾಯಾಲಯದ ಅನುಮತಿಯನ್ನು ಕೋರಿದ್ದಾರೆ.