-

ಜನರ ಮಧ್ಯೆ ದ್ವೇಷ, ಜಗಳ ಹೆಚ್ಚಿಸಿರುವುದಷ್ಟೇ ಬಿಜೆಪಿ ಸಾಧನೆ: ಬಿ.ಕೆ.ಹರಿಪ್ರಸಾದ್

-

ಉಡುಪಿ, ಜ.22: ‘ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಗೆಲ್ಲಿಸಿದ್ದೀರಿ, ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಬಿಜೆಪಿ ಶಾಸಕರನ್ನು ಗೆಲ್ಲಿಸಿ ಕಳಿಸಿದ್ದೀರಿ. ಈ ಜನಪ್ರತಿನಿಧಿಗಳು ತಮ್ಮ ಕೊಡುಗೆ ಏನೆಂಬುದನ್ನ ತೋರಿಸಲಿ. ಶಾಂತಿ ಸುವ್ಯವಸ್ಥೆಯಲ್ಲಿದ್ದ ಜನರ ಮಧ್ಯ ದ್ವೇಷ, ಜಗಳ ಹೆಚ್ಚಿಸಿರುವುದಷ್ಟೇ ಇವರ ಸಾಧನೆ’ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.

ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಸರಕಾರ ಐದು ವರ್ಷಗಳಲ್ಲಿ ಏನು ಸಾಧನೆ ಮಾಡಿದೆ, ಯಾವ ಯೋಜನೆ ತಂದಿದ್ದೀವಿ ಎನ್ನುವ ಮೂಲಕ ಮತದಾರರ ಬಳಿ ಹೋಗ್ತೀವಿ. ಆದರೆ ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿ ಸರಕಾರ ಮಹಿಳೆಯವರಿಗೆ ಏನು ಮಾಡಿದೆ? ಯುವಕರಿಗೆ ಏನು ಮಾಡಿದೆ ಶಿಕ್ಷಣಕ್ಕೆ ಏನು ಕೊಡುಗೆ ನೀಡಿದ್ದಾರೆ ಎನ್ನುವುದನ್ನು ತಿಳಿಸಲಿ ಎಂದು ಸವಾಲೆಸೆದರು.

ರಾಜ್ಯದಲ್ಲಿ ಬಿಜೆಪಿಯವರು ಎರಡು ಸಲ ಅಧಿಕಾರ ಮಾಡಿದ್ದಾರೆ. ಎರಡೂ ಸಲವೂ ಅವರಿಗೆ ಬಹುಮತ ಬರಲಿಲ್ಲ. ಪ್ರಜಾಪ್ರಭುತ್ವವನ್ನ ಬುಡಮೇಲು ಮಾಡಿ, ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಈ ಬಿಜೆಪಿಯವರು ಜನರಿಗೋಸ್ಕರ ಯಾವ ಸಾಧನೆ ಮಾಡಿದ್ದಾರೆ? ಜನರ ಎದುರು ಹೋಗಲು ಇವರಿಗೆ ಮುಖ ಇಲ್ಲ ಟೀಕಿಸಿದರು.

ಪ್ರಜಾಧ್ವನಿ ಯಾತ್ರೆಯ ಮೂಲಕ ಜನರ ಎದುರು ಬಿಜೆಪಿ ಸರಕಾರದ ದುರಾಡಳಿತವನ್ನ ಹೇಳುವ ಜವಾಬ್ದಾರಿ ನಮ್ಮ ಮೇಲಿದೆ. ಈ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸ್ವಯಂಪ್ರೇರಿತರಾಗಿ ಭಾಗವಹಿಸುತ್ತಿದ್ದು, ಮೂರುವರೆ ವರ್ಷದಲ್ಲಿ ಇವರು ಏನು ಮಾಡದೇ ಇರುವುದಕ್ಕೆ ಈ ಜನಸ್ತೋಮವೇ ಸಾಕ್ಷಿ ಎಂದು ಹರಿಪ್ರಸಾದ್ ನುಡಿದರು.

