-

ಚುನಾವಣಾ ಅಕ್ರಮ ತಡೆಗಟ್ಟಲು ಜಿಲ್ಲಾದ್ಯಂತ ‘ಮಫ್ತಿ’ ನಿಗಾ: ದ.ಕ. ಡಿಸಿ ರವಿಕುಮಾರ್

-

ದ.ಕ. ಡಿಸಿ ರವಿಕುಮಾರ್

ಮಂಗಳೂರು, ಎ.1: ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಕಟಿಬದ್ಧವಾಗಿದ್ದು, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಜಿಲ್ಲಾದ್ಯಂತ ಮಫ್ತಿಯಲ್ಲಿ ನಿಗಾ ವಹಿಸಲಾಗುವುದು ಎಂದು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

ಚುನಾವಣೆಗೆ ಸಂಬಂಧಿಸಿದಂತೆ ಮಾಲ್‌ಗಳು, ಸಭಾಭವನಗಳು, ಮದುವೆ ಮಂಟಪಗಳು, ಚಲನಚಿತ್ರ ಮಂದಿರಗಳ ಮಾಲಕರೊಂದಿಗೆ ನಗರದ ಜಿಲ್ಲಾಧಿಕಾರಿಯ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮತ ಗಳಿಸುವ ಉದ್ದೇಶದಿಂದ ಯಾವುದೇ ಪಕ್ಷದ ಮುಖಂಡರು, ಅಭ್ಯರ್ಥಿಗಳು ಅಥವಾ ಕಾರ್ಯಕರ್ತರು ಹಣ, ವಸ್ತು ರೂಪದ ಉಡುಗೊರೆ ಅಥವಾ ಇನ್ನಿತರ ಆಮಿಷಗಳನ್ನು ಒಡ್ಡಿದರೆ ಮಾಹಿತಿ ನೀಡುವಂತೆಯೂ ಡಿಸಿ ರವಿಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳು, ಕಾರ್ಯಕರ್ತರು ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಟೋಕನ್/ರಹಸ್ಯ ಸಂಖ್ಯೆ ಅಥವಾ ಸಂಕೇತ ನೀಡಿ ಅದರ ಆಧಾರಗಳಲ್ಲಿ, ಚಿನ್ನದ ಮೂಗಿನ ಬೊಟ್ಟು, ಕಿವಿಯೋಲೆ, ಹೊಸಬಟ್ಟೆ, ಪೆಟ್ರೋಲ್ ಖರೀದಿಗೆ ಅವಕಾಶ ಕಲ್ಪಿಸಿ ಆಮಿಷ ಒಡ್ಡುವ ಸಾಧ್ಯತೆಗಳಿವೆ. ಜಿಲ್ಲೆಯ ಆಭರಣ ಮಳಿಗೆಗಳು, ಆಭರಣ ತಯಾರಕರು, ಪೆಟ್ರೋಲ್ ಬಂಕ್, ಸೀಮೆಎಣ್ಣೆ ಮಾರಾಟ ಮಳಿಗೆಗಳು, ವಾಹನಗಳ ಬ್ರೋಕರ್‌ಗಳು, ಲೇವಾದೇವಿದಾರರು  ಅಥವಾ ಈ ರೀತಿ ಚಟುವಟಿಕೆಗಳಲ್ಲಿ  ತೊಡಗಿರುವ ಇತರ ವ್ಯಕ್ತಿಗಳನ್ನು ಬಳಸಿ ಚುನಾವಣಾ ಅಕ್ರಮಗಳನ್ನು ನಡೆಸುವ ಬಗ್ಗೆಯೂ ಅಧಿಕಾರಿಗ ತಂಡ ವಿಶೇಷ ನಿಗಾ ವಹಿಸಲಿದೆ. ಈ ತಂಡದ ಸದಸ್ಯರು ಮಫ್ತಿಯಲ್ಲಿ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಇಂತಹ ಅಕ್ರಮಗಳ ಬಗ್ಗೆಯೂ ಸಾರ್ವಜನಿಕರು ಚುನಾವಣಾಧಿಕಾರಿಯ ಗಮನಕ್ಕೆ ತರಬಹುದು ಎಂದರು.

