ಮಂಗಳೂರಿನ ಮದರ್ ತೆರೇಸಾ ‘ಜುಡಿತ್ ಮಸ್ಕರೇನಸ್’
-

‘‘ಆಕೆಗೆ ಬಡಬಗ್ಗರೆಂದರೆ ಅತೀವ ಪ್ರೀತಿ. ತಮ್ಮ 84ರ ಹರೆಯಲ್ಲೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಕೆ. ಮದರ್ ತೆರೇಸಾ ಬೀದಿ ಬದಿಯಲ್ಲಿದ್ದ ಕುಷ್ಠ ರೋಗಿಗಳ ಆರೈಕೆ ಮಾಡಿದ್ದರೆ, ಈಕೆ ಕುಷ್ಠ ರೋಗಿಗಳ ಕಾಲನಿಯಲ್ಲಿ ಕಳೆದ ಸುಮಾರು 25 ವರ್ಷಗಳಿಂದ ಅಲ್ಲಿನ ನಿವಾಸಿಗಳಿಗೆ ಔಷಧಿಯ ಪೂರೈಕೆಯ ಜತೆಯಲ್ಲೇ ಅವರ ಅಗತ್ಯ ಬೇಡಿಕೆಗಳನ್ನು ಪೂರೈಸುವ ಮೂಲಕ ನಮ್ಮ ಪಾಲಿಗೆ ಮಂಗಳೂರಿನ ಮದರ್ ತೆರೇಸಾ ಆಗಿ ಗುರುತಿಸಿಕೊಂಡಿದ್ದಾರೆ’’.
ಇದು, ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು 80+ ಹರೆಯದಲ್ಲೂ ಪಾದರಸದಂತೆ ನಡೆದಾಡುತ್ತಾ, ಜಿಲ್ಲಾ ಸಾರ್ವಜನಿಕ ಸಭೆಗಳಲ್ಲಿ ಹಿರಿಯ ನಾಗರಿಕರು, ಮಹಿಳೆಯರು ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುತ್ತಿದ್ದ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮಹಾಪೌರರೂ ಆಗಿರುವ ಜುಡಿತ್ ಮಸ್ಕರೇನಸ್ ಬಗ್ಗೆ ಅವರ ಒಡನಾಡಿಯಾಗಿರುವ ಕಳೆದ 23 ವರ್ಷಗಳಿಂದ ಅವರ ಜತೆಗಿರುವ ಶ್ಯಾಮಲಾ ಅವರ ಹೆಮ್ಮೆಯ ನುಡಿ.
ಪತ್ರಕರ್ತೆಯಾಗಿ, ಸಂಪಾದಕಿಯಾಗಿ, ಶಿಕ್ಷಕಿಯಾಗಿ, ರಾಜಕಾರಣಿಯಾಗಿ, ಸಮಾಲೋಚಕಿಯಾಗಿ ಸಮಾಜದ ವಿವಿಧ ಸ್ತರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಅಪಾರ ಅನುಭವ ಹೊಂದಿರುವ ಇವರು, ಸಮಾಜ ಸೇವಕಿಯಾಗಿ ಜನಸಾಮಾನ್ಯರಿಂದ ಗುರುತಿಸಿಕೊಳ್ಳುವವರು ಜುಡಿತ್ ಮಸ್ಕರೇನಸ್. ಕುಷ್ಠ ರೋಗಿಗಳ ಪುನರ್ವಸತಿಗಾಗಿ 50ಕ್ಕೂ ಅಧಿಕ ಮನೆಗಳ್ನು ನಿರ್ಮಿಸಿ, ಅವರಿಗೆ ಸರಕಾರಿ ಹಾಗೂ ಇತರ ಉದ್ಯೋಗವನ್ನು ಕಲ್ಪಿಸುವಲ್ಲಿ ನೆರವಾಗಿರುವ ಮಹಾ ಮಾತೆ. ವರ್ಷಕ್ಕೆ ಸುಮಾರು 60ರಷ್ಟು ಮಂದಿ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸಿದಾಕೆ. ವೃದ್ದಾಪ್ಯ ವೇತನ, ವಿಧವಾ ವೇತನ, ವಿಕಲಚೇತನರಿಗೆ ಸಿಗುವ ಪ್ರೋತ್ಸಾಹ ಧನವನ್ನು ಅರ್ಹರಿಗೆ ದೊರಕಿಸಿಕೊಡುವ ಕಾರ್ಯದಲ್ಲೂ ಜುಡಿತ್ ತಮ್ಮನ್ನು ತೊಡಗಿಸಿಕೊಂಡವರು. ನಿರ್ಗತಿಕರಿಗೆ ಅಭಯ ಆಶ್ರಯ, ಪ್ರಶಾಂತ್ ನಿವಾಸ್, ಮದರ್ ತೆರೇಸಾ ಹೋಮ್, ಸಿಯಾನ್ ಆಶ್ರಮ, ಸೈಂಟ್ ಆ್ಯಂಟನಿ ಹೋಮ್ ಮೊದಲಾದ ಕಡೆ ವಸತಿ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ.
