ಕರ್ತವ್ಯ ಲೋಪ ಆರೋಪ: ಪಾಂಡೇಶ್ವರ ಠಾಣೆಯ ಮಹಿಳಾ ಪೊಲೀಸ್ ಅಮಾನತು
ಮಂಗಳೂರು, ಮಾ.3: ದೂರುದಾರರ ವಿರುದ್ಧವೇ ಕರ್ತವ್ಯಕ್ಕೆ ಅಡ್ಡಿ ಆರೋಪ ಹೊರಿಸಿ ಸ್ವತಃ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಪಾಂಡೇಶ್ವರ ಠಾಣೆಯ ಹೆಡ್ಕಾನ್ಸ್ಟೆಬಲ್ ಶ್ರೀಲತಾರನ್ನು ಮಂಗಳೂರು ಪೊಲೀಸ್ ಆಯುಕ್ತರು ಅಮಾನತು(Suspend)ಗೊಳಿಸಿದ್ದಾರೆ.
ದಂಪತಿಯ ಮಧ್ಯೆ ನಡೆಯುತ್ತಿದ್ದ ಕಲಹಕ್ಕೆ ಸಂಬಂಧಿಸಿ ಬಂದ ದೂರಿನ ಹಿನ್ನೆಲೆಯಲ್ಲಿ ನಗರದ ಕ್ಲಾಕ್ ಟವರ್ ಬಳಿ ಹೊಯ್ಸಳ ವಾಹನದಲ್ಲಿ ಕರ್ತವ್ಯದಲ್ಲಿದ್ದ ಶ್ರೀಲತಾ ಅಲ್ಲಿಂದ ಖಾಸಗಿ ವಾಹನದಲ್ಲಿ ತೆರಳಿ ಸಂಧಾನದ ನೆಪದಲ್ಲಿ ಹಣಕಾಸಿನ ವ್ಯವಹಾರ ಕುದುರಿಸಲು ಮುಂದಾಗಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ ದೂರುದಾರರು ಮೊಬೈಲ್ ಫೋನ್ ನಲ್ಲಿ ವೀಡಿಯೋ ಮಾಡುತ್ತಿದ್ದಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಶ್ರೀಲತಾ ದೂರು ದಾಖಲಿಸಿದ್ದರು. ಈ ಬಗ್ಗೆ ಫೆ.23ರಂದು ಬಂದ ದೂರಿನ ಮೇರೆಗೆ ತನಿಖೆ ನಡೆಸಿದಾಗ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಫೆ.28ರಂದು ಶ್ರೀಲತಾರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಇಲಾಖಾ ವಿಚಾರಣೆ ಆರಂಭಿಸಲಾಗಿದೆ ಎಂದು ಡಿಸಿಪಿ ಅಂಶುಕುಮಾರ್ ತಿಳಿಸಿದ್ದಾರೆ.