ನರಿಂಗಾನ: ಮಾ. 25ರಂದು ಹೊನಲು ಬೆಳಕಿನ ಕಂಬಳ
ಕೊಣಾಜೆ: ಉಳ್ಳಾಲ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಕಂಬಳ ಆಯೋಜನೆ ಮಾಡಲಾಗಿದ್ದು ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ಲವಕುಶ ಜೋಡುಕರೆ ಹೆಸರಿನಲ್ಲಿ ನರಿಂಗಾನ ಕಂಬಳ ಮಾ. 25ರಂದು ಬೆಳಗ್ಗೆ 10.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.
ನರಿಂಗಾನ ಕಂಬಳ ಕರೆಯ ಬಳಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾ. 25ರಂದು ಬೆಳಗ್ಗೆ ಶ್ರೀ ಕ್ಷೇತ್ರ ಶಾಂತಿಪಳಿಕೆಯ ಪ್ರಧಾನ ಪ್ರಧಾನ ತಂತ್ರಿಗಳಾದ ವೇದಮೂರ್ತಿ ವರ್ಕಾಡಿ ರಾಜೇಶ್ ತಾಳಿತ್ತಾಯರವರು ದೀಪ ಪ್ರಜ್ವಲಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಲಿದ್ದಾರೆ ಹಾಗೆ ಕರೆಯನ್ನು ಶ್ರೀ ಕ್ಷೇತ್ರ ಕಣಂತೂರಿನ ಆಡಳಿತ ಮೊಕ್ತೇಸರ ಶ್ರೀ ತಿಮ್ಮಪ್ಪ ಕೊಂಡೆಯಾನೆ ಮಂಜು ಭಂಡಾರಿ ಅವರು ಉದ್ಘಾಟಿಸಲಿದ್ದಾರೆ ಎಂದರು.
ಈ ಕಂಬಳ ಮಂಗಳೂರು ಕ್ಷೇತ್ರದಾದ್ಯಂತ ಸಂಭ್ರಮ ಸಡಗರ ಮನೆ ಮಾಡಿದೆ. ಪ್ರತಿ ಮನೆಗೆ ಜಾತ್ರೆಯಂತೆ ನೆಂಟರು ಸೇರಲಿದ್ದಾರೆ. ಕ್ಷೇತ್ರದ ಶಾಸಕನ ನೆಲೆಯಲ್ಲಿ ನನ್ನದೇ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಂಬಳ ಪಕ್ಷ, ಧರ್ಮ, ಜಾತಿ, ಬಡವ ಬಲ್ಲಿದ, ಮೇಲು ಕೀಳೆಂಬ ಭಾವನೆಯೇ ಸೃಷ್ಟಿಯಾಗಲು ಅವಕಾಶ ಕೊಡದ ಕಂಬಳ ಎಂದರು.
ಬೆಳ್ಳಿಹಬ್ಬ ದಾಖಲಿಸಿದಂತಹ ಪಜೀರು ಕಂಬಳದ ಶ್ರೇಯಸ್ಸಿಗೆ ಪಾತ್ರವಾದ ಕಂಬಳ ನಡೆಸಿದ ಹಿರಿಯರು, ಅನುಭವಿಗಳು ಕಂಬಳದ ಕೋಣದ ಯಜಮಾನರು ಆಗಿರುವ ವೆಂಕಪ್ಪ ಕಾಜವ ಮಿತ್ತಕೋಡಿ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯಲಿರುವ ನರಿಂಗಾನ ಕಂಬಳ ಸಮಾಜ ಸೇವಕರು ಕಂಬಳ ಪ್ರೇಮಿಯೂ ಸಂಘಟಕರೂ ಆಗಿರುವಂತಹ ಪ್ರಶಾಂತ್ ಕಾಜವ ಮಿತ್ತಕೋಡಿ ಅವರ ಕಾರ್ಯಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.
ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ ಕಂಬಳದಲ್ಲಿ ಕಾನೂನು ಉಲ್ಲಂಘನೆ ಆಗದಂತೆ "ಪೇಟಾದ ನಿಯಮ ಪ್ರಕಾರ"ವೇ ಕಂಬಳ ನಡೆಸುವ ಸಲುವಾಗಿ ದಕ್ಷರನ್ನೊಳಗೊಂಡ ಕಂಬಳ ಪ್ರೇಮಿಗಳೇ ಇರುವ ಕಂಬಳ ಸಮಿತಿ ಹಾಗೂ ಇತರ ಉಪ ಸಮಿತಿ ರಚಿಸಲಾಗಿದೆ. 24ಗಂಟೆ ಒಳಗೆ ಮುಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ, ಹಾಗಿದ್ದರೂ ಯಾವುದಕ್ಕೂ ದೂರದ ಊರಿನಿಂದ ಬಂದ ಸೇರಲಿರುವ ಕೋಣಗಳ ಯಜಮಾನರ ಸಹಕಾರದ ನಿರೀಕ್ಷೆಯಲ್ಲಿದ್ದೇವೆ ಎಂದರು.
ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಮಾತನಾಡಿ ಮೋರ್ಲ ಬೋಳದ ಈ ಗದ್ದೆಯನ್ನು ಶಾಸಕರು ಕೇವಲ ಒಂದು ದಿನದಲ್ಲಿ ನಿರ್ಧರಿಸಿ ಮರುದಿನವೇ ಶಿಲಾನ್ಯಾಸಗೆಯುವ ಮೂಲಕ ಕರೆಯನ್ನು ತ್ವರಿತ ಅವಧಿಯಲ್ಲಿ ಬಹಳ ಸುಂದರವಾಗಿ ನಿರ್ಮಿಸಿರುವುದು ದಾಖಲೆಯೇ ಸರಿ. ಸಾಧಾರಣವಾಗಿ 170 ಮೀಟರ್ ಉದ್ದದ ಕರೆಯ ನಿರ್ಮಾಣ ಬಹಳ ಅಪರೂಪ ಅಂತಹ ಒಂದು ಕರೆಯನ್ನು ಈ ಲವಕುಶ ಜೋಡು ಕರೆ ಕಂಬಳಕ್ಕಾಗಿ ನಿರ್ಮಿಸಲಾಗಿದೆ ಎಂದರು.ಈಗಾಗಲೇ ಮಹಿಳೆಯರಿಗಾಗಿ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆಯನ್ನು ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸಲಿಕ್ಕಿದ್ದಾರೆ ಬೆಳಗ್ಗಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರುಗಳಾದ ಗುಣಕರ ಆಳ್ವ ಯಾನೆ ರಾಮ ರೈ ಬೋಳಿಯಾರ್, ಮಂಗಿಲ್ ಮಾರ್ ಶ್ರೀ ಅಣ್ಣಪ್ಪ ಸ್ವಾಮಿ ಹಾಗೂ ಪರಿವಾರದ ದೈವಗಳ ದೈವಸ್ಥಾನದ ಆಡಳಿತ ಮೊಕ್ತೇಸರ ಬಡಾಜೆ ರವಿಶಂಕರ್ ಶೆಟ್ಟಿ, ಶ್ರೀ ಕ್ಷೇತ್ರ ತಲಪಾಡಿಯ ಪ್ರಧಾನ ಅರ್ಚಕರಾಗಿರುವಂತ ಗಣೇಶ್ ಭಟ್ ಪಂಜಾಲ, ದೇವಂದಪಡ್ಪು ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ಯ, ಶ್ರೀ ಕ್ಷೇತ್ರ ಶಾಂತಿಪಳಿಕೆಯ ಆಡಳಿತ ಮೊಕ್ತೇಸರ ಪ್ರಸನ್ನ ಪಕ್ಕಳ ಬಲೆತ್ತೋಡು, ಕಂಬಳ ಸಮಿತಿಯ ಜಿಲ್ಲಾಧ್ಯಕ್ಷರಾಗಿರುವಂತಹ ಎರ್ಮಾಳು ರೋಹಿತ್ ಹೆಗ್ಡೆ, ಹಾಗೆ ಕೆ ರವೀಂದ್ರ ಶೆಟ್ಟಿ ಉಳಿದೊಟ್ಟು ಅಬ್ದುಲ್ ಅಝೀಝ್ ಯಾನೆ ಮೈಸೂರು ಬಾಬಾ, ಎಸಿಪಿ ಕುಮಾರಿ ಧನ್ಯಾ ನಾಯಕ್, ಪಣಂಬೂರು ಇಡ್ಯ ಶ್ರೀ ಧೂಮಾವತಿ ದೇವಸ್ಥಾನದ ಗಡಿ ಪ್ರಧಾನ ರದಂತಹ ಪ್ರಭಾಕರ್ ರೈ ಯಾನೆ ಅಣ್ಣಪ್ಪ ಅರುವಾಲ್ ಸ್ಥಳೀಯ ಸಂತ ಲಾರೆನ್ಸರ ದೇವಾಲಯದ ಧರ್ಮ ಗುರುಗಳಾಗಿರುವಂತಹ ರೆ. ಫಾ. ಪೆಡ್ರಿಕ್ ಕೊರೆಯಾ, ನೆತ್ತಿಲ ಬಾಳಿಕೆ ಗಡಿಪ್ರದಾನರಾಗಿರುವ ಶ್ರೀ ಮೋಹನ್ ದಾಸ್ ಭಂಡಾರಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರ ಪ್ರಶಾಂತ್ ಕಾಜವ ಮಿತ್ತಕೋಡಿ, ಪ್ರಧಾನ ಕಾರ್ಯದರ್ಶಿ ನವಾಝ್ ನರಿಂಗಾನ, ಉಪಾಧ್ಯಕ್ಷರುಗಳಾದ ಚಂದ್ರಹಾಸ ಶೆಟ್ಟಿ ಮೋರ್ಲಗುತ್ತು, ಕರುಣಾಕರ ಶೆಟ್ಟಿ ಮೋರ್ಲ, ಮ್ಯಾಕ್ಸಿಯಮ್ ಡಿಸೋಜ, ಮಹಿಳಾ ವಿಭಾಗ ಅದ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ , ಪ್ರಧಾನ ಸಂಚಾಲಕ ಗಿರೀಶ್ ಆಳ್ವ ಮೋರ್ಲ , ಕೋಶಾಧಿಕಾರಿಅಬ್ದುಲ್ ಜಲೀಲ್ ಮೋಂಟುಗೋಳಿ, ಜೊತೆ ಕಾರ್ಯದರ್ಶಿಗಳಾದ ಪ್ರೇಮಾನಂದ ರೈ ನೆತ್ತಿಲಕೋಡಿ, ವೈಭವ್ ಶೆಟ್ಟಿ ತಲಪಾಡಿ, ಸಂಚಾಲಕ ನಾಸಿರ್ ನಡುಪದವು, ಮುರಳೀಧರ ಶೆಟ್ಟಿ ಮೋರ್ಲ, ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ ಪಾರೆ, ಸಹ ಸಂಚಾಲಕರಾದ ಜೋಸೆಫ್ ಕುಟಿನ್ಹ , ವಿನಯ್ (ವಿನು) ಶೆಟ್ಟಿ ನಾರ್ಲ ತಲಪಾಡಿ ಹಾಗೂ ಅಜೀಝ್ ಆರ್ ಕೆ ಸಿ ಹಾಗೂ ಸುಂದರ ಪೂಜಾರಿ ಕೋಡಿಮಜಲು ಮೋರ್ಲ, ಮಾಧ್ಯಮ ಸಂಚಾಲಕ ಸತೀಶ್ ಕುಮಾರ್ ಪುಂಡಿಕಾಯಿ ಉಪಸ್ಥಿತರಿದ್ದರು.