ಇಡ್ಯಾ: 62ನೇ ವಾರ್ಷಿಕ ಖಿಲ್ರಿಯಾ ಮೌಲೂದ್ ನೇರ್ಚೆ ಸಮಾರೋಪ
ಸುರತ್ಕಲ್, ಫೆ.26: ಖಿಲ್ರಿಯಾ ಮಸೀದಿ ಮತ್ತು ಮದ್ರಸ (ರಿ) ಇಡ್ಯಾ ಸುರತ್ಕಲ್ ಇದರ ವತಿಯಿಂದ ಅಭಿಲ್ ಖಿಲ್ರ್ ನಬಿ(ಅ.ಸ.) ಅವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಖಿಲ್ರಿಯಾ ಮೌಲೂದ್ ನೇರ್ಚೆಯ 62ನೇ ವಾರ್ಷಿಕದ ಸಮಾರೋಪ ಸಮಾರಂಭ ಶನಿವಾರ ರಾತ್ರಿ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೆ.ಆರ್. ಹುಸೈನ್ ದಾರಿಮಿ ರೆಂಜಿಲಾಡಿ, ಸುರತ್ಕಲ್ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಪ್ರದೇಶ. ಅದರೊಂದಿಗೆ ಇರುವ ಇಡ್ಯಾ ಸರ್ವ ಧರ್ಮಗಳ ಕೇಂದ್ರ. ರಾಜಕೀಯ ಕಾರಣಗಳಿಗಾಗಿ ಜಾತಿ, ಧರ್ಮಗಳ ಹೆಸರಿನಲ್ಲಿ ಅಮಾಯಕರನ್ನು ಹರಿದು ಹಂಚಲಾಗುತ್ತಿದೆಯಾದರೂ ಇಡ್ಯಾ ಪ್ರದೇಶದಲ್ಲಿ ಸೌಹಾರ್ದ ಕಟ್ಟು ಹೋಗಿಲ್ಲ ಎಂದು ನುಡಿದರು.
ಇಲ್ಲಿನ ಯುವ ಸಮೂಹ ಯಾವುದೇ ಜಾತಿ, ಧರ್ಮಗಳ ಗೋಜಿಗೂ ಹೋಗದೆ ನಿಲ್ಲಲ್ಲಿರುವ ಸೌಹಾರ್ದ ಪರಂಪರೆಯನ್ನು ಮತ್ತಷ್ಟು ಬಲ ಪಡಿಸಲು ಶ್ರಮವಹಿಸಬೇಕು ಎಂದು ಕರೆ ನೀಡಿದರು. ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ರಾಜಕೀಯಕ್ಕಾಗಿ ಜನರನ್ನು ಒಡೆದು ಆಳಲಾಗುತ್ತಿದೆ. ಮಂಗಳೂರಿಗರು ಬುದ್ಧಿವಂತರಾಗಿದ್ದಾರೆ. ಯಾವುದು ತಪ್ಪು ಯಾವುದು ಸರಿ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಿ ಉತ್ತಮವಾದ ನಿರ್ಧಾರಗಳನ್ನು ಶ್ರೀಸಾಮಾನ್ಯರು ತೆಗೆದುಕೊಂಡರೆ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಇಲ್ಲದಾಗಿಸಬಹುದುದು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಎಸ್ಡಿಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ರಿಯಾಝ್ ಫರಂಗಿಪೇಟೆ ಮಾತನಾಡಿ, ಸ್ವ ಜನಾಂಗದ ಜನರ ನಡುವೆ ಉತ್ತಮ ಬಾಂಧವ್ಯ ಬೆದುಕೊಳ್ಳಲು ಇಲ್ಲಿನ ಉಲಮಾಗಳ ಶ್ರಮವಿದೆ. ಧಾರ್ಮಿಕ ಚಟುವಟಿಕೆಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೇ ಒಲಿತಿನ ಬೋಧನೆಯಾಗಬೇಕು ಜೊತೆಗೆ ಕೆಡುಕಿನ ಸಂಹಾರವಾಗಬೇಕಿದೆ. ಸಮಾಜ ಅಧೋಗತಿಗೆ ತಳ್ಳಲ್ಪಡುತ್ತಿದೆ. ರಾಜಕೀಯಕ್ಕಾಗಿ ಧರ್ಮಗಳನ್ನು ಪ್ರತ್ಯೇಕಿಸ ಲಾಗುತ್ತಿದೆ. ಇಂತಹಾ ಕುತಂತ್ರಗಳಿಗೆ ಸಮುದಾಯ ಬಲಿಯಾಗಬಾರದು ಎಂದು ಅವರು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಮುಹಮ್ಮದ್ ಅಝ್ಹರ್ಫೈಝಿ ಬೊಳ್ಳೂರು ಉಸ್ತಾದ್ ವಹಿಸಿದ್ದರು. ಪಾಣಕ್ಕಾಡ್ ಕುಟುಂಬಸ್ಥರಾದ ಸೈಯ್ಯದ್ ಸ್ವಾಬಿಖಲಿ ಶಿಹಾಬ್ ತಂಙಳ್ ದುವಾ ಆಶೀರ್ವಚನೆ ಗೈದರು. ಅಹ್ಮದ್ ನಈಂ ಫೈಝಿ ಮುಕ್ವೆ ಪ್ರಾಸ್ತಾವಿಕ ಭಾಷಣಗೈದರು.
