‘ರೇತ್ ಸಮಾಧಿ’ ಕೃತಿಗೆ ಜಾಗತಿಕ ಗರಿ
-

‘‘ಗೀತಾಂಜಲಿ ಗೆದ್ದ ಬೂಕರ್ ಪ್ರಶಸ್ತಿಯು ಪ್ರಶಸ್ತಿ ಪಡೆದ ಕೃತಿಗೆ ಅಥವಾ ಲೇಖಕರಿಗೆ ಹೆಚ್ಚಿನ ಮನ್ನಣೆ ನೀಡುವುದಷ್ಟೇ ಅಲ್ಲ, ಎಲ್ಲರೂ ಮೂಲ ಭಾಷೆಯ ಇನ್ನಷ್ಟು ಪುಸ್ತಕ ಅಥವಾ ಲೇಖಕರತ್ತ ಗಮನ ಹರಿಸಲು ಆರಂಭಿಸುತ್ತಾರೆ. ಹಿಂದಿ ಪುಸ್ತಕಗಳನ್ನು ಜಾಗತಿಕ ಮಟ್ಟದಲ್ಲಿ ಹುರುಪಿನಿಂದ ಪ್ರದರ್ಶಿಸಲು ಇದೊಂದು ದೊಡ್ಡ ಅವಕಾಶವಾಗಿದೆ’’ ಎಂದು ರಾಜ್ಕಮಲ್ ಪ್ರಕಾಶನದ ಸಂಪಾದಕ ಸತ್ಯಾನಂದ್ ನಿರುಪಮ್ ಹೇಳಿದ್ದಾರೆ.
ದಿಲ್ಲಿ ಮೂಲದ ಸಾಹಿತಿ ಗೀತಾಂಜಲಿ ಶ್ರೀ ಅವರ ‘ಟಾಂಬ್ ಆಫ್ ಸ್ಯಾಂಡ್’ (ಮರಳಿನ ಸಮಾಧಿ) ಕಾದಂಬರಿಗೆ 2022ನೇ ಸಾಲಿನ ಅಂತರ್ರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದ್ದು ಈ ಗೆಲುವು ಭಾರತೀಯ ಸಾಹಿತ್ಯದಲ್ಲಿ ಒಂದು ಮೈಲುಗಲ್ಲಾಗಿದೆ. ಯಾಕೆಂದರೆ ಇದು ಹಿಂದಿ ಮತ್ತು ಭಾರತೀಯ ಭಾಷೆಯ ಪುಸ್ತಕಕ್ಕೆ ದೊರೆತ ಪ್ರಪ್ರಥಮ ಬೂಕರ್ ಪ್ರಶಸ್ತಿಯಾಗಿದೆ. ಗೀತಾಂಜಲಿ ಶ್ರೀ ಹಿಂದಿಯಲ್ಲಿ ಬರೆದ ‘ರೇತ್ ಸಮಾಧಿ’ ಕೃತಿಯನ್ನು ಡೈಸಿ ರಾಕ್ವೆಲ್ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ‘‘ಇದು ತನಗೆ ಅನಿರೀಕ್ಷಿತ. ಬೂಕರ್ ಪ್ರಶಸ್ತಿ ಪಡೆಯತ್ತೇನೆ ಎಂದು ಕನಸಲ್ಲೂ ಯೋಚಿಸಿರಲಿಲ್ಲ. ಇದು ತನಗೆ ದೊರೆತ ಅತ್ಯುನ್ನತ ಮಟ್ಟದ ಮನ್ನಣೆಯಾಗಿದ್ದು ಇದನ್ನು ಸ್ವೀಕರಿಸಿದ್ದಕ್ಕೆ ಆಶ್ಚರ್ಯಚಕಿತಳಾಗಿದ್ದೇನೆ. ಸಂತೋಷ, ಗೌರವ ಮತ್ತು ವಿನಮ್ರತೆಯನ್ನು ಅನುಭವಿಸುತ್ತಿದ್ದೇನೆ’’ ಎಂದು ಗೀತಾಂಜಲಿ ಶ್ರೀ ಪ್ರತಿಕ್ರಿಯಿಸಿದ್ದಾರೆ. ನಾನು ಒಂದು ಭಾಷೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತೇನೆ ಮತ್ತು ಈ ಗುರುತಿಸುವಿಕೆಯು ಸಂಪೂರ್ಣ ಹಿಂದಿ ಸಾಹಿತ್ಯವನ್ನು ಮತ್ತು ನಿರ್ದಿಷ್ಟವಾಗಿ ಭಾರತೀಯ ಸಾಹಿತ್ಯವನ್ನು ಒಳಗೊಂಡಿದೆ. ಇನ್ನೂ ಆವಿಷ್ಕರಿಸಲಾಗದ ವಿಶಾಲವಾದ ಸಾಹಿತ್ಯ ಪ್ರಪಂಚವಿದೆ ಎಂಬ ಅಂಶದತ್ತ ಗಮನ ಸೆಳೆಯುತ್ತದೆ ಎಂದವರು ಹೇಳಿದ್ದಾರೆ. ಬ್ರಿಟನ್ ಅಥವಾ ಐರ್ಲ್ಯಾಂಡ್ನಲ್ಲಿ ಪ್ರಕಟವಾದ ಇಂಗ್ಲಿಷ್ (ಮೂಲ ಅಥವಾ ಅನುವಾದಿತ) ಸಾಹಿತ್ಯ ಕೃತಿಗೆ ಅಂತರ್ರಾಷ್ಟ್ರೀಯ ಬೂಕರ್ ಪ್ರಶಸ್ತಿ ನೀಡಲಾಗುತ್ತದೆ. ಗೀತಾಂಜಲಿ ಅವರ ಮೂಲಕೃತಿಯನ್ನು ರಾಜ್ಕಮಲ್ ಪ್ರಕಾಶನ ಪ್ರಕಟಿಸಿದರೆ, ಅನುವಾದಿತ ಕೃತಿಯನ್ನು ಬ್ರಿಟನ್ ಮೂಲದ ಟಿಲ್ಟೆಡ್ ಆಕ್ಸಿಸ್ ಪ್ರೆಸ್ ಪ್ರಕಟಿಸಿದೆ. ‘‘ಗೀತಾಂಜಲಿ ಗೆದ್ದ ಬೂಕರ್ ಪ್ರಶಸ್ತಿಯು ಪ್ರಶಸ್ತಿ ಪಡೆದ ಕೃತಿಗೆ ಅಥವಾ ಲೇಖಕರಿಗೆ ಹೆಚ್ಚಿನ ಮನ್ನಣೆ ನೀಡುವುದಷ್ಟೇ ಅಲ್ಲ, ಎಲ್ಲರೂ ಮೂಲ ಭಾಷೆಯ ಇನ್ನಷ್ಟು ಪುಸ್ತಕ ಅಥವಾ ಲೇಖಕರತ್ತ ಗಮನ ಹರಿಸಲು ಆರಂಭಿಸುತ್ತಾರೆ. ಹಿಂದಿ ಪುಸ್ತಕಗಳನ್ನು ಜಾಗತಿಕ ಮಟ್ಟದಲ್ಲಿ ಹುರುಪಿನಿಂದ ಪ್ರದರ್ಶಿಸಲು ಇದೊಂದು ದೊಡ್ಡ ಅವಕಾಶವಾಗಿದೆ’’ ಎಂದು ರಾಜ್ಕಮಲ್ ಪ್ರಕಾಶನದ ಸಂಪಾದಕ ಸತ್ಯಾನಂದ್ ನಿರುಪಮ್ ಹೇಳಿದ್ದಾರೆ.