1931 ಡಿಸೆಂಬರ್ 22ರಂದು ಖ್ಯಾತ ಕೊಂಕಣಿ ಕವಿ, ಪತ್ರಿಕೋದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಅಲೋಶಿಯಸ್ ಐ. ಮಸ್ಕರೇನಸ್ ಮತ್ತು ಶಿಕ್ಷಕಿ ಮ್ಯಾಗ್ದಲಿನ್ ಎಂ. ಮಸ್ಕರೇನಸ್ ದಂಪತಿ ಪುತ್ರಿಯಾಗಿ ಜನಿಸಿದ ಜುಡಿತ್, ಕೊಡಿಯಾಲ್ಬೈಲ್ನ ಸೈಂಟ್ ಆನ್ನಿ ಕಪುಚಿನ್ ಫ್ರಿಯರಿಯ ಕರ್ನಾಟಕ ಫ್ರೆಟರ್ನಿಟಿ ಸದಸ್ಯರು. ಅವಿವಾಹಿತರಾಗಿದ್ದುಕೊಂಡು, ತಮ್ಮ ಜೀವನವನ್ನು ಸಮಾಜದ ದೀನ ದಲಿತರು, ನಿಮ್ನ ವರ್ಗದವರ ಕಲ್ಯಾಣಕ್ಕಾಗಿಯೇ ಮೀಸಲಿಟ್ಟಿದ್ದ ಜುಡಿತ್ರವರಿಗೆ ಮಕ್ಕಳೆಂದರೆ ಅಚ್ಚುಮೆಚ್ಚು. ಹಾಗಾಗಿಯೇ ಶಿಕ್ಷಕಿಯಾಗಿ ವೃತ್ತಿಯನ್ನು ಆರಂಭಿಸಿದ್ದರು.
ಕಳೆದ ನಾಲ್ಕು ತಿಂಗಳಿನಿಂದೀಚೆಗೆ ಅನಾರೋಗ್ಯದಿಂದಾಗಿ ಮಲ್ಲಿಕಟ್ಟೆಯ ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಾಜದಲ್ಲಿ ಬಡವರು, ನಿರ್ಲಕ್ಷಿತರು, ದೌರ್ಜನ್ಯಕ್ಕೊಳಗಾದವರ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ಇವರು, ಕುಷ್ಠ ರೋಗಿಗಳ ಬಗ್ಗೆ ವಿಶೇಷ ಆಸ್ತೆ ವಹಿಸಿದವರು. ನಿರ್ವಸಿತರು ಹಾಗೂ ಕುಷ್ಠರೋಗಿಗಳ ಸೇವೆಗೆಂದೇ ತಮ್ಮಂತೆಯೇ ಸಮಾನ ಮನಸ್ಕರ ತಂಡವೊಂದನ್ನು ಕಟ್ಟಿಕೊಂಡು ‘ಪ್ರೀತಿ ನೀತಿ ಟ್ರಸ್ಟ್’ ಹೆಸರಿನ ಸರಕಾರೇತರ ಸಂಸ್ಥೆಯೊಂದನ್ನು 1991ರ ಮಾರ್ಚ್ನಲ್ಲಿ ಹುಟ್ಟು ಹಾಕಿದ್ದರು. ಟ್ರಸ್ಟ್ನ ಅಧ್ಯಕ್ಷರಾಗಿದ್ದುಕೊಂಡು ಕಟೀಲಿನ ಐಕಳ, ಬಲ್ಲಣ ಹಾಗೂ ನಡುಗೋಡಿನ ಕುಷ್ಟರೋಗಿಗಳ ಕಾಲನಿಗಳಲ್ಲಿರುವ ಸುಮಾರು 30 ಕುಟುಂಬಗಳಿಗೆ ಈ ಟ್ರಸ್ಟ್ನ ಮೂಲಕ ಆಸರೆ- ನೆರವನ್ನು ಒದಗಿಸುತ್ತಿದ್ದಾರೆ. ಕುಷ್ಠ ರೋಗಿಗಳ ಪುನರ್ವಸತಿಗಾಗಿ ಸಹಕರಿಸುವ ಜತೆಗೆ ಅವರ ಜತೆ ಹಬ್ಬ ಹರಿದಿನಗಳನ್ನು ಆಚರಿಸುವ ಮೂಲಕ ಕುಷ್ಟ ರೋಗಿಗಳ ಮುಖಗಳಲ್ಲಿ ಮಂದಹಾಸ ಬೀರಲು ಈ ಟ್ರಸ್ಟ್ ಮೂಲಕ ಜುಡಿತ್ ಮಸ್ಕರೇನಸ್ ಸದಾ ಪ್ರಯತ್ನಿಸುತ್ತಿದ್ದಾರೆ.
