ಮಂಗಳೂರು: ಬೈಕ್ ಕಳವು ಮಾಡಿದ್ದ ಇಬ್ಬರು ಆರೋಪಿಗಳ ಬಂಧನ
ಮಂಗಳೂರು, ಮಾ.29: ಬೈಕ್ ಕಳವು ಮಾಡಿ ನಗರಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿ ಎರಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ ಸ್ಟೇಡಿಯಂ ಸರ್ಕಲ್ ಬಳಿಯ ನಿವಾಸಿ ಫಾರಿಶ್ ಶರ್ಮಾ ಯಾನೆ ಗಿಲ್ಲು (19) ಮತ್ತು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಐಯುಡಿಪಿ ಲೇಔಟ್ 3ನೇ ಕ್ರಾಸ್ ನಿವಾಸಿ ಧನುಷ್ (20) ಬಂಧಿತ ಆರೋಪಿಗಳು.
ನಗರದ ಮಲ್ಲಿಕಟ್ಟೆಯ ಬಳಿ ಮಂಗಳವಾರ ಪೊಲೀಸರನ್ನು ಕಂಡ ಇಬ್ಬರು ಬೈಕ್ ಸವಾರರು ಸಂಶಯಾಸ್ಪದವಾಗಿ ವರ್ತಿಸಿದ್ದು, ತಕ್ಷಣ ಅವರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಈ ಹಿಂದೆ ಪಂಪ್ವೆಲ್ ಕಪಿತಾನಿಯಾ ಬಳಿ ಕಳವು ಮಾಡಿದ್ದ ಯಮಹಾ ಆರ್ಎಕ್ಸ್ ಬೈಕ್ ಹಾಗೂ ವೆಲೆನ್ಸಿಯಾ ಬಳಿ ಕಳವು ಮಾಡಿದ್ದ ಬಜಾಜ್ ಪಲ್ಸರ್ ಬೈಕ್ಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 85,000 ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಚಿತ್ರದುರ್ಗ ಜಿಲ್ಲೆಯ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು ಪ್ರಕರಣದಲ್ಲಿ ಆರೋಪಿ ಫಾರಿಶ್ ಶರ್ಮಾ ಭಾಗಿಯಾಗಿದ್ದ ಪೊಲೀಸರು ಮಾಹಿತಿ ನೀಡಿದ್ದಾರೆ.