ಮಾಲ್‌ಗಳು, ಮದುವೆ ಮಂಟಪಗಳು, ಸಭಾಭವನಗಳು, ಚಲನಚಿತ್ರ ಮಂದಿರಗಳ ಮಾಲಕರನ್ನು ಬಳಸಿಕೊಂಡು ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಬಾರದು. ಒಂದು ವೇಳೆ ಉಲ್ಲಂಘನೆ ಮಾಡಿದ್ದು ಕಂಡು ಬಂದಲ್ಲಿ ಆಯಾ ಪ್ರದೇಶದ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕು. ಮದುವೆ ಮಂಟಪಗಳು, ಸಭಾಭವನಗಳು ಮಾಲ್‌ಗಳಲ್ಲಿ ರಾಜಕೀಯ ಪಕ್ಷಗಳು ಕಾರ್ಯಕ್ರಮ ನಡೆಸಬೇಕಿದ್ದರೆ ಸಂಬಂಧಿಸಿದ ಚುನಾವಣಾ ಅಧಿಕಾರಿಗಳ ಮೂಲಕ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಗೆ ಏಕಗವಾಕ್ಷಿ ಪದ್ಧತಿ ಮೂಲಕ ಅನುಮತಿ ಪಡೆಯಬೇಕು. ಕೆಲವೊಮ್ಮೆ ಅರಿವಿಲ್ಲದೆ ಆದಲ್ಲಿ ಅಥವಾ ಅಧಿಕೃತ ಕಾರ್ಯಕ್ರಮ ಹಮ್ಮಿಕೊಂಡು ಮತದಾರರಿಗೆ ಆಮಿಷವೊಡ್ಡಿದ್ದಲ್ಲಿ ಅಥವಾ ಅಕ್ರಮ ಹಣ, ಮದ್ಯ, ಕುಕ್ಕರ್, ಸೀರೆ, ಡ್ರಗ್ಸ್ ಇತ್ಯಾದಿ ಉಡುಗೊರೆಗಳನ್ನು ನೀಡಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

ಸಮಾರಂಭದ ಚಟುವಟಿಕೆಗಳನ್ನು ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ವೀವಿಂಗ್ ತಂಡದವರು ಚಿತ್ರೀಕರಿಸಿಕೊಳ್ಳು ವರು, ನೀತಿ ಸಮಿತಿ ಉಲ್ಲಂಘನೆಯಾದರೆ ಪ್ರಕರಣ ದಾಖಲಿಸಲಾಗುವುದು. ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ರಾಜಕೀಯ ಪಕ್ಷಗಳು ದುರ್ಬಳಕೆ ಮಾಡಬಾರದು. ಯಾವುದೇ ಧರ್ಮ, ಜಾತಿಯ ಬಗ್ಗೆ ಅವಹೇಳನ ಮಾಡುವಂತಿಲ್ಲ. ಬ್ಯಾನರ್, ಬಂಟಿಂಗ್ಸ್, ಕಟೌಟ್‌ಗಳನ್ನು ಹಾಕಲು ಅವಕಾಶವಿರುವುದಿಲ್ಲ. ಈ ಹಿಂದೆಯೇ ಪೂರ್ವ ನಿಗದಿಯಾಗಿದ್ದ ಮದುವೆಗೆ ಯಾವುದೇ ರೀತಿಯ ನಿರ್ಬಂಧವಿರುವುದಿಲ್ಲ ಎಂದು ಡಿಸಿ ಹೇಳಿದರು.

ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿ ಸಿವಿಜಿಲ್ ಆ್ಯಪ್ ಅಥವಾ ಸಹಾಯವಾಣಿ (1950)  ಮೂಲಕ ಮಾಹಿತಿ ನೀಡಬಹುದು. ಈ ದೂರುಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗವೇ ಪರಿಶೀಲನೆ ನಡೆಸಲಿದೆ. ಮಾಹಿತಿ ನೀಡಿದವರ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ ಎಂದರು.

