ಸ್ವದೇಶಿ ಸಮಾಜ್ ಮತ್ತು ಮೇಕ್ ಇನ್ ಇಂಡಿಯಾ ಒಂದೇ ಅಲ್ಲ
ಮಣಿಪಾಲ, ಮಾ.11: ರವೀಂದ್ರನಾಥ ಟಾಗೋರ್ ಮತ್ತು ಮಹಾತ್ಮ ಗಾಂಧಿ ಹೇಳಿದ ಸ್ವದೇಶಿ ಸಮಾಜ್ ಮತ್ತು ಈಗಿನ ಸರಕಾರ ಹೇಳುತ್ತಿರುವ ಮೇಕ್ ಇನ್ ಇಂಡಿಯಾ ಒಂದೇ ಅಲ್ಲ. ಬೇರೆ ಬೇರೆ ಕಾಲದಲ್ಲಿ ಬಂದಿರುವ ಈ ಘೋಷಣೆಗಳ ನಡುವೆ ಯಾವುದೇ ಸಾಮ್ಯತೆ ಇಲ್ಲ ಎಂದು ಸ್ಕಾಟ್ಲೆಂಡ್ನ ಎಡಿನ್ಬರ್ಗ್ ನೇಪಿಯರ್ ವಿವಿಯ ಟಾಗೋರ್ ಅಧ್ಯಯನ ಕೇಂದ್ರ ನಿರ್ದೇಶಕಿ ಪ್ರೊ. ಬಾಶ್ಬಿ ್ರೆಷರ್ ಹೇಳಿದ್ದಾರೆ.
ಮಣಿಪಾಲದ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರ ಹಾಗೂ ಮಣಿಪಾಲ ವಿವಿಗಳ ವತಿಯಿಂದ ‘ಗಾಂಧಿ ಮತ್ತು ಟಾಗೋರ್: ಸತ್ಯ ಮತ್ತು ಪ್ರೀತಿಯ ಅಂಶಗಳು’ ಎಂಬ ವಿಷಯದ ಕುರಿತು ಇತ್ತೀಚೆಗೆ ಎಂಐಟಿಯ ಎಸಿ ಸೆಮಿನಾರ್ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ನೀಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ವಸಾಹತುಶಾಹಿ ವಿರುದ್ಧ ಟಾಗೋರ್ ಸ್ವದೇಶಿ ಸಮಾಜ್ ಘೋಷಣೆ ಮಾಡಿದ್ದರು. ಗಾಂಧೀಜಿ ಸ್ವದೇಶಿ ಹೋರಾಟ ನಡೆಸಿದ್ದರು. ಆದರೆ ಈಗ ಮೇಕ್ ಇನ್ ಇಂಡಿಯಾ ಅನ್ನುವುದು ಯಾವುದರ ವಿರುದ್ಧವೂ ಜನರನ್ನು ಜಾಗೃತಿಗೊಳಿಸುವುದಕ್ಕಾಗಿ ಮಾಡಿದ ಘೋಷಣೆಯಲ್ಲ. ಇದು ಕೇವಲ ಕಾರ್ಪೊರೇಟ್ ಜಗತ್ತಿನ ಒಳಿತಿಗಾಗಿ ಮಾಡಿರುವುದು ಎಂದವರು ವಿಶ್ಲೇಷಿಸಿದರು.
ಮಣಿಪಾಲ ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರ ನಿರ್ದೇಶಕ ಪ್ರೊ. ವರದೇಶ ಹಿರೇಗಂಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಣಿಪಾಲ ವಿವಿ ಟಾಗೋರ್ ಅಧ್ಯಯನ ಕೇಂದ್ರದ ಸಂಚಾ ಲಕಿ ಅನುಪಾ ಲೂವಿಸ್ ವಂದಿಸಿದರು.