ಎನ್ಒಸಿ ನೀಡಲು ಮಹಿಳೆಯನ್ನು ಅಲೆದಾಡಿಸಿದ ಅಧಿಕಾರಿ: ತರಾಟೆಗೆ ತೆಗೆದುಕೊಂಡ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಎನ್ಒಸಿ ನೀಡಲು ಸುಮಾರು 20 ದಿನಗಳಿಂದ ತಾಲೂಕು ಕಚೇರಿಗೆ ಅಲೆದಾಡಿಸುತ್ತಿದ್ದ ಅಧಿಕಾರಿ ಯನ್ನು ಶಾಸಕ ಅಶೋಕ್ ಕುಮಾರ್ ರೈ ತರಾಟೆಗೆತ್ತಿಕೊಂಡು ತಕ್ಷಣವೇ ನೀಡುವಂತೆ ಸೂಚನೆ ನೀಡಿದ ಘಟನೆ ಶುಕ್ರವಾರ ಪುತ್ತೂರು ತಾಲೂಕು ಕಚೇರಿಯಲ್ಲಿ ನಡೆದಿದೆ.
ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಎಂಬಲ್ಲಿನ ನಿವಾಸಿ ಪುಷ್ಪಾ ಎಂಬವರು ಮನೆ ನಿರ್ಮಾಣಕ್ಕಾಗಿ ಗೃಹಸಾಲ ಪಡೆಯಲು ಎನ್ಒಸಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ತಾಲೂಕು ಕಚೇರಿಯಲ್ಲಿ ಎನ್ಒಸಿ ನೀಡದೆ ಅವರನ್ನು ಸುಮಾರು 20 ದಿನಗಳಿಂದ ಸತಾಯಿಸಲಾಗುತ್ತಿತ್ತು. ಪುತ್ತೂರು ಮಿನಿ ವಿಧಾನಸಭೆಯಲ್ಲಿರುವ ಶಾಸಕರ ಕಚೇರಿ ವೀಕ್ಷಣೆಗೆ ಶಾಸಕರು ಬಂದಿದ್ದ ಸಂದರ್ಭ ಈ ಮಹಿಳೆ ತಮ್ಮ ನೋವನ್ನು ಶಾಸಕರಲ್ಲಿ ಹೇಳಿಕೊಂಡರು. ತಕ್ಷಣ ಶಾಸಕರು ಅಧಿಕಾರಿಯ ಕಚೇರಿಗೆ ತೆರಳಿ ದಾಖಲೆ ಸಹಿತ ಮಾಹಿತಿ ಪಡೆದುಕೊಂಡರು. ಇಂಥ ಕೆಲಸಗಳು ಇಂದಿಗೇ ಕೊನೆಯಾಗಬೇಕು. ಬಡವರಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು. ಮುಂದೆ ಇಂಥಹ ಘಟನೆ ನಡೆದಲ್ಲಿ ಸುಮ್ಮನೆ ಕೂರುವುದಿಲ್ಲ ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದರು.