ಕಥುವಾ: ಸಾಮೂಹಿಕ ಅತ್ಯಾಚಾರ, ಹತ್ಯೆ ವಿರುದ್ಧ ಬೃಹತ್ ಖಂಡನಾ ಸಭೆ
ಅನಿವಾಸಿ ಭಾರತೀಯ ಕಾಂಗ್ರೆಸ್ ಪಕ್ಷ ತಬೂಕ್ ಘಟಕ
ತಬೂಕ್, ಎ. 21: ಅನಿವಾಸಿ ಭಾರತೀಯ ಕಾಂಗ್ರೆಸ್ ಪಕ್ಷ ತಬೂಕ್ ಘಟಕದ ವತಿಯಿಂದ ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧ ಬೃಹತ್ ಖಂಡನಾ ಸಭೆ ತಬೂಕ್ ಘಟಕದ ಕಾರ್ಯಾಲಯದಲ್ಲಿ ನಡೆಯಿತು.
ತಬೂಕ್ ಘಟಕ ಅಧ್ಯಕ್ಷ ಉಮರ್ ವಲಚ್ಚಿಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಮ್ಲಾನ್ ಮದನಿ ಸಭೆಯ ನೇತೃತ್ವ ವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉಮರ್ ವಲಚ್ಚಿಲ್, ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಖಂಡಿಸುತ್ತಾ, ಈ ಪ್ರಕರಣಕ್ಕೆ ಕೇಂದ್ರ ಸರಕಾರ ಸಂಪೂರ್ಣ ಹೊಣೆ ಎಂದು ಆರೋಪ ಮಾಡಿದರು.
ಕೇಂದ್ರ ಸರ್ಕಾರ ಅಥವಾ ಬಿಜೆಪಿ ಪಕ್ಷದ ಯಾವುದೇ ಒಬ್ಬ ನಾಯಕ ಇದರ ಬಗ್ಗೆ ಮಾತನಾಡದೆ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಅಚ್ಛೆ ದಿನ್ ಬರಲಿದೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರ ನಡೆಸಿ, ಮಹಿಳೆಯರಿಗೆ ಮತ್ತು ಅಲ್ಪ ಸಂಖ್ಯಾತರಿಗೆ ರಕ್ಷಣೆ ಕೊಡುವಲ್ಲಿ ವಿಫಲರಾಗಿದ್ದಾರೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲರಾಗಿದ್ದಾರೆ ಎಂದು ದೂರಿದರು. ಮುಂದೆ ನಡೆಯುವ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ದೂರ ಇಟ್ಟು ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ತಬೂಕ್ ಘಟಕದ ಉಪಾಧ್ಯಕ್ಷ ಮಜೀದ್ ಬಿ.ಸಿ.ರೋಡ್, ಹುಸೈನ್ ಮುಕ್ವೆ, ಅಶ್ರಫ್ ಅಡ್ಡೂರ್, ಶೇಕ್ ಅಬ್ದುಲ್ ರಹ್ಮಾನ್ ಅಡ್ಡೂರ್, ನಿಯಾಝ್ ಬಜ್ಪೆ, ಉನೈಝ್ ಉಳ್ಳಾಲ, ನಝೀರ್ ಕರಾಯ ಹಾಗೂ ಇನ್ನಿತರ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.