ಸಮಾರಂಭದಲ್ಲಿ ಇಡ್ಯಾ ಮುಹಿಯುದ್ದೀನ್ ಕೇಂದ್ರ ಜುಮಾ ಮಸೀದಿಯ ಖತೀಬ್ ಹಾಫಿಲ್ ಜಿ.ಎಂ. ಸುಲೈಮಾನ್ ಹನೀಫಿ, ದ.ಕ. ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್, ಖಿಲ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಅಬೂಬಕರ್ ಕೃಷ್ಣಾಪುರ, ಉದ್ಯಮಿ ಅಸ್ಗರ್ ಅಲಿ, ಬಿಎಂಆರ್ ಗ್ರೂಪ್ನ ದಾವೂದ್ ಹಕೀಮ್, ಮಾಜಿ ಶಾಸಕ ಮೊಯ್ದಿನ್ ಬಾವ ಅವರ ಪುತ್ರ ಮೆಹಶೂಫ್ ಬಾವ, ಎಂ.ಜೆ.ಎಂ. ಮತ್ತು ಇಜೆಎಂ ಸುರತ್ಕಲ್ನ ಗೌರವಾಧ್ಯಕ್ಷ ಐ. ಯಾಕೂಬ್, ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಹಂಝ, ಉದ್ಯಮಿ ಶಂಶುದ್ದೀನ್, ಖಿಲ್ರಿಯಾ ಮೌಲೂದ್ ಕಮಿಟಿಯ ಅಧ್ಯಕ್ಷ ಇಲ್ಯಾಸ್, ಖಿಲ್ರಿಯಾ ವಿದ್ಯಾ ಸಮಿತಿಯ ಕಾರ್ಯದರ್ಶಿ ಐ.ಬಿ. ಇಮ್ತಿಯಾಝ್ ಅಹ್ಮದ್, ಖಿಲ್ರಿಯಾ ಯಂಗ್ಮೆನ್ಸ್ ಅಧ್ಯಕ್ಷ ಮುಹಮ್ಮದ್ ಶಾವಿದ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಇಡ್ಯಾ ಖಿಲ್ರಿಯಾ ಜುಮಾ ಮದಸೀದಿಯ ಇಮಾಮರಾದ ಜಲೀಲ್ ಫೈಝಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಇಡ್ಯಾ ಖಿಲ್ರಿಯಾ ಮಸೀದಿ ಮತ್ತು ಮದ್ರಸ ಸಮಿತಿಯ ಗೌರವಾಧ್ಯಕ್ಷ ಹಾಜಿ ಐ. ಮೊಯ್ದಿನಬ್ಬ ವಹಿಸಿದ್ದರು. ಇಡ್ಯಾ ಸುರತ್ಕಲ್ಜುಮಾ ಮಸೀದಿಯ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಹಾಫಿಲ್ ಜಿ.ಎಂ. ಸುಲೈಮಾನ್ ಹನೀಫಿ ಅವರು, "ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಯುವಜನಾಂಗ" ವಿಷಯದ ಕುರಿತು ಮುಖ್ಯಭಾಷಣಗೈದರು.
ಕಾರ್ಯಕ್ರಮದ ವೇದಿಕೆಯಲ್ಲಿ ಖಿಲ್ರಿಯಾ ಮೌಲೂದ್ ಸಮಿತಿಯ ಅಧ್ಯಕ್ಷ ಇಲ್ಯಾಸ್, ಪ್ರಧಾನ ಕಾರ್ಯದರ್ಶಿ ಐ.ಬಿ. ಇಂಮ್ತಿಯಾಝ್, ಜೊರೆ ಕಾರ್ಯದರ್ಶಿ ಫಯಾಝ್, ಖಿಲ್ರಿಯಾ ಯಂಗ್ಮೆನ್ಸ್ಅಧ್ಯಕ್ಷ ಮುಹಮ್ಮದ್ ಶಾವಿದ್, ಖಝಾಂಚಿ ಯೂಸುಫ್ ಬಾಪುಂಞ್ಞಿ, ಸದಸ್ಯ ಮುಹಮ್ಮದ್ ಹನೀಫ್ ಹಾಗೂ ಮಸೀದಿಯ ಉಸ್ತಾದರು ಮೊದಲಾದವರು ಉಪಸ್ಥಿತರಿದ್ದರು.