ನನ್ನ ಮೇಲೆ 109 ಕೇಸ್ ದಾಖಲಾಗಿದ್ದು, ಇದರಲ್ಲಿ ಬಿಜೆಪಿ ಕೊಡುಗೆ ದೊಡ್ಡದು: ಪ್ರಮೋದ್ ಮುತಾಲಿಕ್
''ನಕಲಿ ಹಿಂದುತ್ವ-ಅಸಲಿ ಹಿಂದುತ್ವ, ಭ್ರಷ್ಟಚಾರ- ಪ್ರಾಮಾಣಿಕತೆ ವಿರುದ್ಧ ಸ್ಪರ್ಧೆ''
ಮಂಗಳೂರು, ಫೆ.12: ನನ್ನ ಮೇಲೆ ಈ ತನಕ 109 ಕೇಸ್ ಹಾಕಲಾಗಿದೆ. ಇದರಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೇ ನನ್ನ ಮೇಲೆ ಹೆಚ್ಚು ಕೇಸ್ ದಾಖಲಾಗಿದೆ. ಗಡಿಪಾರು ನಿರ್ಬಂಧನೆ , ಹಿಂದುತ್ವದ ವಿಚಾರದಲ್ಲಿ ನಮ್ಮವರಿಂದಲೇ ಹೆಚ್ಚು ತೊಂದರೆ ಅನುಭವಿಸಿದ್ದೇನೆ ಎಂದು ಶ್ರೀರಾಮ ಸೇನಾ ಕರ್ನಾಟಕ ಇದರ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಕಾರ್ಕಳದಿಂದ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ, ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ರಾಜಕೀಯ ಗೊತ್ತಿಲ್ಲ. ಪ್ರಾಮಾಣಿಕತೆ ಮತ್ತು ನೇರ ಮಾತು ಇದೇ ನನಗೆ ಮುಳ್ಳಾಯಿತು. ನಾನು ಕೂಡಾ ಬಕೆಟ್ ಹಿಡಿದಿದ್ದರೆ, ಅವರ ಬಾಲ ಹಿಡಿಕೊಂಡಿದ್ದರೆ, ಬಿಜೆಪಿಯವರ ಡೋಂಗಿ ಹಿಂದುತ್ವ, ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದರೆ ಎಲ್ಲೊ ಇರುತ್ತಿದ್ದೆ ಎಂದು ಅಭಿಪ್ರಾಯಪಟ್ಟರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ನನಗೆ ಯಾರ ಒತ್ತಡವೂ ಇಲ್ಲ. ನನಗೆ ತುಂಬಾ ಜನರು ಬೆಂಬಲ ನೀಡುತ್ತಿದ್ದಾರೆ. ನಾನು ಶಾಸಕನಾಗಿ ಆಯ್ಕೆಯಾಗುವುದು ಖಚಿತ ಎಂದರು.
ನನ್ನದು ಅಸಲಿ ಹಿಂದುತ್ವ ಮತ್ತು ಭ್ರಷ್ಟಚಾರದ ವಿರುದ್ಧ ಸ್ಪರ್ಧೆಯಾಗಿದೆ. ಕಾರ್ಕಳದಲ್ಲಿ ಜನರನ್ನು ಬೆದರಿಸುವ ವಾತಾವರಣ ಇದೆ ಎಂದು ಹೇಳಿದರು.
ಸಚಿವ ವಿ.ಸುನೀಲ್ ಕುಮಾರ್ ಕಾರ್ಕಳದಲ್ಲಿ ಮೊದಲು ಸ್ಪರ್ಧೆ ಮಾಡುವಾಗ ಅವರ ಆಸ್ತಿ ಎಷ್ಟಿತ್ತು, ಈಗ ಎಷ್ಟು ಹೆಚ್ಚಾಗಿದೆ ಎಂದು ನೋಡಿದಾಗ ಗೊತ್ತಾಗುತ್ತದೆ ಅವರ ಭ್ರಷ್ಟಾಚಾರ. ನನ್ನಲ್ಲಿ ಏನು ಇಲ್ಲ. ನನಗೆ ಬ್ಯಾಂಕ್ ಅಕೌಂಟ್ ಕೂಡಾ ಇಲ್ಲ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ನನ್ನಲ್ಲಿ ದುಡ್ಡಿಲ್ಲ. ಆದರೆ ನನಗೆ ಭಯ ಇಲ್ಲ. ಚುನಾವಣೆಯಲ್ಲಿ ಸ್ಪರ್ಧೆಗೆ ತೊಂದರೆಯಾಗದು ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನಾ ರಾಜ್ಯ ಅಧ್ಯಕ್ಷ ಗಂಗಾಧರ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರ್, ಮಂಗಳೂರು ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು ಉಪಸ್ಥಿತರಿದ್ದರು.