ರಾಜ್ಯದಲ್ಲೇ ಅತೀ ಹೆಚ್ಚಿನ ಸಾಕ್ಷರತೆ ಹೊಂದಿರುವ ಕರಾವಳಿಯ ಉಡುಪಿ ಮತ್ತು ದ.ಕ. ಜಿಲ್ಲೆಗೆ ಬಿಜೆಪಿ ಕಳಂಕ ತಂದಿದೆ. ನಾವು ಬೆಂಗಳೂರಿನಲ್ಲಿದ್ದಾಗ ಶೈಕ್ಷಣಿಕ ಫಲಿತಾಂಶದಲ್ಲಿ ಉಡುಪಿ ಪ್ರಥಮ, ದ.ಕ. ಜಿಲ್ಲೆ ಪ್ರಥಮ ಸ್ಥಾನ ಎಂದು ಪತ್ರಕೆಗಳಲ್ಲಿ ಓದುತ್ತಾ ಇದ್ದೆವು, ನಮ್ಮ ಭುಜ ತಟ್ಟಿಕೊಳ್ಳುತ್ತಾ ಇದ್ದೆವು. ಆದರೆ ಮೊಟ್ಟಮೊದಲ ಬಾರಿಗೆ ಉಡುಪಿ ಜಿಲ್ಲೆ 15, 18ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುರ ಮೊದಲ ಸ್ಥಾನಕ್ಕೇರಿದೆ. ಕರಾವಳಿ ಜಿಲ್ಲೆಗಾದ ಈ ಅವಮಾನಕ್ಕೆ ಇಲ್ಲಿನ ಶಾಸಕರು, ಸಚಿವರೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರಸ್ ನಾಯಕಿ ಸೋನಿಯಾ ಗಾಂಧಿ ಮಾರ್ಗದರ್ಶನದಿಂದ, ಆಗಿನ ಪ್ರಧಾನಿ ಮನಮೋಹನ್ ಸಿಂಗ್‌ರ ಪರಿಶ್ರಮದಿಂದ ಅಕ್ಷರ ದಾಸೋಹದ ಮೂಲಕ ಬಡವರ ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ. ಎಲ್ಲಾ ಮಕ್ಕಳಿಗೆ ಉಚಿತವಾಗಿ ಮತ್ತು ಕಡ್ಡಾಯವಾಗಿ ಶಿಕ್ಷಣ ನೀಡಲು ಆರ್‌ಟಿಇ ಮೂಲಕ ಶಿಕ್ಷಣ ನೀಡುವ ಕಾನೂನು ತಂದಿದ್ದೇವೆ. ಆದರೆ ಬಿಜೆಪಿ ಸರಕಾರದ ಸಾಧನೆ ಏನಿದೆ ಎಂದು ಅವರು ಪ್ರಶ್ನಿಸಿದರು.

 ಈ ಜಿಲ್ಲೆಗೆ ವೀರಪ್ಪ ಮೊಯ್ಲಿ ಆಗಲಿ, ಸಿದ್ದರಾಮಯ್ಯ ಆಗಲಿ ಯಾರೇ ಇರಲಿ ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಟ್ಟು ಇಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಿದ್ದೇವೆ. ಕ್ರೈಸ್ತ ಮಿಷನರಿಗಳ ಮೂಲಕ, ಮಣಿಪಾಲ್ ಸಂಸ್ಥೆ ಮೂಲಕ ಅಭೂತ ಪೂರ್ವ ಕೊಡುಗೆ ಶಿಕ್ಷಣಕ್ಕೆ ನೀಡಿದ ಜಿಲ್ಲೆಗಳಿವು. ಕರಾವಳಿಗೆ ಬಿಜೆಪಿಯ ಕೊಡುಗೆ ಏನು ಎಂಬುದನ್ನ ಹೇಳಲಿ.

ಕರಾವಳಿಯವರಾದ ಬಿಜೆಪಿ ರಾಜ್ಯಾಧ್ಯಕ್ಷ ವಿದೂಷಕನಂತೆ ಹೇಳಿಕೆಗಳನ್ನ ನೀಡುತ್ತಾರೆ. ಅಭಿವೃದ್ಧಿ ಬೇಡ, ರಸ್ತೆ ಬೇಡ, ಚರಂಡಿ ಬೇಡ, ಆರೋಗ್ಯ ಬೇಡ, ಶಿಕ್ಷಣ ಕೇಳ್ಬೇಡಿ ಅದರ ಬದಲಾಗಿ ಹಿಜಾಬ್ ಬಗ್ಗೆ ಮಾತಾಡಿ, ಹಲಾಲ್ ಬಗ್ಗೆ ಮಾತಾಡಿ, ಲವ್ ಜಿಹಾದ್ ಬಗ್ಗೆ ಮಾತಾಡಿ ಎಂದು ಕರೆ ಕೊಡುತ್ತಾರೆ. ಬಿಜೆಪಿಯವರು ಕರಾವಳಿ ಜಿಲ್ಲೆಯನ್ನು ಏನು ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು. ನಳಿನ್ ಕುಮಾರ್ ಅವರೇ, ಬಡವರ ಮಕ್ಕಳನ್ನ ಬಾವಿಗೆ ತಳ್ಳಿ ಆಳ ನೋಡಬೇಡಿ. ಹಿಂದುಳಿದ ಮಕ್ಕಳಿಗೆ ಬಾವಿಗೆ ತಳ್ಳಬೇಡಿ ಎಂದರು.