ಮದ್ರಾಸ್ ಯುನಿವರ್ಸಿಟಿಯಿಂದ ಬಿಎ (ಗಣಿತ) ಪದವಿ ಹಾಗೂ ಬಿಟಿ ಪದವಿ ಪಡೆದುಕೊಂಡು ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಜುಡಿತ್ರವರು ಯುಎಸ್ಎಯಲ್ಲಿ ಸಮಾಜ ವಿಜ್ಞಾನ ಮತ್ತು ಸಮಾಜ ಕಾರ್ಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ನ್ಯಾಷನಲ್ ಟಾಟಾ ಸ್ಕಾಲರ್ಶಿಪ್ ಪಡೆದುಕೊಂಡವರು.
ಅಂತಾರಾಷ್ಟ್ರೀಯ- ರಾಷ್ಟ್ರೀಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವಿಕೆ.
♦ ರೋಮ್ನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಕ್ಯಾಥಲಿಕ್ ಮಹಿಳಾ ಸಮಾವೇಶದಲ್ಲಿ ಭಾರತೀಯ ಕ್ರೈಸ್ತ ಮಹಿಳೆಯರ ಪ್ರತಿನಿಧಿಯಾಗಿ ಭಾಗವಹಿಸಿದ ಹೆಮ್ಮೆಯನ್ನೂ ಹೊಂದಿದ್ದಾರೆ.
♦ 2005ರ ನವೆಂಬರ್ 24 ಮತ್ತು 25ರಲ್ಲಿ ಪಾಕಿಸ್ತಾನದ ಇಸ್ಲಮಾಬಾದ್ನಲ್ಲಿ ‘ರಾಜಕೀಯದ ಲಿಂಗ ಬೇಧ ಅನ್ವೇಷಣೆ’ (ಡಿಸ್ಕವರಿಂಗ್ ದಿ ಜೆಂಡರ್ ಫೇಸ್ ಆಫ್ ಪಾಲಿಟಿಕ್ಸ್) ಎಂಬ ವಿಷಯದ ಮೇಲೆ ಏಷ್ಯಾದಲ್ಲಿ ಮಹಿಳಾ ಮತ್ತು ರಾಜಕೀಯದ ಅಂತಾರಾಷ್ಟ್ರೀಯ ಸಮ್ಮೇಲನದಲ್ಲಿ ಭಾರತದ ನಾಲ್ಕು ಮಂದಿಯ ತಂಡದಲ್ಲಿ ಜುಡಿತ್ ಓರ್ವರಾಗಿ ಭಾಗವಹಿಸಿದ್ದರು.
♦ 2006ರ ಫೆಬ್ರವರಿ 12ರಿಂದ 15ವರೆಗೆ ಶ್ರೀಲಂಕಾದಲ್ಲಿ ‘ರಾಜಕೀಯ ಮೀಸಲಾತಿ ಮತ್ತು ಅದನ್ನು ಮೀರಿ ಲಿಂಗ ಬೇಧ’ ಕುರಿತಾದ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಮ್ಮೇಳನದಲ್ಲಿ ಕರ್ನಾಟಕವನ್ನು ಜುಡಿತ್ ಮಸ್ಕರೇನಸ್ ಪ್ರತಿನಿಧಿಸಿದರು.
