ಮುಸ್ಲಿಮ್ 2B ಮೀಸಲಾತಿ ರದ್ದು: ಉಳ್ಳಾಲ ದರ್ಗಾ ಸಮಿತಿಯಿಂದ ಬೃಹತ್ ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು,ಮಾ.26: ಹಿಂದುಳಿದ ವರ್ಗಗಳ 2ಬಿ ಅಡಿಯಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ ಶೇ 4% ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಲಿಂಗಾಯುತ ಮತ್ತು ಒಕ್ಕಲಿಗರಿಗೆ ಹಂಚಿಕೆ ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಖಂಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.
ಮುಸ್ಲಿಮರಿಗೆ 2B ಅಡಿಯಲ್ಲಿ ನೀಡುತ್ತಿದ್ದ ಮೀಸಲಾತಿಯನ್ನು ಕೈಬಿಟ್ಟಿರುವ ನಿರ್ಧಾರವನ್ನು ಹಿಂಪಡೆಯಲು
ಮುಖ್ಯಮಂತ್ರಿಗೆ ಪತ್ರ ಬರೆಯುವುದಾಗಿ ತಿಳಿಸಿದ ಅವರು ಶೈಕ್ಷಣಿಕವಾಗಿಯೂ, ಸಾಮಾಜಿಕವಾಗಿಯೂ ಹಿಂದುಳಿದಿರುವ ಮುಸ್ಲಿಮರಿಗೆ 2ಬಿ ಅಡಿಯಲ್ಲಿ ನಿಡುತ್ತಿದ್ದ ಶೇ 4% ಮೀಸಲಾತಿ ರದ್ದತಿ ಮುಸ್ಲಿಮರನ್ನು ಶೈಕ್ಷಣಿಕವಾಗಿ ಇನ್ನಷ್ಟು ಹಿಂದೆ ತಳ್ಳಲು ಕಾರಣವಾಗಲಿದೆ ಎಂದಿದ್ದಾರೆ.
1979ರ ಏಪ್ರಿಲ್ 9ರ ಕರ್ನಾಟಕ ಹೈಕೋರ್ಟ್ ತೀರ್ಪಿನಲ್ಲಿ ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು
ಎಂಬುದು ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆಯಲು ಕಾರಣವಾಗವುದಿಲ್ಲ ಎಂದು ಸ್ಪಷ್ಟವಾಗಿ
ಆದೇಶಿಸಿದೆ ಎಂದರು.
ಈ ಬಗ್ಗೆ ಉಳ್ಳಾಲ ದರ್ಗಾ ಸಮಿತಿ ಸಾವಿರ ಜಮಾಅತ್ ನ ಮೊಹಲ್ಲಾ ಪದಾಧಿಕಾರಿಗಳ ಜತೆ ಸಭೆ ಕರೆದು
ಮುಂದಿನ ಹೋರಾಟದ ಬಗ್ಗೆ ಹಾಗೂ ಕಾನೂನು ಹೋರಾಟದ ಬಗ್ಗೆ ಚರ್ಚಿಸಲಾಗುವುದು ಎಂದು ದರ್ಗಾ
ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.