ಯಕ್ಷಗಾನ ಮತ್ತಿತರ ಕಲಾ ಪ್ರದರ್ಶನದಲ್ಲಿ ಕಲಾವಿದರು ಪರೋಕ್ಷವಾಗಿ ನಿರ್ದಿಷ್ಟ ಪಕ್ಷದ ಅಥವಾ ರಾಜಕೀಯ ಮುಖಂಡರಿಗೆ ಅನುಕೂಲವಾಗುವಂತೆ ನಡೆದುಕೊಳ್ಳುವ ಬಗ್ಗೆಯೂ ಅಧಿಕಾರಿಗಳು ನಿಗಾ ಇಡಲಿದ್ದಾರೆ. ಕಲೆಯನ್ನು ಕಲಾ ಪ್ರಕಾರವಾಗಿ ಬಳಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಚುನಾವಣಾ ಪ್ರಚಾರಕ್ಕೆ ದುರ್ಬಳಕೆ ಮಾಡಿಕೊಂಡರೆ ಅಂತಹ ಕಲಾವಿದರು, ಕಾರ್ಯಕ್ರಮ ಸಂಘಟಕರು ಹಾಗೂ ಕಲಾ ತಂಡದ ಮಾಲಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಧಾರ್ಮಿಕ ಅಥವಾ ಖಾಸಗಿ ಸಮಾರಂಭದಲ್ಲಿ ಪಕ್ಷ ಮುಖಂಡರು, ಅಭ್ಯರ್ಥಿ ಅಥವಾ ಕಾರ್ಯಕರ್ತರು ಮತ ಯಾಚಿಸಿದರೆ ಆ ಕಾರ್ಯಕ್ರಮಗಳ ಖರ್ಚನ್ನು ಅಭ್ಯರ್ಥಿಯ ವೆಚ್ಚದ ಲೆಕ್ಕಕ್ಕೆ ಸೇರಿಸಲಾಗುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ, ಮಾಧ್ಯಮಗಳಲ್ಲಿ ಬಿತ್ತರವಾಗುವ ಎಲ್ಲ ಸುದ್ದಿಗಳ ಮೇಲೂ ನಿಗಾ ಇಡಲಿದ್ದೇವೆ. ನಿರ್ದಿಷ್ಟ ಪಕ್ಷ ಅಥವಾ ಅಭ್ಯರ್ಥಿಗೆ ನೆರವಾಗುವ ಉದ್ದೇಶದಿಂದ ಸುದ್ದಿ ಬಿತ್ತಿರಿಸಿದರೆ ಅದರ ವಿರುದ್ಧ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ (ಎಂಸಿಎಂಸಿ) ಶಿಫಾರಸಿನ ಆಧಾರದಲ್ಲಿ ಚುನಾವಣಾ ಆಯೋಗವು ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಹೇಳಿದರು.

ಪ್ರಿಂಟಿಂಗ್ ಪ್ರೆಸ್‌ನಲ್ಲಿ ಸಾರ್ವಜನಿಕ ಘೋಷಣೆಗೆ ಆದೇಶ: ಜಿಲ್ಲೆಯ ಯಾವುದೇ ಪ್ರಕಾಶಕರು ಅಥವಾ ಮುದ್ರಣಾಲಯವು ಯಾವುದೇ ಚುನಾವಣಾ ಕರಪತ್ರ, ಕೈ-ಬಿಲ್, ಫಲಕ, ಬ್ಯಾನರ್, ಬಂಟಿಂಗ್, ಪ್ಲೆಕ್ಸ್ ಅಥವಾ ಪೋಸ್ಟರ್‌ಗಳನ್ನು ಮುದ್ರಿಸಿದ ಮುದ್ರಣಾಲಯದ ಹೆಸರು ಮತ್ತು ವಿಳಾಸವನ್ನು ಮುದ್ರಿಸಿ ದಿನಾಂಕ ಮತ್ತು ಪ್ರತಿಗಳ ಸಂಖ್ಯೆಯೊಂದಿಗೆ ಮುದ್ರಿಸಬೇಕು ಎಂದು ಡಿಸಿ ಸೂಚನೆ ನೀಡಿದ್ದಾರೆ.

