ಬಹ್ರೈನ್ನಲ್ಲಿ ಭಾರತದ ವ್ಯಾಪಾರಿಯಿಂದ 75,000 ದೀನಾರ್ ವಂಚನೆ: ದೂರು
ಮನಾಮ, ನವೆಂಬರ್ 26: ಕೇರಳದ ವ್ಯಕ್ತಿಯೊಬ್ಬ ಬಹ್ರೈನ್ನಲ್ಲಿ ಹಲವಾರು ವ್ಯಾಪಾರಿ ಸಂಸ್ಥೆಗಳಿಗೆ ಟೋಪಿ ಹಾಕಿ ಪರಾರಿಯಾದ ಘಟನೆ ವರದಿಯಾಗಿದೆ. ಈತನ ವಿರುದ್ಧ ಮೋಸಕ್ಕೊಳಗಾದ ಸಂಸ್ಥೆಗಳು ದೂರು ನೀಡಿವೆ.. ತಿರುವನಂತಪುರಂನ ಅಬ್ದುಲ್ ಹಕೀಂ ಎಂಬ ವ್ಯಕ್ತಿ ವಿವಿಧ ಸಂಸ್ಥೆಗಳಿಗೆ ಮೋಸ ಮಾಡಿದ ವ್ಯಕ್ತಿಯಾಗಿದ್ದು, ಈತ ತಾನು ವ್ಯವಹಾರ ಮಾಡುತ್ತಿದ್ದ ಸಂಸ್ಥೆಗಳಿಗೆ 75,000 ದೀನಾರ್ ಬಾಕಿಉಳಿಸಿಕೊಂಡು ಊರಿಗೆ ಹೋದವನು ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ಅಬ್ದುಲ್ ಹಕೀಂ ಬಹ್ರೈನ್ನಲ್ಲಿ ಸಿಗರೇಟ್ ಇತ್ಯಾದಿ ವಸ್ತು ವಿತರಿಸುವ ವ್ಯವಹಾರ ನಡೆಸುತ್ತಿದ್ದ ಎಂದು ವರದಿ ತಿಳಿಸಿದೆ.
ಈಗ ವಂಚನೆಗುರಿಯಾದ ಸಂಸ್ಥೆಗಳಿಂದ ಕಳೆದ ಮೂರುವರ್ಷಗಳಿಂದ ವಸ್ತು ಖರೀದಿಸುತ್ತಾ ಬಂದಿದ್ದಾನೆ. ಆ ಮೂಲಕ ಆತ ಆ ಸಂಸ್ಥೆಗಳ ವಿಶ್ವಾಸವನ್ನು ಗಳಿಸಿಕೊಂಡಿದ್ದ. ಕಳೆದ ಸೆಪ್ಟಂಬರ್ ಹದಿನೆಂಟರಂದು ತಾಯಿ ನಿಧನರಾಗಿದ್ದಾರೆಂದು ಊರಿಗೆ ಹೋದವನು ಬಹ್ರೈನ್ಗೆ ಮರಳಿ ಬಂದಿಲ್ಲ. ಕಂಪೆನಿಗಳು ಫೋನ್ ಮಾಡಿದಾಗ ಮೊದಮೊದಲು ಫೋನ್ ಕರೆಯನ್ನು ಸ್ವೀಕರಿಸುತ್ತಿದ್ದ ಆತ ನಂತರ ಫೋನ್ ಕರೆಗೆ ಸ್ವೀಕರಿಸುವುದನ್ನು ನಿಲ್ಲಿಸಿದ್ದ. ಆನಂತರ ಆತನ ವಿರುದ್ಧ ವಂಚನೆಗೊಳಗಾದ ಎಲ್ಲ ಸಂಸ್ಥೆಗಳು ಬಹ್ರೈನ್ನ ಪೊಲೀಸ್ ಠಾಣೆ, ಕೋರ್ಟು, ನಾರ್ಕ್, ಭಾರತೀಯ ರಾಯಭಾರಿ ಕಚೇರಿಗಳಿಗೆ ದೂರು ನೀಡಿವೆ. ಕೇರಳದ ಮುಖ್ಯಮಂತ್ರಿಯ ಕಚೇರಿಗೂ ದೂರು ನೀಡಲಾಗಿದೆ. ಜೊತೆಗೆ ನೆಡುಮಂಙಾಡ್ ಕೋರ್ಟಿಗೆ ದೂರು ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟು ಪಾಂಙಟ್ ಪೊಲೀಸರಿಗೆ ಆತನನ್ನು ಪತ್ತೆ ಹಚ್ಚಿ ತನಿಖೆ ನಡೆಸಲು ಆದೇಶಿಸಿದೆ ಎಂದು ವರದಿ ತಿಳಿಸಿದೆ.