ಕರಾವಳಿ ಜಿಲ್ಲೆಯವರು ಸೌಹಾರ್ದದಿಂದ ಇದ್ದಾರೆ. ಬಿಜೆಪಿಯರು ದ್ವೇಷ ಹುಟ್ಟಿಸುತ್ತಿದ್ದಾರೆ. ಬಿಜೆಪಿಯವರ ಅಧಿಕಾರದ ಬೇಳೆ ಬೇಯಲು ಹಿಂದುಳಿದವರ ಮಕ್ಕಳನ್ನ ಯಾಕೆ ಬಲಿ ಕೊಟ್ಟಿದ್ದೀರಿ.? ಕರಾವಳಿ ಜಿಲ್ಲೆಯರ ಅಭಿವೃದ್ಧಿ ಇವರಿಗೆ ಬೇಕಿಲ್ಲ, ಬದಲಿಗೆ ಅಭಿವೃದ್ಧಿಯನ್ನೇ ನಾಶ ಮಾಡುತ್ತಿದ್ದಾರೆ. ಕರಾವಳಿಯನ್ನ ಕೋಮುವಾದದ ಪ್ರಯೋಗ ಶಾಲೆ ಮಾಡುವ ಮೂಲಕ ಶಾಂತಿ, ನೆಮ್ಮದಿಯನ್ನ ನಾಶ ಮಾಡುತ್ತಿದ್ದಾರೆ ಎಂದು ಹರಿಪ್ರಸಾದ್ ಆರೋಪಿಸಿದರು.

ಬಿಜೆಪಿಯವರ ಸಂಸ್ಕೃತಿಯೇ ಕೊಲೆಗಳ ರಾಜಕೀಯ. ಪ್ರವೀಣ್ ಪೂಜಾರಿ ಕೊಲೆಯಾಯ್ತು. ಕೊಲೆ ಮಾಡಿದವರು ಬಿಜೆಪಿಯವರು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಮನೆ ಹತ್ತಿರವೇ ಕೊಲೆಯಾಗಿದೆ. ಪ್ರಕರಣದ ಮೊದಲ ಆರೋಪಿ ಬಿಜೆಪಿಯ ಮಂಡಲ ಅಧ್ಯಕ್ಷ. ಇವರ ಇತಿಹಾಸವೇ ಕೊಲೆಗಳಿಂದ ಪ್ರಾರಂಭವಾಗುತ್ತದೆ ಎಂದರು.

ಬಸವರಾಜ ಬೊಮ್ಮಾಯಿಯವರ ಕೈಯಲ್ಲಿ ಸರಕಾರವೇ ಇಲ್ಲ. ಆರೆಸ್ಸೆಸ್‌ನ ಕೇಶವ ಕೃಪದ ಆದೇಶ ಪಾಲನೆ ಮಾಡುತ್ತಿದ್ದಾರೆ. ಕೇಶವಕೃಪಾದ ಸೂತ್ರಧಾರಿಗಳಂತೆ ಇವರೆಲ್ಲಾ ಪಾತ್ರಧಾರಿಗಳು ಎಂದು ಹರಿಪ್ರಸಾದ್ ಆರೋಪಿಸಿದರು.

ಕರಾವಳಿಯ ಜನ ಸ್ವಂತ ಶಕ್ತಿಯ ಮೇಲೆ ಕೆಲಸ ಮಾಡುವವರು. ಸರಕಾರದ ಬಳಿ ಆರೋಗ್ಯಕ್ಕಾಗಿ ಬೇಡುವವರಲ್ಲ, ಉದ್ಯೋಗ ಕೇಳುವವರಲ್ಲ. ಅವಿಭಜಿತ ದ.ಕ. ಜಿಲ್ಲೆ ಐದು ದೊಡ್ಡ ದೊಡ್ಡ ಬ್ಯಾಂಕ್‌ಗಳನ್ನು ಕೊಟ್ಟಿದೆ. ಬ್ಯಾಂಕ್‌ಗಳನ್ನ ಸ್ಥಾಪಿಸಲು ಸರಕಾರದ ಬಳಿಯಾಗಲಿ,ಯಾರಿಂದಾಗಲಿ ಸಹಾಯ ಕೇಳಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ಬಿಲ್ಲವರು, ಮೊಗವೀರರು, ಬ್ಯಾರಿಗಳು, ಕೊರಗರು, ಬಂಟರು ಎಲ್ಲಾ ಸಮುದಾಯಗಳ ಜನರು ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಬೆಂಗಳೂರು ಬಿಟ್ಟರೆ ಅವಿಭಾಜ್ಯ ಜಿಲ್ಲೆಯೇ ಅತೀ ಹೆಚ್ಚು ತೆರಿಗೆ ಪಾವತಿಸುತ್ತಾರೆ. ಆದರೆ ಬಿಜೆಪಿಯ ಅವಧಿಯಲ್ಲಿ ಅಭಿವೃದ್ಧಿ ಮಾತ್ರ ಶೂನ್ಯ.

-ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ವಿಪಕ್ಷ ನಾಯಕ

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top