ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ನವೀಕೃತ ಡಯಾಲಿಸಿಸ್ ಘಟಕ, ಪ್ರಯೋಗ ಶಾಲಾ ಉಪಕರಣ ಉದ್ಘಾಟನೆ
ಪುತ್ತೂರು: ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನವೀಕೃತ ಡಯಾಲಿಸೀಸ್ ಘಟಕ ಮತ್ತು ಪ್ರಯೋಗ ಶಾಲಾ ಉಪಕರಣಗಳನ್ನು ಶಾಸಕ ಸಂಜೀವ ಮಠಂದೂರು ಅವರು ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು ಸರಕಾರಿ ಆಸ್ಪತ್ರೆಗಳು ಯಾವುದೇ ಖಾಸಾಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನದ ಮೂಲಕ ಈ ವ್ಯವಸ್ಥೆ ಮಾಡಲಾಗಿದೆ. ರೋಟರಿ ಸಂಸ್ಥೆಯ ಕೊಡುಗೆಯೂ ಇಲ್ಲಿ ಸ್ಮರಣೀಯವಾಗಿದೆ. ಆಸ್ಪತ್ರೆಯ ಮುಂಭಾಗದಲ್ಲಿ ಜನೌಷಧಿ ಕೇಂದ್ರವನ್ನು ಸ್ಥಾಪಿಸುವ ಮೂಲಕ ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ನೀಡುವ ಕೆಲಸ ಕಾರ್ಯಗಳು ನಡೆದಿದೆ. ಯಶಸ್ವಿನಿ ಯೋಜನೆಯನ್ನು ಜಾರಿಗೊಳಿಸಿ ಆರ್ಥಿಕವಾಗಿ ಬಲಾಢ್ಯರಿಗೂ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಪ್ರಸ್ತುತ ಸರ್ಕಾರವು ಹೈಟೆಕ್ ಆಸ್ಪತ್ರೆಗಳು ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಯೋಜನೆಗಳನ್ನು ರೂಪಸಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ ಪುತ್ತೂರು ಜಿಲ್ಲಾ ಕೇಂದ್ರವಾಗುವ ಸಂದರ್ಭದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆ 300 ಬೆಡ್ ಗೆ ಮೇಲ್ದರ್ಜೆಗೇರುವ ಜತೆಗೆ ಸರಕಾರಿ ಮೆಡಿಕಲ್ ಕಾಲೇಜು ಪೂರ್ವ ಯೋಜನೆಯಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.
ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಗಿರೀಶ್ ನಂದನ್, ನಗರಸಭೆ ಅಧ್ಯಕ್ಷ ಕೆ. ಜೀವಂಧರ ಜೈನ್. ಉಪಾಧ್ಯಕ್ಷೆ ವಿದ್ಯಾಗೌರಿ, ಸಂಪ್ಯ ಆನಂದಾಶ್ರಮದ ಟ್ರಸ್ಟ್ನ ಅಧ್ಯಕ್ಷೆ ಡಾ.ಗೌರಿ ಪೈ, ತಾಲೂಕು ಆರೋಗ್ಯಾಧಿ ಕಾರಿ ಡಾ.ದೀಪಕ್ ರೈ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಮಹಮ್ಮದ್ ರಫೀಕ್ ದರ್ಬೆ, ಡಾ ಪ್ರಸನ್ನ, ರಾಜೇಶ್ ಬನ್ನೂರು, ಕೃಷ್ಣ ನಾಯ್ಕ ಪಿ.ಎಂ, ರೋಟರಿ ಸಂಸ್ಥೆಯ ಪ್ರಕಾಶ್ ಕಾರಂತ್, ಪೀಟರ್ ವಿಲ್ಸನ್ ಪ್ರಭಾಕರ್, ವಿಶ್ವಾಸ್ ಶೆಣೈ, ನಾರಾಯಣ ಹೆಗ್ಡೆ, ರಾಜೇಶ್ವರಿ ಆಚಾರ್, ಆಸ್ಪತ್ರೆಯ ವೈದ್ಯರಾದ ಡಾ. ವಿಶ್ವನಾಥ್, ಡಾ. ಶ್ವೇತ, ಡಾ. ಯದುರಾಜ್ ಮತ್ತಿತರರು ಉಪಸ್ಥಿತರಿದ್ದರು .
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ಸ್ವಾಗತಿಸಿದರು. ಡಾ. ಜಯದೇವ್ ವಂದಿಸಿದರು.