♦ 2006ರ ಫೆಬ್ರವರಿ 24 ಮತ್ತು 25ರಂದು ಬೆಂಗಳೂರಿನಲ್ಲಿ ‘ಕರ್ನಾಟಕದಲ್ಲಿ ಎಡಿಬಿ ನೀತಿಗಳು ಮತ್ತು ಯೋಜನೆಗಳು’ ಎಂಬ ವಿಯದಲ್ಲಿ ನಡೆದ ರಾಜ್ಯ ಸಮಾಲೋಚನೆಯಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿರುವುದಲ್ಲದೆ, 2 ಗೋಷ್ಠಿಗಳನ್ನು ನಿರ್ವಹಿಸಿದ್ದರು.
ರಾಜಕೀಯ ಹಣಾಹಣಿ
♦ ಎಂಎಲ್ಎ ಚುನಾವಣೆಯಲ್ಲಿ ಜನತಾ ಪಾರ್ಟಿಯಿಂದ ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜುಡಿತ್, ಆಗ ಎಂಎಲ್ಎ ಆಗಿದ್ದ ಧನಂಜ ಕುಮಾರ್ರವರನ್ನು ಮೂರನೆ ಸ್ಥಾನಕ್ಕೆ ತಳ್ಳಿ ಆ ಚುನಾವಣೆಯಲ್ಲಿ 2 ಸ್ಥಾನವನ್ನು ಪಡೆದಿದ್ದರು. ಆ ಚುನಾವಣೆಯಲ್ಲಿ ಬ್ಲೇಸಿಯಸ್ ಡಿಸೋಜಾ ಶಾಸಕರಾಗಿ ಆಯ್ಕೆಯಾಗಿದ್ದರು. ಜನತೆಯ ಪಾಲಿಗೆ ಹೊಸ ಮುಖವಾಗಿದ್ದರೂ, ಯಾವುದೇ ಹಣ ಬಲ, ಕಾರ್ಯಕರ್ತರ ಬೆಂಬಲವೂ ಇಲ್ಲದೆ, ವಿಧಾನ ಸಭಾಚುನಾವಣೆಯಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಜುಡಿತ್ ರಾಜಕೀಯ ವಲಯದಲ್ಲಿ ಅಚ್ಚರಿಯನ್ನು ಹುಟ್ಟು ಹಾಕಿದ್ದರು. ವಿಶೇಷವೆಂದರೆ, ಅಂದಿನ ಜನತಾ ಪಾರ್ಟಿ (ಪ್ರಸಕ್ತ ಜನತಾದಳ - ಜಾತ್ಯತೀತ)ಯಲ್ಲಿ ಈವರೆಗೂ ಎಂಎಲ್ಎ ಚುನಾವಣೆಯಲ್ಲಿ ಅಂದು ಜುಡಿತ್ ಮಸ್ಕರೇನಸ್ ಪಡೆದ ಮತವನ್ನು ಮೀರಲು ಈವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ.
♦ ಮೂರು ಅವಧಿಗೆ ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಆಗಿ ಕಾರ್ಯ ನಿರ್ವಹಿಸಿರುವ ಜುಡಿತ್, ಎರಡು ಅವಧಿಗಳಲ್ಲಿ ಉಪ ಮೇಯರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಇತರ ಪ್ರಮುಖ ಹುದ್ದೆಗಳು
♦ ಹಲವಾರು ಸಾಮಾಜಿಕ ಸಂಘಟನೆಗಳು, ಸಮಿತಿಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಜುಡಿತ್, ಮಂಗಳೂರು ಕ್ಯಾಥೊಲಿಕ್ ಕೋ ಅಪರೇಟಿವ್ ಬ್ಯಾಂಕ್ ಲಿಮಿಟೆಡ್ನಲ್ಲಿ ಜನರಲ್ ಸೀಟ್ನಲ್ಲಿ ಐದು ಅವಧಿಗೆ ನಿರ್ದೇಶಕರಾಗಿ ಆಯ್ಕೆಯಾದವರು.
♦ ಅಭಯ ಆಶ್ರಯ (ರಿಜಿಸ್ಟರ್ಡ್) ಸಂಸ್ಥೆಯಲ್ಲಿ ಮೂರು ಅವಧಿಗೆ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದು, ಪ್ರಮುಸ್ತ ಆಡಳಿತ ಮಂಡಳಿಯ ಸದಸ್ಯೆಯಾಗಿದ್ದಾರೆ.