ಈ ಮಧ್ಯೆ, ಗೀತಾಂಜಲಿಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿದೆ. ಹಿಂದಿಯ ಲೇಖಕಿ ಕೃಷ್ಣಾ ಸೋಬ್ತಿಯವರಿಗೆ ‘ರೇತ್ ಸಮಾಧಿ’ ಪುಸ್ತಕವನ್ನು ಅರ್ಪಣೆ ಮಾಡಲಾಗಿದೆ. ‘‘ಶೀರ್ಷಿಕೆಯ ಸಂಕೇತ ಮತ್ತು ಪುಸ್ತಕದ ಆಧ್ಯಾತ್ಮಿಕ ಭಾಷೆ ಪರಸ್ಪರ ಪ್ರಯೋಜನ ಪಡೆದಿದೆ’’ ಎಂದು ಕೃಷ್ಣಾ ಸೋಬ್ತಿ ಶ್ಲಾಘಿಸಿದ್ದಾರೆ. ‘‘ಕಾದಂಬರಿ ನಮ್ಮ ವಿವೇಕವನ್ನು ಶ್ರೀಮಂತಗೊಳಿಸುತ್ತದೆ ’’ಎಂದು ಲೇಖಕ ಮತ್ತು ಜೆಎನ್ಯು ಪ್ರೊಫೆಸರ್ ಪುರುಷೋತ್ತಮ್ ಅಗರ್ವಾಲ್ ಹೇಳಿದ್ದಾರೆ. ‘‘ಗೀತಾಂಜಲಿ ವಾಸ್ತವದ ಸಾಮಾನ್ಯ ಕಲ್ಪನೆಗಳನ್ನು ಕೆಡವಿದ್ದು ವಿಶಿಷ್ಟವಾದ ವಾಸ್ತವತೆಯನ್ನು ಸೃಷ್ಟಿಸಿದ್ದಾರೆ. ಈ ಕಾದಂಬರಿ ನಮ್ಮ ಸುತ್ತಲಿನ ವಾಸ್ತವಿಕತೆಯನ್ನು ಹೋಲುತ್ತದೆ’’ ಎಂದು ಹಿರಿಯ ಕವಿ ಅಶೋಕ್ ಬಾಜ್ಪಾಯ್ ಶ್ಲಾಘಿಸಿದ್ದಾರೆ. ಗೀತಾಂಜಲಿಗೆ ದೊರೆತ ಪುರಸ್ಕಾರವು ಹಿಂದಿ ಭಾಷೆಯ ಬರವಣಿಗೆಗೆ ಹೊಸ ಅರುಣೋದಯವಾಗಲಿದೆ ಎಂದು ಹಿಂದಿ ಸಾಹಿತಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿಂದಿಯು ಮಧ್ಯಾಹ್ನ, ಸಂಜೆ ಮತ್ತು ರಾತ್ರಿಯನ್ನು ಹೊಂದಿತ್ತು. ಆದರೆ ನಿಜವಾದ ಬೆಳಗ್ಗೆ ಈಗ ಆಗಮಿಸಿದೆ. ಜನಪ್ರಿಯ ಬರವಣಿಗೆಗಳಿಂದ ಹಿಂದಿ ಲೇಖಕರು ಸ್ವಲ್ಪಮಟ್ಟಿಗೆ ಗುರುತಿಸಿಕೊಳ್ಳಬಹುದು. ಆದರೆ ಗಂಭೀರ ಸಾಹಿತ್ಯದಿಂದ ಮಾತ್ರ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ. ಬೂಕರ್ ಪ್ರಶಸ್ತಿ ಇದಕ್ಕೆ ಇತ್ತೀಚಿನ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ದಿಲ್ಲಿ ವಿವಿಯ ಝಾಕಿರ್ ಹುಸೈನ್ ಕಾಲೇಜಿನ ಪ್ರೊಫೆಸರ್, ಲೇಖಕ-ಅನುವಾದಕ ಪ್ರಭಾತ್ ರಂಜನ್ ಹೇಳಿದ್ದಾರೆ. ಈ ಪ್ರಶಸ್ತಿ ಮಹಿಳಾ ಬರವಣಿಗೆ ಮತ್ತು ಭಾಷಾಂತರಕ್ಕೆ ದಕ್ಕಿದ ದೊಡ್ಡ ಸಾಧನೆ ಎಂದು ಶ್ಲಾಘಿಸಲಾಗಿದೆ. ‘‘ನನ್ನ ಅಭಿಪ್ರಾಯದ ಪ್ರಕಾರ, ಮಹಿಳಾ ಬರವಣಿಗೆ ಈ ಶತಮಾನದ ಪ್ರಮುಖ ಧ್ವನಿಯಾಗಲಿದೆ. ಯಾಕೆಂದರೆ ಅವರು(ಮಹಿಳಾ ಲೇಖಕಿಯರು) ವಾಸ್ತವದ ಬಗ್ಗೆ ಇನ್ನೂ ಅನ್ವೇಷಿಸದ ದೃಷ್ಟಿಕೋನವನ್ನು ಹೊಂದಿದ್ದಾರೆ ಮತ್ತು ಅವರ ಸಹಾನುಭೂತಿಯ ಆಳ, ಸೈದ್ಧಾಂತಿಕ ತೀಕ್ಷ್ಣತೆ, ಧೈರ್ಯವು ಅವರ ಕೃತಿಗಳಲ್ಲಿ ಪ್ರತಿಫಲಿಸುತ್ತದೆ’’ ಎಂದು ನಿರುಪಮ್ ಹೇಳುತ್ತಾರೆ. ನಿರ್ಮಲ್ ವರ್ಮ, ಇಂತೆಝಾರ್ ಹುಸೈನ್, ಶ್ರೀಲಾಲ್ ಶುಕ್ಲ, ವಿನೋದ್ ಕುಮಾರ್ ಶುಕ್ಲ ಸೇರಿದಂತೆ ಹಲವು ಸಾಹಿತಿಗಳು ತನ್ನ ಬರವಣಿಗೆಗೆ ಪ್ರೇರಣೆಯಾಗಿದ್ದಾರೆ.
ಫ್ಯೊದೊರ್ ದೊಸ್ತೋವೆಸ್ಕಿ, ಹೆಮಿಂಗ್ವೆ ಮತ್ತು ಗ್ಯಾಬ್ರಿಯಲ್ ಗಾರ್ಷಿಯಾ ಮಾರ್ಕ್ವೆಝ್ರ ಬರಹಗಳೂ ತನ್ನ ಮೇಲೆ ಪ್ರಭಾವ ಬೀರಿದೆ. ಮಹಾಭಾರತವು ತನ್ನ ಜೀವನವನ್ನು ಮಾರ್ಪಡಿಸಿದೆ. ಯಾಕೆಂದರೆ ಅದು ಎಲ್ಲಾ ರೀತಿಯ ಕತೆಗಳನ್ನು ಹೊಂದಿದ್ದು ಅದನ್ನು ಎಲ್ಲಾ ರೀತಿಯಲ್ಲಿಯೂ ನಿರೂಪಿಸಬಹುದು ಎಂದು ಗೀತಾಂಜಲಿ ಶ್ರೀ ಹೇಳಿದ್ದಾರೆ. ಬೂಕರ್ ಪ್ರಶಸ್ತಿಯ ಪಟ್ಟಿಯಲ್ಲಿ ಈ ಪುಸ್ತಕ ಸೇರ್ಪಡೆಗೊಂಡಂದಿನಿಂದ ಹಿಂದಿಯ ಬಗ್ಗೆ ಮೊದಲ ಬಾರಿಗೆ ಬಹಳಷ್ಟು ಬರೆಯಲಾಗಿದೆ. ಈ ಎಲ್ಲದಕ್ಕೂ ನಾನು ಮಾಧ್ಯಮವಾಗಿದ್ದೇನೆ ಎಂದು ಖುಷಿಪಟ್ಟಿದ್ದೇನೆ. ಆದರೆ ಅದೇ ಸಂದರ್ಭದಲ್ಲಿ, ನನ್ನ ಹಿಂದೆ ಮತ್ತು ಈ ಪುಸ್ತಕದ ಹಿಂದೆ ಹಿಂದಿ ಮತ್ತು ಇತರ ದಕ್ಷಿಣ ಏಶ್ಯ ಭಾಷೆಗಳ ಅತ್ಯಂತ ಶ್ರೀಮಂತ ಸಾಹಿತ್ಯ ಸಂಪ್ರದಾಯವಿದೆ. ಈ ಭಾಷೆಯ ಕೆಲವು ಅತ್ಯುತ್ತಮ ಲೇಖಕರನ್ನು ಪರಿಚಯ ಮಾಡಿಕೊಳ್ಳುವ ಮೂಲಕ ಜಾಗತಿಕ ಸಾಹಿತ್ಯ ಹೆಚ್ಚು ಶ್ರೀಮಂತವಾಗುತ್ತದೆ ಎಂದು ಪ್ರಶಸ್ತಿಗೆ ಆಯ್ಕೆಗೊಂಡ ಬಳಿಕ ಅವರು ಪ್ರತಿಕ್ರಿಯಿಸಿದ್ದಾರೆ. ಪುರಸ್ಕಾರ ಪಡೆದುದರಲ್ಲಿ ದುಃಖದ ತೃಪ್ತಿಯಿದೆ. ರೇತ್ ಸಮಾಧಿಯು ನಾವು ಬದುಕುತ್ತಿರುವ ವಿಶ್ವಕ್ಕೆ ಗೌರವವಾಗಿದೆ. ಸನ್ನಿಹಿತವಾದ ವಿನಾಶದ ಎದುರಲ್ಲಿ ಭರವಸೆ, ನಿರೀಕ್ಷೆಯನ್ನು ಹೆಚ್ಚಿಸುವ ಪ್ರಕಾಶಮಯ ಸ್ತ್ರೋತ್ರವಾಗಿದೆ. ಬೂಕರ್ ಮಾನ್ಯತೆಯಿಂದ ಈ ಕೃತಿ ಇನ್ನಷ್ಟು ಜನರನ್ನು ತಲುಪಲಿದೆ ಎಂದವರು ಹೇಳಿದ್ದಾರೆ. 80 ವರ್ಷದ ಮುತ್ತಜ್ಜಿಯ ಕತೆಯಿದು. ಹಾಸಿಗೆ ಬಿಟ್ಟೇಳಲು ಬಯಸದ ಅವರು ಅಂತಿಮವಾಗಿ ಹಾಸಿಗೆಯಿಂದ ಎದ್ದಾಗ ಹೊಸ ಬಾಲ್ಯಕಾಲವನ್ನು, ಎಲ್ಲಾ ನಿರ್ಬಂಧಗಳಿಂದ, ಸಾಮಾಜಿಕ ಕಟ್ಟುಪಾಡುಗಳಿಂದ ಮುಕ್ತವಾದ ಯೌವನವನ್ನು ಕಾಣುತ್ತಾಳೆ. ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ಹೊಸ ಸಂಬಂಧಗಳು ಮತ್ತು ಹೊಸ ಮನೋಭಾವಗಳು ಅಲ್ಲಿರುತ್ತವೆ. ಭಾರತ ಮತ್ತದರ ವಿಭಜನೆ ಬಗ್ಗೆ ಬೆರಗುಗೊಳಿಸುವ ಕಾದಂಬರಿ ಇದಾಗಿದೆ. ಅದರ ಮೋಡಿ ಮಾಡುವ ಮತ್ತು ತೀವ್ರವಾದ ಸಹಾನುಭೂತಿಯು ಯುವಕರು ಮತ್ತು ವಯಸ್ಸು, ಪುರುಷ ಮತ್ತು ಮಹಿಳೆ, ಕುಟುಂಬ ಮತ್ತು ದೇಶವನ್ನು ವಿವಿಧ ಚಿತ್ರದರ್ಶಕಗಳ ಜತೆ ನೇಯುತ್ತದೆ ಎಂದು ಪುರಸ್ಕಾರದ ತೀರ್ಪುಗಾರ ಫ್ರಾಂಕ್ ವೇಯ್ನಾ ಅಭಿಪ್ರಾಯಪಟ್ಟಿದ್ದಾರೆ.
