40 ಪರ್ಸೆಂಟ್ ಕಮಿಷನ್ - ಗ್ಯಾರಂಟಿಗಳ ನಡುವಿನ ಸ್ಪರ್ಧೆ: ಚರಣ್ ಸಿಂಗ್ ಸಪ್ರಾ
ಮಂಗಳೂರು, ಮೇ 8: ಕರ್ನಾಟಕದಲ್ಲಿ ಮೇ 10ರಂದು ನಡೆಯಲಿರುವ ಚುನಾವಣೆಯು ಬಿಜೆಪಿಯ 40 ಪರ್ಸೆಂಟ್ ಕಮಿಷನ್ ಮತ್ತು ಕಾಂಗ್ರೆಸ್ನ ಐದು ಗ್ಯಾರಂಟಿಗಳ ನಡುವಿನ ಸ್ಪರ್ಧೆಯಾಗಲಿದೆ ಎಂದು ಎಐಸಿಸಿ ರಾಷ್ಟ್ರೀಯ ವಕ್ತಾರ ಚರಣ್ ಸಿಂಗ್ ಸಪ್ರಾ ತಿಳಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ಚುನಾವಣಾ ಪ್ರಚಾರ ವಾಕ್ಚಾತುರ್ಯದಿಂದ ಕೂಡಿದೆ. ದೂರದೃಷ್ಟಿ ಇಲ್ಲ - ವಿಭಜನೆ ಮಾತ್ರ ಇದೆ. ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದ್ದು, ಸರಕಾರ ಬದಲಾದಂತೆ ಕರ್ನಾಟಕದ ಭವಿಷ್ಯ ಬದಲಾಗಲಿದೆ ಎಂದರು.
ಬ್ರ್ಯಾಂಡ್ ಕರ್ನಾಟಕವನ್ನು ರೂಪಿಸುವುದು ಮತ್ತು ಮರುನಿರ್ಮಾಣ ಮಾಡುವುದು ನಮ್ಮ ಕರ್ತವ್ಯವಾಗಿದೆ. ಬಿಜೆಪಿಯ 3.5 ವರ್ಷಗಳ ದುರಾಡಳಿತದಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದೆ. ಕರ್ನಾಟಕ ದೊಡ್ಡ ಪ್ರಮಾಣದ ಭ್ರಷ್ಟಾಚಾರದಿಂದ ನಲುಗಿ ಹೋಗಿದೆ ಎಂದು ಹೇಳಿದರು.
ಕಳೆದ 3.5 ವರ್ಷಗಳಲ್ಲಿ ದೇಶದಲ್ಲಿ ಬಿಜೆಪಿ ಆಡಳಿತದಲ್ಲಿ ‘ಸಂಘಟಿತ ಲೂಟಿ’ ಮತ್ತು ಬಿಜೆಪಿ ‘ಕಾನೂನುಬದ್ಧ ಲೂಟಿ’ ನಡೆದಿದೆ. ಆದರೆ ದುಃಖಕರ ವಿಚಾರವೆಂದರೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಉ.ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಇಲ್ಲಿಗೆ ಚುನಾವಣಾ ಪ್ರಚಾರ ನಡೆಸಲು ಇಲ್ಲಿಗೆ ಬಂದಿದ್ದರು. ಅವರು ಕರ್ನಾಟಕದ ಅಭಿವೃದ್ಧಿ ಅಥವಾ ಪ್ರಗತಿಯ ಬಗ್ಗೆ ಮಾತನಾಡಿಲ್ಲ ಎಂದರು.
ಬಿಜೆಪಿ ಎಂದರೆ ‘ಭ್ರಷ್ಟಾಚಾರಿ ಜನತಾ ಪಾರ್ಟಿ’, ‘ಭಾರತೀಯ ಜುಮ್ಲಾ’ ಪಕ್ಷ’, ಬಿಜೆಪಿ ಎಂದರೆ - ದ್ವೇಷ, ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಟ್ರೆಬಲ್ ಇಂಜಿನ್ ಮತ್ತು ಡಬಲ್ ದ್ರೋಹ ಮಾಡುವ ಪಕ್ಷವಾಗಿದೆ ಎಂದರು.
ಸ್ಥಳೀಯರಿಗೆ ಉದ್ಯೋಗ ನೀಡದ ಎಂಆರ್ಪಿಎಲ್: ಎಂಆರ್ಪಿಎಲ್ನಲ್ಲಿ ನೇಮಕಾತಿ ಪ್ರಕ್ರಿಯೆಯು ದೋಷಪೂರಿತವಾಗಿದೆ. ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಸರೋಜಿನಿ ಮಹಿಷಿ ವರದಿಯು ಕನ್ನಡಿಗರಿಗೆ ಶೇ 70 ಉದ್ಯೋಗಗಳನ್ನು ಸ್ಪಷ್ಟಪಡಿಸಿದೆ. ಆದರೆ ಈ ವರದಿಯ ಶಿಫಾರಸುಗಳನ್ನು ಎಂಆರ್ಪಿಎಲ್ ಉಲ್ಲಂಘಿಸಿದೆ.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಎಚ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.