ಯಾವುದೇ ಮುದ್ರಣ ಅಥವಾ ಪ್ರಕಟನೆಯ 10 ದಿನಗಳೊಳಗೆ ಸದರಿ ಪ್ರಿಂಟಿಂಗ್ ಪ್ರೆಸ್ ಅಥವಾ ಪ್ರಕಾಶಕರು ಮುದ್ರಿತ ವಸ್ತುಗಳ ನಾಲ್ಕು ಪ್ರತಿಗಳನ್ನು ಮತ್ತು ಪ್ರಕಾಶಕರ ಘೋಷಣೆಗಳನ್ನು ಅದರ ಮುದ್ರಣದ ಹತ್ತು ದಿನಗಳೊಳಗೆ ಡಿಸಿಗೆ ಸಲ್ಲಿಸಬೇಕು, ಡಿಇಒ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅದರ ವೈಫಲ್ಯವನ್ನು ಆರ್‌ಪಿ ಕಾಯಿದೆ 1951 ರ 127-ಎ ಉಲ್ಲಂಘನೆ ಎಂದು ಪರಿಗಣಿಸಲಾಗುವುದು. ಇದು ಶಿಕ್ಷಾರ್ಹ ಅಪರಾಧವಾಗಿದೆ. ಈ ಸಾರ್ವಜನಿಕ ಆದೇಶವು ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಕಟವಾಗುವುದರಿಂದ ಜಿಲ್ಲೆಯ ಎಲ್ಲಾ ಮುದ್ರಣಾಲಯಗಳು ಮತ್ತು ಪ್ರಕಾಶಕರು ಎಚ್ಚರಿಕೆ ವಹಿಸಬೇಕು ಎಂದರು.

127-ಎ ಕಲಂನ ನಿಬಂಧನೆಗಳನ್ನು ಉಲ್ಲಂಘಿಸಿ ಚುನಾವಣಾ ಪೋಸ್ಟರ್, ಕರಪತ್ರ ಇತ್ಯಾದಿಗಳನ್ನು ಪ್ರಕಟಿಸುವ ಯಾವುದೇ ಪ್ರಕರಣವು ಗಮನಕ್ಕೆ ಬಂದರೆ ಅಥವಾ ಗಮನಕ್ಕೆ ತಂದರೆ ತ್ವರಿತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂತಹ ಎಲ್ಲಾ ಪ್ರಕರಣಗಳಲ್ಲಿ, ಅಪರಾಧಿಗಳ ವಿರುದ್ಧ ಶೀಘ್ರವಾಗಿ ಕಾನೂನು ಕ್ರಮಗಳನ್ನು ಜರಗಿಸಲಾಗುವುದು ಎಂದು ಡಿಸಿ ರವಿಕುಮಾರ್ ಎಚ್ಚರಿಕೆ ನೀಡಿದರು.

ಆನ್‌ಲೈನ್ ಹಣ ವರ್ಗಾವಣೆ ಮೇಲೆಯೂ ನಿಗಾ: ಆನ್‌ಲೈನ್ ಮೂಲಕ ಮತದಾರರ ಖಾತೆಗೆ ಹಣ ಪಾವತಿಸುವುದರ ಮೇಲೆಯೂ ತಂಡ ನಿಗಾ ಇಡಲಿದೆ. ಒಂದೇ ದಿನದಲ್ಲಿ  10 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಹಣ ಪಡೆದವರ ಹಾಗೂ ನಿರ್ದಿಷ್ಟ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಸಂಶಯಾಸ್ಪದವಾಗಿ ಹಣ ವರ್ಗಾವಣೆಯಾದರೆ ಆ ಬಗ್ಗೆಯೂ ಮಾಹಿತಿ ನೀಡಲಿದೆ ಎಂದು ಮಾದರಿ ನೀತಿ ಸಂಹಿತೆ ಜಾರಿಗೆ ಸಂಬಂಧಿಸಿದ ನೋಡಲ್ ಅಧಿಕಾರಿಯೂ ಆಗಿರುವ ದ.ಕ.ಜಿಪಂ ಸಿಇಒ ಡಾ.ಕುಮಾರ ಹೇಳಿದರು.

ನಿರ್ದಿಷ್ಟ ಖಾತೆಯಿಂದ ಹತ್ತಿಪ್ಪತ್ತು ಮಂದಿಗೆ ಏಕಕಾಲದಲ್ಲಿ ನಿರ್ದಿಷ್ಟ ಮೊತ್ತ ಪಾವತಿಯಾದರೆ ಆ ಬಗ್ಗೆ ಬ್ಯಾಂಕ್‌ಗಳ ಮುಖ್ಯಸ್ಥರು ಆಯಾ ಕ್ಷೇತ್ರದ ಚುನಾವಣಾಧಿಕಾರಿಯ ಗಮನಕ್ಕೆ ತರಲಿದ್ದಾರೆ. ಚುನಾವಣಾಧಿಕಾರಿಯು ಆ ಖಾತೆದಾರರನ್ನು ಕರೆಸಿ ವಿವರಣೆ ಪಡೆಯಲಿದ್ದಾರೆ. ಚುನಾವಣಾ ಅಕ್ರಮ ನಡೆದಿದ್ದರೆ ಅಂತಹ ಖಾತೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ. ಕುಮಾರ್ ಎಚ್ಚರಿಸಿದರು.

ದಾಖಲೆ ಪತ್ರಗಳಿಲ್ಲದೆ ಸಾಗಿಸುವ 50 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತದ ನಗದನ್ನು ವಶಪಡಿಸಿಕೊಂಡರೂ 24 ಗಂಟೆಗಳ ಒಳಗೆ ಸೂಕ್ತ ದಾಖಲೆ ಒದಗಿಸಿದರೆ ಅದನ್ನು ಮರಳಿಸಲಾಗುತ್ತದೆ. ಇಲ್ಲದಿದ್ದರೆ ಹಣವನ್ನು ಜಿಲ್ಲಾ ಖಜಾನೆಗೆ ಜಮೆ ಮಾಡಲಾಗುತ್ತದೆ. ಆ ಬಳಿಕ ಅಕ್ರಮ ನಗದು ಸಾಗಣೆ ಕುರಿತ ಪರಿಶೀಲನಾ ಸಮಿತಿಗೆ ಸೂಕ್ತ ದಾಖಲೆ ಒದಗಿಸಿ ಹಣವನ್ನು ಮರಳಿ ಪಡೆಯಬಹುದು. ದಾಖಲೆ ಒದಗಿಸುವಲ್ಲಿ ವಿಫಲವಾದರೆ ವಶಪಡಿಸಿಕೊಂಡ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಡಾ.ಕುಮಾರ್ ಮಾಹಿತಿ ನೀಡಿದರು.

ಚುನಾವಣಾ ಆಯೋಗ ಹೊರಡಿಸಿರುವ ನೀತಿ ಸಂಹಿತೆಯನ್ನು ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಪಾಲಿಸಬೇಕು, ಮತದಾನಕ್ಕೆ 48 ಗಂಟೆಗಳು ಇರುವಾಗ ಯಾವುದೇ ಮದುವೆ ಮಂಟಪಗಳು, ಸಭಾಭವನದಲ್ಲಿ ಹೊರ ಜಿಲ್ಲೆಯವರು ಇರುವಂತಿಲ್ಲ, ಧಾರ್ಮಿಕ ಸ್ಥಳವನ್ನು ಪ್ರಚಾರಕ್ಕೆ ಬಳಸುವಂತಿಲ್ಲ, ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶವಿದೆ. ಜಾಹೀರಾತು ಪ್ರಕಟಿಸಲು ಜಿಲ್ಲಾ ಮಾಧ್ಯಮ ಪ್ರಾಮಾಣಿಕರಣ ಹಾಗೂ ದೃಢೀಕರಣ ಸಮಿತಿಯಿಂದ ಅನುಮತಿ ಪಡೆದು ಪ್ರಕಟಿಸಬೇಕು ಎಂದು ಹೇಳಿದರು.

ಸಾಮಾಜಿಕ ಮಾಧ್ಯಮಕ್ಕೆ ಲಕ್ಷಣರೇಖೆ: ವಾಟ್ಸ್‌ಆ್ಯಪ್, ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ನಂತಹ  ಸಾಮಾಜಿಕ ಮಧ್ಯಮಗಳ ಮೇಲೂ ದಿನವಿಡೀ ನಿಗಾ ಇಡಲಿದ್ದೇವೆ. ಚುನಾವಣಾ ಪ್ರಚಾರಕ್ಕೆ ಈ ಮಾಧ್ಯಮಗಳು ದುರ್ಬಳಕೆಯಾಗುತ್ತಿರುವುದು ಕಂಡು ಬಂದರೆ ಕ್ರಮ ಕೈಗೊಳ್ಳಲಿದ್ದೇವೆ. ಸಾಮಾಜಿಕ ಮಾಧ್ಯಮಗಳನ್ನು ಲಕ್ಷ್ಮಣ ರೇಖೆ ಅರಿತು ಬಳಸಬೇಕು ಎಂದು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಕೃಷ್ಣಮೂರ್ತಿ ಉಪಸ್ಥಿತರಿದ್ದರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top