ಅನುವಾದದ ಕಲೆ:
1957ರ ಜೂನ್ 13ರಂದು ಉತ್ತರಪ್ರದೇಶದ ಮಣಿಪುರಿಯಲ್ಲಿ ಜನಿಸಿದ ಗೀತಾಂಜಲಿ ಶ್ರೀ ಅವರ ತಂದೆ ಸರಕಾರಿ ಹುದ್ದೆಯಲ್ಲಿದ್ದ ಕಾರಣ ಅವರ ಆರಂಭಿಕ ಶಿಕ್ಷಣ ಉತ್ತರಪ್ರದೇಶದ ಹಲವು ಶಾಲೆಗಳಲ್ಲಿ ನಡೆಯಿತು. ದಿಲ್ಲಿಯ ಶ್ರೀರಾಮ್ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು ಜೆಎನ್ಯು ವಿವಿಯಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ‘ರೇತ್ ಸಮಾಧಿ’ ಬ್ರಿಟನ್ನಲ್ಲಿ ಪ್ರಕಟವಾದ ಅವರ ಮೊದಲ ಕೃತಿ. ಇದಕ್ಕೂ ಮುನ್ನ ‘ಮಾಯಿ’, ‘ಹಮಾರಾ ಶಹರ್ ಉಸ್ ಬರಾಸ್’, ‘ತಿರೋಹಿತ್’, ‘ಖಾಲಿ ಜಗ’ ಹಾಗೂ 4 ಸಣ್ಣ ಕತೆಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ. ಹಲವು ಇಂಗ್ಲಿಷ್ ಲೇಖನಗಳನ್ನೂ ಬರೆದಿದ್ದಾರೆ. ‘ಬಿಟ್ವೀನ್ ಟು ವರ್ಲ್ಡ್: ಆ್ಯಮ್ ಇಂಟಲೆಕ್ಚುವಲ್ ಬಯೊಗ್ರಫಿ ಆಫ್ ಪ್ರೇಮ್ಚಂದ್’ ಎಂಬ ಸಂಶೋಧನಾ ಪ್ರಬಂಧವನ್ನೂ ಬರೆದಿದ್ದಾರೆ. ಯುರೋಪಿಯನ್ ಭಾಷೆಗಳ ಸಹಿತ ಹಲವು ಭಾಷೆಗಳಿಗೆ ಅವರ ಕೃತಿಗಳು ಅನುವಾದಗೊಂಡಿವೆ. ‘‘ರೇತ್ ಸಮಾಧಿ ಒಂದು ಸಂಕೀರ್ಣ ಮತ್ತು ಶ್ರೀಮಂತ ಕಾದಂಬರಿಯಾಗಿದೆ. ಅದನ್ನು ಮತ್ತೆ ಮತ್ತೆ ಓದಿದ ನಂತರವೂ ಅದರ ಅದ್ಭುತ ಮತ್ತು ರೋಮಾಂಚನ ಗಾಢವಾಗುತ್ತಾ ಸಾಗುತ್ತದೆ. ನಾನೇ ಅದನ್ನು ಅನುವಾದಿಸಿದ್ದರಿಂದ ಯಾವುದೇ ಸಂದೇಹವಿಲ್ಲದೆ ಇದನ್ನು ಹೇಳಬಲ್ಲೆ. ಇದನ್ನು ಒಟ್ಟಾಗಿ ಗ್ರಹಿಸಲು ಸಮಯ ತೆಗೆದುಕೊಳ್ಳುತ್ತದೆ. ಯಾಕೆಂದರೆ ನಮ್ಮ ಸಣ್ಣ ಜಿಲೇಬಿಯಂತಹ ಮೆದುಳು ಈ ಕೆಲಸವನ್ನು ಏಕಾಂಗಿಯಾಗಿ ಪ್ರಕ್ರಿಯೆಗೊಳಿಸಲು ಸಾಧ್ಯವಿಲ್ಲ’’ ಎಂದು ಕಳೆದ ತಿಂಗಳು ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾದಂಬರಿಯ ಅನುವಾದಕ ಡೈಸಿ ರಾಕ್ವೆಲ್ ಹೇಳಿದ್ದಾರೆ. ವಾಕ್ಯಗಳ ನಡುವಿನ ಮೌನ ಮತ್ತು ವಿರಾಮಗಳು ಅವರ ಬರವಣಿಗೆಯಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ಪುಸ್ತಕದ ಹಿಂದಿ ಆವೃತ್ತಿಯಲ್ಲಿ ಅದು ಸ್ಪಷ್ಟವಾಗಿ ಮುಂಚೂಣಿಗೆ ಬಂದಿದೆ. ಆದರೆ ಅನುವಾದಕನಿಗೆ ಅದು ಸಾಧ್ಯವಾಗಲಿಲ್ಲ. ಆದರೂ ಅವರು ವಿರಾಮವನ್ನು ಇನ್ನಷ್ಟು ಮೌಖಿಕಗೊಳಿಸಿದರು ಎಂದು ಪ್ರಭಾತ್ ರಂಜನ್ ಹೇಳಿದ್ದಾರೆ.
ಕೃಪೆ: theprint.in
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.