ಶಿಷ್ಟಾಚಾರ ಯಾವುದೂ ಇಲ್ಲ, ಜನರಿಗೆ ನನ್ನ ಕಚೇರಿಯ ಬಾಗಿಲು ಸದಾ ತೆರೆದಿರುತ್ತದೆ: ಸ್ಪೀಕರ್ ಯು.ಟಿ.ಖಾದರ್
ಮಂಗಳೂರು, ಮೇ 25: ವಿಧಾನ ಸಭೆ ಪ್ರವೇಶಿಸಿದ ಶಾಸಕರಲ್ಲಿ ಹಲವು ಮಂದಿ ಯುವ ,ಪ್ರತಿಭಾವಂತರು ಇದ್ದಾರೆ. ಸದನದಲ್ಲಿ ಅಂತವರಿಗೆ ಮಾತನಾಡಲು ಹೆಚ್ಚು ಅವಕಾಶ ನೀಡುವುದರ ಮೂಲಕ ಅವರ ಪ್ರತಿಭಾ ವಿಕಸನಕ್ಕೆ ಒತ್ತು ನೀಡಲಾಗುವುದು ಎಂದು ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಸ್ಪೀಕರ್ ಆಗಿ ಅಧಿಕಾರ ಸ್ಪೀಕರಿಸಿದ ಬಳಿಕ ಮೊದಲ ಬಾರಿ ತವರಿಗೆ ಆಗಮಿಸಿದ ಅವರು ಗುರುವಾರ ಮಂಗಳೂರಿನಲ್ಲಿ ಕ್ಷೇತ್ರದ ಜನರನ್ನು ಅಭಿಮಾನಿಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಯುವ ಶಾಸಕರ ಪ್ರತಿಭಾ ವಿಕಸನಕ್ಕೆ ಒತ್ತು ನೀಡಿದರೆ ನಾಡಿನ ಪ್ರಗತಿಗೆ ಅನುಕೂಲವಾಗಬಹುದು. ನೂತನವಾಗಿ ವಿಧಾನ ಸಭೆ ಪ್ರವೇಶಿಸಿರುವ ಶಾಸಕರಿಗೆ ಶಾಸನ ಸಭೆಯಲ್ಲಿ ಅವರ ಜವಾಬ್ದಾರಿ, ಹಕ್ಕು, ಕರ್ತವ್ಯಗಳು, ಸದನದ ನಿಯಮ ಮತ್ತಿತರ ವಿಚಾರಗಳ ಬಗ್ಗೆ ಮೂರು ದಿನಗಳ ತರಬೇತಿ ಶಿಬಿರ ಮತ್ತು ಹಿರಿಯ ಸದಸ್ಯರಿಗೆ ಪುನಶ್ಚೇತನಾ ಕಾರ್ಯಾಗಾರವನ್ನು ನಡೆಸಲಾಗುವುದು ಎಂದು ಸ್ಪೀಕರ್ ಖಾದರ್ ತಿಳಿಸಿದರು.
'ಜನರ ಸಂಪರ್ಕಕ್ಕೆ ಅಡ್ಡಿ ಇಲ್ಲ': ತಾನು ಸ್ಪೀಕರ್ ಆಗಿದ್ದರೂ, ಜನ ಸಾಮಾನ್ಯರಿಗೆ ಮತ್ತು ತಮ್ಮ ಕ್ಷೇತ್ರದ ಜನತೆಗೆ ತಮ್ಮನ್ನು ಸಂಪರ್ಕಿಸಲು ಅಡ್ಡಿಯಾಗದು. ಬಡವರಿಗೆ, ನಿರ್ಗತಿಕರಿಗೆ ತಮ್ಮನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಲು ತಮ್ಮ ಕಚೇರಿಯ ಬಾಗಿಲು ಸದಾ ತೆರೆದಿರುತ್ತದೆ. ಶಿಷ್ಟಾಚಾರ ಯಾವುದೂ ಇಲ್ಲ, ಜನಸಾಮಾನ್ಯರ ಪ್ರೀತಿ, ವಿಶ್ವಾಸವೇ ಶಿಷ್ಟಾಚಾರ ಎಂದರು.
