'ವಕಾರೆ ಅಂಜುಮನ್', 'ವಕಾರೆ ಇಸ್ಲಾಮಿಯ' ಪ್ರಶಸ್ತಿ ಪ್ರದಾನ
ಭಟ್ಕಳ, ಜ.17: ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ಹಾಗೂ ಅಂಜುಮನ್ ಬಾಲಕರ ಪ್ರೌಢಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಅತ್ಯುನ್ನತ ’ವಕಾರೆ ಇಸ್ಲಾಮಿಯಾ’ ಹಾಗೂ ವಕಾರೆ ಅಂಜುಮನ್’ ಚಿನ್ನದ ಪದಕ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಜರಗಿತು.
ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿ ಮುಹಮ್ಮದ್ ಇಮ್ರಾನ್ ಜೀಲಾನಿ ಅಕ್ರಮಿ ಹಾಗೂ ಅಂಜುಮನ್ ಬಾಲಕರ ಪ್ರೌಢಶಾಲೆಯ ಅಮೀರ್ ಮಝಹರ್ ಮುಹಿದ್ದೀನ್ ಮುಅಲ್ಲಿಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಉರ್ದು ಅಕಾಡಮಿಯ ಅಧ್ಯಕ್ಷ ಡಾ.ಸಯ್ಯದ್ ಕದೀರ್ ನಾಝಿಮ್ ಸರ್ಗಿರೋ ಮಾತನಾಡಿ, ಶಿಕ್ಷಣ ಸೇವೆಯಲ್ಲಿ ಶತಮಾನಗಳನ್ನು ಪೂರೈಸಿದ ಅಂಜುಮನ್ ಸಂಸ್ಥೆ ಈ ನಾಡಿಗೆ ಅಪಾರ ಕೊಡುಗೆಯನ್ನು ನೀಡುತ್ತಿದೆ. ಶಿಕ್ಷಣವು ಯಶಸ್ಸನ್ನು ಗಳಿಸಲಿಕ್ಕಾಗಿ ಇರುವುದಲ್ಲ ಬದಲಿಗೆ ಅದು ಜ್ಞಾನವನ್ನು ಗಳಿಸಲು ಇರುವಂಥದ್ದು. ಜ್ಞಾನದಿಂದ ಹಣ ತನ್ನಿಂದತಾನೆ ಬರುತ್ತದೆ ಎಂದರು.
ಅಂಜುಮನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸೈಯದ್ ಅಬ್ದುಲ್ ರಹ್ಮಾನ್ ಬಾತಿನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉದ್ಯಮಿ ಖಮರ್ ಸಾದಾ, ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ರಹೀಮ್ ದಾಮೂದಿ, ಪ್ರೌಢಶಾಲೆಗಳ ಕಾರ್ಯದರ್ಶಿ ಅಬ್ದುಲ್ ವಹಾಬ್ ಕೋಲಾ, ಇಸ್ಮಾಯಿಲ್ ಸಿದ್ದೀಖಿ, ತಾಜುದ್ದೀನ್ ಅಸ್ಗರಿ ಮುಂತಾದವರು ಉಪಸ್ಥಿತರಿದ್ದರು.
ಇಸ್ಲಾಮಿ ಆಂಗ್ಲೋ ಉರ್ದು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಬ್ಬಿರ್ ಆಹ್ಮದ್ ದಫೇದಾರ್ ಹಾಗೂ ಅಂಜುಮನ್ ಬಾಲಕರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುಹಿದ್ದೀನ್ ಖತ್ತಾಲಿ ಪ್ರತ್ಯೇಕವಾಗಿ ವಾರ್ಷಿಕ ವರದಿ ವಾಚಿಸಿದರು. ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್ ಶಾಬಂದ್ರಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ರಷೀದ್ ಮಿರ್ಜಾನಿ ವಂದಿಸಿದರು.