‘ಚಿಣ್ಣರ ಚಾವಡಿ’ಯಿಂದ ಸಸಿಗಳ ವಿತರಣೆ
ಮಂಗಳೂರು, ಜೂ.4: ಪರಿಸರವನ್ನು ಜೋಪಾನವಾಗಿ ಕಾಪಾಡಬೇಕಾದ ಮನುಷ್ಯರು ಪರಿಸರವನ್ನೇ ಹಾಳು ಮಾಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ನೆಲ,ಜಲ, ಗಾಳಿ, ಗಿಡ, ಮರ, ಪ್ರಾಣಿ, ಪಕ್ಷಿ ಸಹಿತ ಪರಿಸರವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಮಾನವನ ಅಭಿವೃದ್ಧಿಯೂ ಆಗಬೇಕು. ಹಾಗಾಗಿ ಪರಿಸರ ಸ್ನೇಹಿ ಅಭಿವೃದ್ಧಿಯಾಗಿಸುವುದು ನಮ್ಮೆಲ್ಲರ ಹೊಣೆಯಾಗಬೇಕು ಎಂದು ಯೆನೆಪೋಯ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜೀವನ್ ರಾಜ್ ಕುತ್ತಾರ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ‘ಗಿಡ ಮರ ಬೆಳೆಸಿ, ಪರಿಸರ ಉಳಿಸಿ’ ಎಂಬ ಘೋಷಣೆಯೊಂದಿಗೆ ಚಿಣ್ಣರ ಚಾವಡಿ ಮಂಗಳೂರು ಇದರ ಆಶ್ರಯದಲ್ಲಿ ನಗರದ ಸಂತ ಅಲೋಶಿಯಸ್ ಹೈಸ್ಕೂಲ್ನ ಹೊರಾಂಗಣ ದಲ್ಲಿ ನಡೆದ ಸಸಿ ವಿತರಣಾ ಕಾರ್ಯಕ್ರಮ ಉದ್ಘಟಿಸಿ ಅವರು ಮಾತನಾಡಿದರು.
ಹಸಿರು ದಳದ ಸಂಯೋಜಕ ನಾಗರಾಜ್ ಬಜಾಲ್, ಚಿಣ್ಣರ ಚಾವಡಿ ಮಂಗಳೂರು ಇದರ ಸಂಚಾಲಕ ಸುನಿಲ್ ಕುಮಾರ್ ಬಜಾಲ್, ಸಾಮಾಜಿಕ ಕಾರ್ಯಕರ್ತೆ ಶೋಭಾ ಕೇಶವ್ ಪಡೀಲ್, ದಿಶಾ ರೀಟಾ ಡಿಸೋಜ ಮಾತನಾಡಿದರು.
ಈ ಸಂದರ್ಭ ಪತ್ರಕರ್ತ ಆರಿಫ್ ಪಡುಬಿದ್ರಿ, ವಕೀಲರಾದ ರಾಮಚಂದ್ರ ಬಬ್ಬುಕಟ್ಟೆ, ಶರಿಲ್ ಅರುಣ್ ಬಂಗೇರ, ಡಿವೈಎಫ್ಐ ದ.ಕ.ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್, ನವೀನ್ ಕೊಂಚಾಡಿ, ಪೋಷಕರಾದ ಅಶ್ವಿನಿ, ನವಾಝ್, ಚಂದ್ರಕಲಾ, ರೇಖಾ ಉಪಸ್ಥಿತರಿದ್ದರು.