ಕ್ಷೇತ್ರದ ಜನರು ತಮ್ಮ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬಾರದಂತೆ ಎಚ್ಚರ ವಹಿಸುವೆ. ಜನರ ಒಡನಾಟದೊಂದಿಗೆ ಸ್ಪೀಕರ್ ಸ್ಥಾನದ ಘನತೆ ಗೌರವವನ್ನು ಉಳಿಸಲು ಶ್ರಮಿಸುತ್ತೇನೆ. ಕ್ಷೇತ್ರದ ಜನತೆ ಕೂಡಾ ಸಭಾಧ್ಯಕ್ಷತೆಯ ಪೀಠದ ಮಹತ್ವವನ್ನು ಅರಿತುಕೊಂಡು ಅದಕ್ಕೆ ಯಾವುದೇ ಚ್ಯುತಿ ಬಾರದಂತೆ ತಮ್ಮ ಜೊತೆ ವ್ಯವರಿಸುತ್ತಾರೆ. ತಮಗೆ ಪೂರ್ಣ ಸಹಕಾರ ನೀಡುತ್ತಾರೆ ಎಂಬ ಭರವಸೆ ತಮಗಿದೆ ಎಂದರು.
ಅನುಭವನದಲ್ಲಿ ಹಿರಿಯ: ಸ್ಪೀಕರ್ ಸ್ಥಾನಕ್ಕೆ ಹಿರಿಯರನ್ನು ಕುಳ್ಳಿರಿಸುತ್ತಾರೆ. ಆದರೆ ಕಿರಿಯರಾದ ತಮಗೆ ಹೇಗೆ ನೀಡಲಾಯಿತು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಪಕ್ಷದ ಹೈಕಮಾಂಡ್ ತೀರ್ಮಾನದಂತೆ ತಮ್ಮ ಆಯ್ಕೆ ನಡೆದಿದೆ. ನಾನು ವಯಸ್ಸಿನಲ್ಲಿ ಕಿರಿಯ ಇರಬಹುದು. ಆದರೆ ಅನುಭವನದಲ್ಲಿ ಹಿರಿಯ. ವಯಸ್ಸಿಗೆ ಮೀರಿದ ಅನುಭವನ್ನು ರಾಜಕೀಯ ಜೀವನದಲ್ಲಿ ಪಡೆದಿರುವುದಾಗಿ ಹೇಳಿದರು.
ತಮಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಕ್ಷೇತ್ರದ ಜನತೆ ಬೇಸರ ಮಾಡಬೇಕಿಲ್ಲ. ಸ್ಪೀಕರ್ ಸ್ಥಾನ ಮಂತ್ರಿ ಸ್ಥಾನಕ್ಕಿಂತ ದೊಡ್ಡದು, ತುಂಬಾ ಗೌರವಯುತ ಸ್ಥಾನ. ಒಬ್ಬ ಮಂತ್ರಿ ಒಂದು ಇಲಾಖೆಗೆ ಸೀಮಿತವಾಗಿರುತ್ತಾನೆ. ಆದರೆ ಸ್ಪೀಕರ್ ವ್ಯಾಪ್ತಿ ದೊಡ್ಡದು. ಅವರ ವ್ಯಾಪ್ತಿಗೆ ಸರಕಾರದ ಎಲ್ಲ ಇಲಾಖೆಗಳು ಒಳಪಟ್ಟಿರುತ್ತವೆ. ಸಚಿವರು , ಶಾಸಕರು ಸ್ಪೀಕರ್ ಮಾತಿಗೆ ಮನ್ನಣೆ ನೀಡುತ್ತಾರೆ. ಈ ಕಾರಣದಿಂದಾಗಿ ತಾನು ಸ್ಪೀಕರ್ ಆಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು ಯಾರು ಕೂಡಾ ಆತಂಕಪಡಬೇಕಿಲ್ಲ. ಕ್ಷೇತ್ರದ ಕೆಲಸಗಳು ಇನ್ನಷ್ಟು ಸುಲಭವಾಗಿ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.