ಕೇರಳ ಚಿನ್ನ ಕಳ್ಳಸಾಗಾಟ ಪ್ರಕರಣ: ದುಬೈ ಪೊಲೀಸರಿಂದ ಆರೋಪಿಯ ಬಂಧನ
ದುಬೈ,ಜು.19: ಯುಎಇನಿಂದ ತಿರುವನಂತಪುರದ ಯುಎಇ ದೂತವಾಸ ಕಚೇರಿಗೆ ಕಳುಹಿಸಲಾದ ರಾಜತಾಂತ್ರಿಕ ಬ್ಯಾಗೇಜ ನಲ್ಲಿ ಚಿನ್ನದ ಕಳ್ಳಸಾಗಣೆ ಮಾಡಿದ ಪ್ರಕರಣದ ಆರೋಪಿಗಳಲ್ಲೊಬ್ಬನಾದ ಫೈಸಲ್ ಫರೀದ್ ನನ್ನು ದುಬೈ ಪೊಲೀಸರು ರವಿವಾರ ವಶಕ್ಕೆ ತೆಗೆದುಕೊಂಡಿದ್ದಾರೆ.
ಮೂಲತಃ ತ್ರಿಶೂರು ಜಿಲ್ಲೆಯ ಕೈಪಮಂಗಲಂನ ನಿವಾಸಿಯಾದ ಫೈಸಲ್ ದುಬೈ ಪೊಲೀಸರ ಕಸ್ಟಡಿಯಲ್ಲಿರುವುದನ್ನು ಭಾರತದ ಕಸ್ಟಮ್ಸ್ ಅಧಿಕಾರಿಗಳು ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆಯೂ ದೃಢಪಡಿಸಿದೆ. ಯುಎಇನಲ್ಲಿ ಉದ್ಯಮಿಯಾಗಿರುವ ಫೈಸಲ್, ದುಬೈನ ಅಲ್ ರಶಿದಿಯಾದಲ್ಲಿ ವಾಸವಾಗಿದ್ದಾನೆ. ಆತನನ್ನು ಶುಕ್ರವಾರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಆರೋಪಿ ಫೈಸಲ್ ಯುಎಇನ ಕಾನ್ಸುಲೇಟ್ ಉಸ್ತುವಾರಿ ರಶೀದ್ ಖಾಮಿಸ್ ಅಲ್ಶೆಮೆಲ್ಲಿ ಅವರ ಹೆಸರಿನಲ್ಲಿ ಕಳುಹಿಸಿದ ಬ್ಯಾಗೇಜ್ನಲ್ಲಿ 30 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಾರೆನ್ನಲಾಗಿದೆ. ಯುಎಇ ಕಾನ್ಸುಲೇಟ್ ಮಾಜಿ ಉದ್ಯೋಗಿ ಸ್ವಪ್ನಾ ಸುರೇಶ್ ಹಾಗೂ ಸಂದೀಪ್ ನಾಯರ್ ಸೇರಿದಂತೆ ನಾಲ್ಕು ಮಂದಿಯನ್ನು ಈವರೆಗೆ ವಶಕ್ಕೆ ತೆಗೆದುಕೊಂಡಿದ್ದಾರೆ. ರಶೀದ್ ಖಾಮಿಸ್ ಅಲ್ಶೆಮೆಲ್ಲಿ ಯುಎಇಗೆ ವಾಪಸಾಗಿರುವುದಾಗಿ ತಿಳಿದುಬಂದಿದೆ.