♦ದ.ಕ. ಪೋಸ್ಟಲ್ ಫಾರಂನಲ್ಲಿ 3 ಅವಧಿಗೆ ನಾಮನಿರ್ದೇಶಿತ ಸದಸ್ಯೆಯಾಗಿ ಕಾರ್ಯ ನಿರ್ವಹಣೆ.
♦ ಬೆಂಗಳೂರು ಪಿಯುಸಿ ಬೋರ್ಡ್ನಲ್ಲಿ ಮೂರು ಅವಧಿಗೆ ನಾಮನಿರ್ದೇಶಿತ ಸದಸ್ಯೆಯಾಗಿ ಕಾರ್ಯ ನಿರ್ವಹಣೆ.
♦ಸೌತ್ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಅಪರೇಟಿವ್ ಬ್ಯಾಂಕ್ನ ನಾಮನಿರ್ದೇಶಿತ ನಿರ್ದೇಶಕರು.
♦ಲ್ಯಾಂಪ್ ಸೊಸೈಟಿ (ರಿಜಿಸ್ಟರ್ಡ್)ಯ ನಿರ್ದೇಶಕಿ
♦ ಎಸ್.ಕೆ.ಸಿ.ಸಿ.ಡಬ್ಲು ಸ್ಟೋರ್ಸ್ ಮತ್ತು ಜನತಾ ಬಝಾರ್ನ ನಿರ್ದೇಶಕಿ.
ಅನುಭವ
♦ ಬೆಂಗಳೂರಿನ ಸೋಫಿಯಾ ಕೇಂಬ್ರಿಡ್ಜ್ ಸ್ಕೂಲ್ ಮತ್ತು ಕಪಿತಾನಿಯೊ ಜೂನಿಯರ್ ಕಾಲೇಜು ಮತ್ತು ಟ್ರೇನಿಂಗ್ ಇನ್ಸ್ಟಿಟ್ಯೂಟ್ನಲ್ಲಿ 22 ವರ್ಷಗಳ ಶಿಕ್ಷಕಿಯಾಗಿ ಸೇವೆ.
♦ ಪತ್ರಿಕೋದ್ಯಮದಲ್ಲಿ 30 ವರ್ಷಗಳ ಅನುಭವ: 5 ವರ್ಷಗಳ ಕಾಲ ಕೊಕಣಿ ಯುವ ಮಾಸಿಕ ‘ಯುವಕ್’ ನ ಸಂಪಾದಕಿಯಾಗಿ, ದೀಪಿಕಾ ಕನ್ನಡ ದ್ವೈ ಮಾಸಿಕದಲ್ಲಿ 15 ವರ್ಷಗಳ ಕಾಲ ಸಂಪಾದಕಿ ಮತ್ತು ಪ್ರಕಾಶಕಿಯಾಗಿ, ನಗರ ದೀಪಿಕಾ ಕನ್ನಡ ಮಾಸಿಕದ ಸಂಪಾದಕಿ ಮತ್ತು ಪ್ರಕಾಶಕಿಯಾಗಿ 15 ವರ್ಷಗಳ ಅನುಭವ ಜುಡಿತ್ರದ್ದು.
ನಿಸ್ವಾರ್ಥ ಸೇವೆಗೆ ಮಾದರಿ
ಅಪೂರ್ವ ಸಮಾಜಸೇವಕಿ ಜುಡಿತ್ ಮಸ್ಕರೇನಸ್.
ಸಮಾಜಸೇವೆ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಒಂದು ವ್ಯಕ್ತಿತ್ವ ಜುಡಿತ್ ಮಸ್ಕರೇಞಸ್. ಅವರೊಬ್ಬರು ಉತ್ತಮ ಸಮಾಜಸೇವಕಿ, ಶಿಕ್ಷಕಿ, ಮಾರ್ಗದರ್ಶಿ, ರಾಜಕಾರಣಿ, ಸಂಘಟಕಿ... ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಸಮಾಜಕ್ಕೆ ವಿಶಿಷ್ಟವಾದ ಕೊಡುಗೆಯನ್ನು ನೀಡಿದ ಸಾಧಕಿ. ಕುಷ್ಠರೋಗಿಗಳಿಗೆ ಆಶ್ರಯಧಾಮ ಪ್ರೀತಿ ನೀತಿ ಟ್ರಸ್ಟ್ ಮತ್ತು ಅಮಲು ವಿಸರ್ಜನ ಕೇಂದ್ರ ಲಿಂಕ್ ಡಿ ಅಡಿಕ್ಷನ್ ಸೆಂಟರ್ ನಲ್ಲಿ ಅವರೊಂದಿಗೆ ಸೇವೆಯಲ್ಲಿ ಭಾಗಿಯಾಗುತ್ತಿರುವ ನಾನು ಅವರ ಸಾಮಾಜಿಕ ಬದ್ಧತೆಯನ್ನು ಕಂಡು ಪರರ ಸೇವೆಯಲ್ಲೇ ಬದುಕಿನ ಸಾರ್ಥಕತೆಯನ್ನು ಕಂಡ ತ್ಯಾಗಜೀವಿ ಜುಡಿತ್ ಮಸ್ಕರೇಞಸ್. ಅವರ ಬದುಕು ಇನ್ನಷ್ಟು ಸಮಾಜಸೇವಕರ ಸೃಷ್ಟಿಗೆ ಪ್ರೇರಣೆಯಾಗಲಿ ಎಂದು ಆಶಿಸುತ್ತಾ ಅವರಿಗೆ ಮನದಾಳದ ಅಭಿಂದನೆಗಳನ್ನು ಸಲ್ಲಿಸುತ್ತಿದ್ದೇನೆ.
- ಅಬ್ದುಲ್ ರವೂಫ್ ಪುತ್ತಿಗೆ, ಸ್ಥಾಪಕಾಧ್ಯಕ್ಷರು, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಮಂಗಳೂರು
‘‘ ಜುಡಿತ್ ಮೇಡಂರವರು ನನಗೆ ಸುಮಾರು 25 ವರ್ಷಗಳಿಂದ ಅವರ ಪರಿಚಯ. ಲಿಂಕ್ ಡಿ ಎಡಿಕ್ಷನ್ ಸೆಂಟರ್ ಆರಂಭಿಸಿದಾಗನಿಂದ ಅವರೂ ಈ ಕೇಂದ್ರದ ಜತೆ ಸಂಪರ್ಕದಲ್ಲಿದ್ದು, ಸಕ್ರಿಯವಾಗಿ ತಮ್ಮಿಂದಾದ ಸಲಹೆ, ಸೇವಾ ಕಾರ್ಯದಲ್ಲಿ ಭಾಗವಹಿಸುತ್ತಿರುವ ಅಪರೂಪದ ಸಮಾಜ ಸೇವಕಿ. ಎಚ್ಐವಿ ಸೋಂಕಿತರು ತಯಾರಿಸುವ ಕರಕುಶಲ ವಸ್ತುಗಳನ್ನು ತಾವು ಹೋದಲ್ಲೆಲ್ಲಾ ಕೊಂಡೊಯ್ದು ಮಾರಾಟ ಮಾಡಿ ಆ ಹಣವನ್ನು ಸಂತ್ರಸ್ತರಿಗೆ ನೀಡುವುದು, ಉದ್ಯೋಗದ ನೆರವಿನ ಮೂವರ ಯಾವುದೇ ಜಾತಿ, ಧರ್ಮದ ಬೇಧವಿಲ್ಲದೆ ಬಡವರಿಗಾಗಿ ಮಿಡಿಯುವ ಅವರು ನಿಸ್ವಾರ್ಥ ಸೇವೆಗೆ ಮಾದರಿ. ಸಾರ್ವಜನಿಕರ ಸಮಸ್ಯೆಗಳಿಗೂ ಸ್ಪಂದಿಸುತ್ತಿದ್ದ ಅವರು ಟ್ರಾಫಿಕ್ ಅದಾಲತ್ಗಳಲ್ಲಿ ಭಾಗವಹಿಸುವುದಲ್ಲದೆ, ತಮ್ಮ ವಾರ್ಡ್ನಲ್ಲಿ ವಾರ್ಡ್ ಕಮಿಟಿಯ ರಚಿಸುವ ಮೂಲಕ ಗಮನ ಸೆಳೆದವರು. ಅವರಂತಹ ನಿಸ್ವಾರ್ಥ ಸೇವಕರು ಸಮಾಜಕ್ಕೆ ಅಗತ್ಯವಿದೆ .’’
- ಡಾ. ಸತೀಶ್ ರಾವ್, ಪ್ರೊಫೆಸರ್, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ. ದೇರಳಕಟ್ಟೆ.






‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.